ದೆಹಲಿ ರೈತರ ಕರೆಗೆ ಬೆಂಬಲ: ಮೈಸೂರಿನಲ್ಲಿ ರೈತರಿಂದ ಜಿಯೋ ಸಿಮ್ ತಿರಸ್ಕಾರ ಚಳುವಳಿ
ಮೈಸೂರು, ಜನವರಿ 9: ರೈತ ವಿರೋಧಿ ಮಸೂದೆಗಳನ್ನು ಜಾರಿಗೆ ತರಲು ಕಾರಣವಾಗಿರುವ ರಿಲಯನ್ಸ್ ಕಂಪನಿ ಕುತಂತ್ರಕ್ಕೆ ತಕ್ಕ ಪಾಠ ಕಲಿಸಲು, ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟಕರು ಕರೆ ನೀಡಿದ್ದಾರೆ.
ಅಂಬಾನಿ ಮಾಲೀಕತ್ವದ ರಿಲಿಯನ್ಸ್ ಕಂಪನಿಯ ಉತ್ಪನ್ನಗಳನ್ನು ತಿರಸ್ಕರಿಸಬೇಕು ಎನ್ನುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೂರಾರು ರೈತರು ರಿಲಯನ್ಸ್ ಕಂಪನಿಯ ಜಿಯೋ ಮೊಬೈಲ್ ಸಿಮ್ ಗಳನ್ನು ತಿರಸ್ಕರಿಸಿ ಬೇರೆ ಕಂಪನಿಗಳಿಗೆ ಬದಲಾಗಲು ತೀರ್ಮಾನಿಸಿ, ಜಿಯೋ ಸಿಮ್ ತಿರಸ್ಕಾರ ಚಳವಳಿ ನಡೆಸಿದರು.
ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಕೆ.ಎಸ್ ಭಗವಾನ್
ಕೇಂದ್ರ ಸರ್ಕಾರಕ್ಕೆ ಧಿಕ್ಕಾರ
ಮೈಸೂರು ನಗರದ ಅರಸು ರಸ್ತೆಯ ಜಿಯೋ ಕಚೇರಿಯ ಮುಂದೆ ತೆರಳಿದ್ದಾಗ, ಇದನ್ನು ಅರಿತ ಉದ್ಯೋಗಿಗಳು ಕಚೇರಿ ಬಾಗಿಲು ಮುಚ್ಚಿ ಹೋಗಿದ್ದರು, ರೈತರು ಅಲ್ಲೇ ಪ್ರತಿಭಟನೆ ನಡೆಸಿದರು.
ಗೋಮುಖ ವ್ಯಾಗ್ರ ಅಂಬಾನಿ, ಅದಾನಿಗಳಿಗೆ ಧಿಕ್ಕಾರ, ರೈತರ ಮರಣಶಾಸನ ಬರೆಯುತ್ತಿರುವ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಪ್ರತಿಭಟನಕಾರರ ನೇತೃತ್ವ ವಹಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ದೇಶದ ಪ್ರಧಾನಮಂತ್ರಿಗಳು ಸರ್ಕಾರದ ಎಲ್ಲ ಸಂಸ್ಥೆಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಂಬಾನಿ, ಅದಾನಿ ಒತ್ತಡಕ್ಕೆ ಮಣಿದಿದ್ದಾರೆ
ಈಗ ಕೃಷಿ ಕ್ಷೇತ್ರವನ್ನು ಶ್ರೀಮಂತರಿಗೆ ಮಾರಾಟ ಮಾಡಲು ಹವಣಿಸುತ್ತಿದ್ದು, ಎಪಿಎಂಸಿ, ಅಗತ್ಯ ವಸ್ತುಗಳ, ವಿದ್ಯುತ್ ಕಾಯ್ದೆ, ಗುತ್ತಿಗೆ ಕೃಷಿ ಕಾಯ್ದೆಗಳನ್ನು ಜಾರಿಗೆ ತರುವ ಸಂಚು ರೂಪಿಸಿದ್ದಾರೆ. ಅಂಬಾನಿ, ಅದಾನಿ ಒತ್ತಡಕ್ಕೆ ಮಣಿದಿದ್ದಾರೆ. ಹಣಬಲದಿಂದ ಶ್ರೀಮಂತರು ಏನು ಬೇಕಾದರೂ ಖರೀದಿಸಬಹುದು ಎಂದು ಭಾವಿಸಿ, ದುಡಿಯುವ ವರ್ಗಗಳ ನಾಶಮಾಡಲು ಮುಂದಾಗುತ್ತಿದ್ದಾರೆ, ಅದಕ್ಕೆ ತಕ್ಕ ಶಾಸ್ತಿ ಮಾಡಲು ಇಂಥ ಹೋರಾಟಗಳ ಅವಶ್ಯಕತೆ ಇದೆ ಎಂದರು.
ಬ್ರಿಟನ್ ಪ್ರಧಾನಿ ಕಾರ್ಯಕ್ರಮವನ್ನು ರದ್ದು
ಈಗ ಜಿಯೋ ಸಿಮ್ ಬಳಕೆದಾರ ರೈತರು ಬೇರೆ ಕಂಪನಿಗೆ ಬದಲಾಗಬೇಕು, ಮುಂದಿನ ಹಂತದಲ್ಲಿ ರಿಲಯನ್ಸ್ ಉತ್ಪನ್ನಗಳನ್ನು ಬಹಿಷ್ಕರಿಸಲು ರೈತರು ಸಿದ್ಧರಾಗಬೇಕು, ದೆಹಲಿಯಲ್ಲಿ ರೈತರು 48 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ. 54 ರೈತರ ಪ್ರಾಣ ಕಳೆದುಕೊಂಡಿದ್ದರೂ ಸರ್ಕಾರಕ್ಕೆ ಬುದ್ಧಿ ಬಂದಿಲ್ಲ. 8 ಸಭೆಗಳನ್ನು ನಡೆಸುವ ನಾಟಕವಾಡುತ್ತಿದೆ, ಪ್ರಧಾನಮಂತ್ರಿಗಳು ಪ್ರತಿಷ್ಠೆ ಬಿಟ್ಟು ರೈತರ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ರೈತರ ಹೋರಾಟದ ತೀವ್ರತೆಯ ಭೀತಿಯಿಂದ ಗಣರಾಜ್ಯೋತ್ಸವದ ಅತಿಥಿಯಾಗಿ ಬರಬೇಕಾಗಿದ್ದ ಬ್ರಿಟನ್ ಪ್ರಧಾನಿ, ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ, ಇದು ಗಂಭೀರವಾದ ವಿಚಾರ. ಇಲ್ಲದಿದ್ದರೆ 26ರ ಗಣರಾಜ್ಯದಂದು, ಕೇಂದ್ರ ಸರ್ಕಾರ ಭಾರಿ ಮುಖಭಂಗ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
26ರಂದು ಬೃಹತ್ ಮೆರವಣಿಗೆ ನಡೆಯಲಿದೆ
ದೆಹಲಿ ಹೋರಾಟವನ್ನು ಬೆಂಬಲಿಸಿ ರಾಜ್ಯದಲ್ಲಿಯೂ 26ರಂದು ಬೃಹತ್ ಮೆರವಣಿಗೆ ನಡೆಯಲಿದೆ. ಇಂದು 21 ರೈತರು ಜಿಯೋ ಸಿಮ್ ತಿರಸ್ಕರಿಸಿ ಬೇರೆ ಬೇರೆ ಕಂಪನಿಗಳಿಗೆ ಬದಲಾವಣೆ ಮಾಡಿಕೊಂಡರು. ಇಂದಿನ ಪ್ರತಿಭಟನೆ ಹತ್ತಳ್ಳಿ ದೇವರಾಜ್, ಪಿ.ಸೋಮಶೇಖರ್, ಕಿರಗಸೂರು ಶಂಕರ್, ಕುರುಬೂರು ಸಿದ್ದೇಶ್, ರವೀಂದ್ರ, ಕುಮಾರ್ ಬರಡನಪುರ ನಾಗರಾಜ್, ಅಂಬಳೆ ಮಹದೇಸ್ವಾಮಿ, ಮಂಜುನಾಥ್, ಪ್ರಸಾದ್ ನಾಯಕ, ಗಳಗನುಂಡಿ ವೆಂಕಟೇಶ್, ಅಪ್ಪಣ್ಣ, ಕಾಟೂರ ಶಿವಣ್ಣ, ಸಾತಗಳ್ಳಿ ಬಸವರಾಜ್, ಸುಕೇಶ್ ರಾಜ್, ಕುರುಬೂರು ಬಸವರಾಜ್, ಪಿ ರಾಜು, ಕೂಡನಹಳ್ಳಿ ರಾಜಣ್ಣ ಮುಂತಾದವರು ಇದ್ದರು.