ಬೆಂಗಳೂರಿಗೆ ಸೆ. 25ರಿಂದಲೇ ಬಂದ್ ಬಿಸಿ, ಸಂಚಾರ ಅಸ್ತವ್ಯಸ್ತ!
ಬೆಂಗಳೂರು, ಸೆ. 24: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಹೊರ ತಂದಿರುವ ಕೃಷಿ ವಿರೋಧಿ ವಿಧೇಯಕಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ವಿವಿಧ ರೈತ ಸಂಘಟನೆಗಳು ಕರ್ನಾಟಕದಲ್ಲಿ ಸೆಪ್ಟೆಂಬರ್ 28ರಂದು ಸಂಪೂರ್ಣ ಬಂದ್ ನಡೆಸಲಾಗುತ್ತದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಘೋಷಿಸಿದ್ದಾರೆ. ಆದರೆ, ಸೆ. 25ರಿಂದಲೇ ಬೆಂಗಳೂರಿಗೆ ಬಂದ್ ಬಿಸಿ ತಟ್ಟಲಿದೆ.
ಅಖಿಲ ಭಾರತ ಕಿಸಾನ್ ಸಂಘರ್ಷಣ ಸಮನ್ವಯ ಸಮಿತಿಯಡಿಯಲ್ಲಿ ಸೆ. 25ರಂದು ಭಾರತ್ ಬಂದ್ ನಡೆಯುತ್ತಿದ್ದು, ಆದರೆ, ಕರ್ನಾಟಕದಲ್ಲಿ ಸೆಪ್ಟೆಂಬರ್ 25ರಂದು ಇರುವುದಿಲ್ಲ, ಬದಲಿಗೆ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲಾಗುತ್ತದೆ. ಕನ್ನಡ ಪರ ಸಂಘಟನೆ, ಕಾರ್ಮಿಕರ ಸಂಘಟನೆಗಳ ಬೆಂಬಲ ಸಿಕ್ಕಿದೆ. ಎಲ್ಲಾ ನಾಗರಿಕರು ಬಂದ್ ಆಚರಣೆಗೆ ಸಹಕರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಸೆಪ್ಟೆಂಬರ್ 25ರಂದು ಭಾರತ್ ಬಂದ್ ಆಚರಣೆಗೆ ರೈತ ಸಂಘ ಕರೆ
ಕರ್ನಾಟಕ ಸರಕಾರ ಈಚೆಗೆ ಘೋಷಿಸಿರುವ ಕೃಷಿ ವಿರೋಧಿ ಭೂಸುಧಾರಣೆ ತಿದ್ದುಪಡಿ ಕಾಯ್ದೆ- 2020 ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ-2020, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ-2020 ಹಾಗೂ ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆ-2020 ಹಾಗೂ ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆ ಮುಂತಾದ ಸುಗ್ರೀವಾಜ್ಞೆಗಳನ್ನು ವಾಪಾಸು ಪಡೆಯಬೇಕು ಹಾಗೂ ಅವುಗಳನ್ನು ಶಾಸನಗಳನ್ನಾಗಿ ರೂಪಿಸುವ ಪ್ರಯತ್ನಗಳನ್ನು ತಕ್ಷಣ ಕೈಬಿಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಒತ್ತಾಯಿಸಲಾಗಿದೆ.
ರಸ್ತೆ ತಡೆ ಚಳವಳಿ
ಬೆಂಗಳೂರು-ಪುಣೆ, ಬೆಂಗಳೂರು- ಚೆನ್ನೈ, ಬೆಂಗಳೂರು-ಹೈದರಾಬಾದ್, ಬೆಂಗಳೂರು-ಮಂಗಳೂರು ಹೆದ್ದಾರಿಗಳು ಬಂದ್ ಆಗಲಿವೆ ಎಂದು ಹೇಳಿದರು. ಹೀಗಾಗಿ, ಬೆಂಗಳೂರಿನಿಂದ ಹೊರ ಹೋಗುವ ಎಲ್ಲಾ ಹೆದ್ದಾರಿಗಳು ಬೆಳಗ್ಗೆಯಿಂದ ಸಂಜೆ ತನಕ ಬಂದ್ ಆಗಲಿದ್ದು, ಬೆಂಗಳೂರಿನ ಸಂಚಾರ ಅಸ್ತವ್ಯಸ್ತಗೊಳ್ಳುವ ಸಾಧ್ಯತೆಯಿದೆ. ಇದಲ್ಲದೆ, ಪ್ರಮುಖ ನಗರಗಳಲ್ಲಿ ವಿವಿಧ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆಗಿಳಿಯಲಿವೆ. ಬೆಂಗಳೂರಿನಲ್ಲಿ ಮೈಸೂರ್ ಬ್ಯಾಂಕ್ ವೃತ್ತ ಹಾಗೂ ಫ್ರೀಡಂ ಬ್ಯಾಂಕಿನಲ್ಲಿ ಪ್ರತಿಭಟನೆಯಾಗಲಿವೆ.
ಭಾರತ್ ಬಂದ್ ಜಾರಿ
ಕೇಂದ್ರ ಸರಕಾರದ ರೈತ ಹಾಗೂ ಕೃಷಿಕೂಲಿಕಾರರು, ಕಸುಬುದಾರರ ಆಧಾರಿತ ಕೃಷಿ ವಿರೋಧಿಯಾದ ಕಾರ್ಪೊರೇಟ್ ಕಂಪನಿಗಳ ಪರವಾದ ಕೃಷಿ ಸಂಬಂಧಿತ ಬಿಲ್ಗಳನ್ನು ಕೂಡಲೇ ವಾಪಾಸು ಪಡೆಯಬೇಕು ಎಂದು ಆಗ್ರಹಿಸಿ ಸೆಪ್ಟಂಬರ್ 25 ರಂದು ಭಾರತ್ ಬಂದ್ ನಡೆಸಲು ವಿವಿಧ ರೈತ ಸಂಘಟನೆಗಳು ಕರೆ ನೀಡಿವೆ.
ಭಾರತೀಯ ಕಿಸಾನ್ ಯೂನಿಯನ್ (BKU), ಅಖಿಲ ಭಾರತ ರೈತರ ಒಕ್ಕೂಟ (AIFU), ಅಖಿಲ ಭಾರತ ಕಿಸಾನ್ ಸಂಘರ್ಷಣ ಸಮನ್ವಯ ಸಮಿತಿ (AIKSCC), ಅಖಿಲ ಭಾರತ ಕಿಸಾನ್ ಮಹಾಸಂಘ್(AIKM), ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್ , ಹರ್ಯಾಣದ ವಿವಿಧ ರೈತ ಸಂಘಟನೆಗಳು ಬಂದ್ ಬೆಂಬಲಿಸಿವೆ.
ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ
ಈ ಕಾಯ್ದೆಗಳಿಂದ ಬಾಧಿತರಾಗಲಿರುವ ಎಲ್ಲಾ ರೈತರು, ಕೃಷಿಕೂಲಿಕಾರರು, ಕಸುಬುದಾರರು, ಕೃಷಿ ಮಾರುಕಟ್ಟೆ ವರ್ತಕರು, ನೌಕರರು, ಹಾಲು ಉತ್ಪಾದಕರು, ಸಹಕಾರ ಸಂಘಗಳು, ಕೋಳಿ ಕುರಿ ಸಾಕಾಣೆದಾರರು, ಮಾಂಸ ವ್ಯಾಪಾರಿಗಳು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಮಾಲೀಕರು, ಕಾರ್ಮಿಕರು ಹಾಗೂ ಸಮಸ್ತ ಗ್ರಾಹಕ ಸಮುದಾಯ ಈ ಚಳವಳಿಯಲ್ಲಿ ಭಾಗಿಯಾಗಲು ಮನವಿ ಮಾಡಲಾಗಿದೆ.
ಕೇಂದ್ರ ಸರಕಾರದ ರೈತ ಹಾಗೂ ಕೃಷಿಕೂಲಿಕಾರರು, ಕಸುಬುದಾರರ ಆಧಾರಿತ ಕೃಷಿ ವಿರೋಧಿಯಾದ ಕಾರ್ಪೊರೇಟ್ ಕಂಪನಿಗಳ ಪರವಾದ ಕೃಷಿ ಸಂಬಂಧಿತ ಬಿಲ್ಗಳನ್ನು ಕೂಡಲೇ ವಾಪಾಸು ಪಡೆಯಬೇಕು ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಆಗ್ರಹಿಸಿದೆ.
Recommended Video
ವಿಪಕ್ಷಗಳ ಬೆಂಬಲ
ಕೃಷಿ ಮತ್ತು ಮಾರುಕಟ್ಟೆ ನಡುವಿನ ಸಹಕಾರಿ ಮನೋಭಾವಕ್ಕೆ ಕೇಂದ್ರ ಸರ್ಕಾರದ ಹೊಸ ನೀತಿಯು ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ. ಪ್ರದೇಶ ಕಾಂಗ್ರೆಸ್ ಸಮಿತಿಗಳಿಗೆ ಮಸೂದೆ ವಿರೋಧಿಸಿ ಪ್ರತಿಭಟನೆ ಆಯೋಜಿಸಲು ಎಐಸಿಸಿ ಸೂಚಿಸಿದೆ.
100ಕ್ಕೂ ಅಧಿಕ ಸಂಘಟನೆಗಳ ಬೆಂಬಲ ಸಿಕ್ಕಿದೆ ಎಂದು ಬಿಕೆಯು ಅಧ್ಯಕ್ಷ ರಾಕೇಶ್ ತಿಕಾಯಿತ್ ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ ಗ್ರಾಮ, ಪಟ್ಟಣ, ಹೆದ್ದಾರಿಗಳನ್ನು ಬಂದ್ ಮಾಡಲು ರೈತರು ಮುಂದಾಗಿದ್ದಾರೆ. ಹರ್ಯಾಣದಲ್ಲಿ ಸ್ಥಳೀಯ ಅಂಗಡಿ ಮುಂಗಟ್ಟುಗಳ ಮಾಲೀಕರು ಬಂದ್ ಆಚರಣೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.