ಸಂದರ್ಶನ; ನಮ್ಮ ಕಾಲಾವಧಿ ಮುಗಿಯುವ ಮುನ್ನ ಸಾಮೂಹಿಕ ನಾಯಕತ್ವ ಬರಲಿ: ಕುರುಬೂರು ಶಾಂತಕುಮಾರ್
ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಬೆಂಬಲವಾಗಿ ಕರ್ನಾಟಕ ರಾಜ್ಯದಲ್ಲೂ ರೈತ ಸಂಘಟನೆಗಳ ಒಕ್ಕೂಟಗಳು ರೂಪುಗೊಂಡವು. ಆ ಒಕ್ಕೂಟಗಳ ಹಿಂದೆ ರಾಜಕೀಯ ಪಕ್ಷಗಳ ಮತ್ತು ಕೆಲವು ವ್ಯಕ್ತಿಗಳ ಪ್ರಭಾವವೂ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ರೈತ ಹೋರಾಟಗಾರರ ಅದರಲ್ಲೂ ವಿಶೇಷವಾಗಿ ದೀರ್ಘಕಾಲಿಕ ಹೋರಾಟಗಳಲ್ಲಿ ತೊಡಗಿರುವ ಮುಖಂಡರನ್ನು ಒನ್ಇಂಡಿಯಾ ಕನ್ನಡ ಸಂದರ್ಶಿಸುತ್ತಾ ಬರುತ್ತಿದೆ.
ಇಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರಾದ ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರನ್ನು ಸಂಪರ್ಕಿಸಿದಾಗ, ಅವರು ಪ್ರಸ್ತುತ ಸಂದರ್ಭಕ್ಕೆ ಒಕ್ಕೂಟಗಳು ಹೇಗೆ ರೂಪುಗೊಂಡವು ಮತ್ತು ಅವುಗಳ ಆಯಸ್ಸಿನ ಬಗ್ಗೆ ಹೇಳಿದ್ದಾರಲ್ಲದೆ, ಮುಂದಿನ ದಿನಗಳಲ್ಲಿ ಸಾಮೂಹಿಕ ನಾಯಕತ್ವದ ಅನಿವಾರ್ಯತೆಯ ಬಗ್ಗೆ ಭಾವುಕವಾಗಿ ನುಡಿದಿದ್ದಾರೆ.
ರೈತ ಸಂಘಗಳ ಮೈತ್ರಿ ಮುಂದುವರೆಯುತ್ತದೆಯೋ?
1.ಇತ್ತೀಚೆಗೆ ಕರ್ನಾಟಕದಲ್ಲಿ ರೂಪುಗೊಂಡ ಐಕ್ಯ ಹೋರಾಟ /ಸಂಯುಕ್ತ ಹೋರಾಟದ ಅನಿವಾರ್ಯತೆ ನಿಮ್ಮ ಸಂಘಕ್ಕೆ ಇದೆಯೇ? ಈ ಮೈತ್ರಿ ಪ್ರಸ್ತುತ ಮೂರು ಕೃಷಿ ಕಾನೂನುಗಳ ವಿರುದ್ಧ ಹೋರಾಡಲಷ್ಟೇ ಸೀಮಿತವೋ, ಮೈತ್ರಿ ಮುಂದುವರೆಯುತ್ತದೆಯೋ?
ಕುರುಬೂರು ಶಾಂತಕುಮಾರ್: ಇವತ್ತಿನ ಜನ-ವಿರೋಧಿ ಸರ್ಕಾರವನ್ನು ಮಣಿಸಲು ಎಲ್ಲಾ ರೈತ ಸಂಘಟನೆಗಳು ವೈಮನಸ್ಸು ಮರೆತು ಒಟ್ಟಾಗಿ ಹೋರಾಟ ಮಾಡುವುದು ಅವಶ್ಯಕತೆ ಇದೆ. ಯಾವುದೇ ರೈತ ಸಂಘಟನೆಯಾಗಲಿ ರಾಜಕೀಯ ಪಕ್ಷಗಳಿಂದ ದೂರ ಇರುವುದು ಅತ್ಯವಶ್ಯಕ. ಕೇಂದ್ರದ ಮೂರು ಕೃಷಿ ಕಾಯ್ದೆಗಳು, ರಾಜ್ಯದ ಭೂ ಸುಧಾರಣೆ ಕಾಯ್ದೆ ರೈತರ ಪಾಲಿಗೆ ಮರಣಶಾಸನ. ಯಾರೇ ರೈತಪರ ಹೋರಾಟಗಾರರಾಗಿದ್ದರೂ ಈ ಕಾಯಿದೆಗಳನ್ನು ವಾಪಸ್ ಪಡೆಯುವ ತನಕ ಹೋರಾಟ ನಿಲ್ಲಿಸಬಾರದು. ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ, ಅಥವಾ ಸಂಯುಕ್ತ ಹೋರಾಟ ರಾಜಕೀಯ ಪಕ್ಷದ ಮರ್ಜಿಯಲ್ಲಿ ಹೋರಾಟ ನಡೆಸಬಾರದು ಎಂಬುದು ನಮ್ಮ ಆಸೆ. ಹಾಗಿದ್ದರೆ ಮಾತ್ರ ನಾವು ಈ ಸಂಘಟನೆಗಳ ಹೋರಾಟದಲ್ಲಿ ಭಾಗಿ ಆಗುತ್ತೇವೆ.
ಸಂದರ್ಶನ; ರೈತ ಚಳವಳಿ ರಾಜಕೀಯೇತರವಾಗಿರಬೇಕು: ಚುಕ್ಕಿ ನಂಜುಂಡಸ್ವಾಮಿ
ಅಹಿಂದ ಸಂಘಟನೆಯ ನೆರಳು ಇರುವ ಬಗ್ಗೆ ಮಾತುಗಳಿವೆ
2. ಐಕ್ಯ/ ಸಂಯುಕ್ತ ಹೋರಾಟದ ಹಿಂದೆ ಕಮ್ಯೂನಿಸ್ಟ್ ಪಕ್ಷ ಇರುವುದು ಸ್ಪಷ್ಟವಾಗಿ ಕಾಣುತ್ತಿದೆಯಲ್ಲಾ ? ಅದೇ ರೀತಿ ಅಹಿಂದಾ ಸಂಘಟನೆಯ ನೆರಳೂ ಇರುವ ಬಗ್ಗೆ ಮಾತುಗಳಿವೆಯಾಲ್ಲಾ? ಆ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?
ಕುರುಬೂರು ಶಾಂತಕುಮಾರ್: ಕಮ್ಯುನಿಸ್ಟ್ ಪಕ್ಷದ ನೆರಳಿನಲ್ಲಿ, ಕೆಲವು ಮುಖಂಡರ ಮರ್ಜಿಯಲ್ಲಿ ಜನ್ಮತಾಳಿರುವ ಸಂಯುಕ್ತ ಹೋರಾಟ ಮತ್ತು ಅಹಿಂದ ನೆರಳಿನ ಐಕ್ಯ ಹೋರಾಟ ದೀರ್ಘಾವಧಿಯ ಚಳುವಳಿಗಳ ಜೊತೆಯಾಗಿ ಪ್ರಸ್ತುತ issue ಗಳ ವಿರುದ್ಧ ಹೋರಾಟ ಮಾಡಲು ಆರಂಭವಾಗಿರುವ ಸಂಘಟನೆಗಳು. ಪ್ರಸ್ತುತ ಸಮಸ್ಯೆಗಳು ಬಗೆಹರಿದರೆ ಈ ಸಂಘಟನೆಗಳೂ ಅಂತ್ಯ ಕಾಣುತ್ತವೆ.
ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ನಿಮ್ಮ ಅಭಿಪ್ರಾಯ
3. ರೈತ ಚಳುವಳಿ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ/ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಕುರುಬೂರು ಶಾಂತಕುಮಾರ್: ರೈತ ಚಳುವಳಿಗಳು ಪ್ರಸ್ತುತ ಯಾವುದೇ ರಾಜಕೀಯ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಬಾರದು. ಹಾಗೆ ಮಾಡಿಕೊಂಡಲ್ಲಿ ರೈತ ಸಂಘ ಅಪವಿತ್ರವಾಗುತ್ತದೆ. ಇಂದಿನ ರಾಜಕೀಯ ಪಕ್ಷಗಳು ಜನರ ವಿಶ್ವಾಸವನ್ನು ಕಳೆದುಕೊಂಡಿವೆ ಎಂಬುದನ್ನು ಮರೆಯಬಾರದು.
ರೈತ ಸಂಘದಲ್ಲಿ ನಾಯಕತ್ವ ಕಿತ್ತಾಟ
4. ರಾಜ್ಯ ರೈತ ಸಂಘದಲ್ಲಿ ಮೊದಲಿನಿಂದಲೂ ನಾಯಕತ್ವದ ಕಿತ್ತಾಟವನ್ನು ನೋಡುತ್ತಲೇ ಇದ್ದೇವೆ. ಇದಕ್ಕೆ ಕೊನೆ ಇಲ್ಲವೇ ? ಎಲ್ಲಾ ರೈತ ಬಣಗಳೂ ಒಟ್ಟಾಗಲಿಕ್ಕೆ (ರಾಜಕೀಯೇತರವಾಗಿ) ಇರುವ ತೊಡಕುಗಳೇನು? ಮತ್ತು ನಿಮ್ಮ ಪ್ರಕಾರ ಅದಕ್ಕೆ ಪರಿಹಾರವೇನು?
ಕುರುಬೂರು ಶಾಂತಕುಮಾರ್: ಎಲ್ಲಾ ರೈತ ಸಂಘಟನೆಗಳು ಒಂದಾಗಿ ಹೋರಾಟ ಮಾಡಲು ಕಷ್ಟ ಎಂದು ಕಾಣುತ್ತಿದೆ. ರೈತ ಮುಖಂಡರಿಗೆ ನಾಯಕತ್ವದ ರುಚಿ ಮರೆಯಲಾಗದು. ಕೆಲವೊಂದು ಸಂದರ್ಭ ಕೆಲವು ಕಾಣದ ಕೈಗಳ ಒತ್ತಡವೂ ಇದಕ್ಕೆ ಕಾರಣವಾಗಿದೆ. ಇವತ್ತಿನ ರೈತರ ಭೀಕರ ಸಮಸ್ಯೆ ಇದ್ದಾಗಲೇ ಒಂದಾಗಿ ಹೋರಾಟ ಮಾಡುವ ಪ್ರಾಮಾಣಿಕ ಮನಸ್ಸು ಮೂಡಿಬರುತ್ತಿಲ್ಲ ಎಂಬುದನ್ನು ನಾನು ಕಾಣುತ್ತಿದ್ದೇನೆ. ನಮ್ಮ ಕಾಲಾವಧಿ ಮುಗಿಯುವ ಮುನ್ನವೇ ರೈತರ ಏಳಿಗೆಗಾಗಿ ಹೊಸ ನಾಯಕತ್ವ ಸೃಷ್ಟಿಸಲು ಸಾಮೂಹಿಕ ನಾಯಕತ್ವ ಖಂಡಿತವಾಗಲೂ ಒಟ್ಟಾಗಿ ಹೋರಾಟ ಮಾಡಲು ಒಳ್ಳೆಯ ಸಂದೇಶವಾಗಿದೆ.
ರೈತ ಹೋರಾಟದಲ್ಲಿ ರಾಜಕೀಯ ಪಕ್ಷಗಳನ್ನೇಕೆ ಮುನ್ನೆಲೆಗೆ ತರಲಾಗಿದೆ?
5.ದಿಲ್ಲಿಯ ರೈತ ಹೋರಾಟದಲ್ಲಿ ರಾಜಕೀಯ ಪಕ್ಷಗಳನ್ನು ಹತ್ತಿರದಲ್ಲಿಟ್ಟುಕೊಂಡಿಲ್ಲ. ಅವರ ಭಾಹ್ಯ ಬೆಂಬಲವನ್ನಷ್ಟೇ ಒಪ್ಪಿರುವುದನ್ನು ಕಾಣಬಹುದು. ರಾಜ್ಯದಲ್ಲೇಕೆ ಐಕ್ಯ /ಸಂಯುಕ್ತ ಹೆಸರಿನಲ್ಲಿ ರಾಜಕೀಯ ಪಕ್ಷಗಳನ್ನು ಮುನ್ನೆಲೆಗೆ ತರಲಾಗಿದೆ?
ಕುರುಬೂರು ಶಾಂತಕುಮಾರ್: ದಿಲ್ಲಿ ಹೋರಾಟ ಖಂಡಿತವಾಗಲೂ ಒಳ್ಳೆಯ ಬೆಳವಣಿಗೆ. ರಾಜಕೀಯ ಪಕ್ಷಗಳನ್ನು ದೂರ ಇಟ್ಟು ಹೊರಗಿನಿಂದ ಬೆಂಬಲ ಪಡೆಯುತ್ತಿರುವುದು ರೈತ ಕುಲಕ್ಕೆ ಗೌರವ ತರುವ ಕಾರ್ಯವಾಗಿದೆ. ಕರ್ನಾಟಕದಲ್ಲಿಯೂ ಅದೇ ಬೆಳವಣಿಗೆ ಆಗಬೇಕಾಗಿತ್ತು. ಆದರೆ ಕೆಲವರ ಪ್ರತಿಷ್ಠೆಯಿಂದ ಕಾರ್ಯಸಾಧು ಆಗಿಲ್ಲ. ಇಲ್ಲಿನ ಬೆಳವಣಿಗೆಗಳು ನನಗೂ ಕೆಲವು ಸಂದರ್ಭ ಮನಸ್ಸಿಗೆ ನೋವನ್ನುಂಟು ಮಾಡುತ್ತದೆ.
ರೈತ ಸಮಾವೇಶಗಳಲ್ಲಿ ತಮ್ಮ ಸಂಘ ಭಾಗವಹಿಸುತ್ತಿದೆಯೇ?
6. ಸಂಘಟಿತ ರೈತ ಹೋರಾಟದ ಬಗ್ಗೆ ತಮ್ಮ ನಿಲುವೇನು? ಇದೀಗ ಮಾರ್ಚ್ ಮಾಹೆಯಲ್ಲಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕರೆದಿರುವ ರೈತ ಸಮಾವೇಶಗಳಲ್ಲಿ ತಮ್ಮ ಸಂಘ ಭಾಗವಹಿಸುತ್ತಿದೆಯೇ?
ಕುರುಬೂರು ಶಾಂತಕುಮಾರ್: ಮಾರ್ಚ ತಿಂಗಳಲ್ಲಿ ರಾಷ್ಟ್ರಮಟ್ಟದ ರೈತ ಮುಖಂಡರು ಕರ್ನಾಟಕ ಪ್ರವಾಸ ಮಾಡುತ್ತಿದ್ದಾರೆ. ಈ ಕಾರ್ಯಕ್ರಮ ಆಯೋಜಕರು ಎಲ್ಲ ರೈತ ಮುಖಂಡರನ್ನು ಸಭೆ ಕರೆದು ಅವರ ಜೊತೆ ಚರ್ಚಿಸಿ ಕಾರ್ಯಕ್ರಮ ರೂಪಿಸುವುದು ಒಳ್ಳೆಯದು. ರೈತ ಸಮೂಹಕ್ಕೆ ಒಳ್ಳೆಯದಾಗುವುದಾದರೆ ನಾನು ನಮ್ಮ ಸಂಘಟನೆಯ ತತ್ವ-ಸಿದ್ಧಾಂತಗಳಿಗೆ ಭಂಗವಾಗಧ ರೀತಿಯಲ್ಲಿ ಯಾವುದೇ ರೈತ ಮುಖಂಡರ ಜೊತೆ ಕೈಜೋಡಿಸಲು ಸಹಕರಿಸಲು ಬದ್ಧನಿದ್ದೇನೆ.