MSP ಘೋಷಿಸಿದ ಕೇಂದ್ರ-“ಕಾಣ್ತಾ ಇದೆ ಕಾಣ್ತಾ ಇಲ್ಲಾ ಸ್ವಾಮಿ”
ಕೇಂದ್ರ ಸರ್ಕಾರ 17 ಮುಂಗಾರು ಬೆಳೆಗಳಿಗೆ (2020-21 ರ ಅವಧಿಗೆ) ಕನಿಷ್ಟ ಬೆಂಬಲ ಬೆಲೆ ಘೋಷಿಸಿದೆ(MSP). ಉತ್ಪಾದನಾ ವೆಚ್ಛದ ಮೇಲೆ ಶೇಕಡಾ 50 ರಿಂದ 83 ಶೇಕಡಾ ಹೆಚ್ಚಿನ ಲಾಭ ಕೊಡುತ್ತಿರುವುದಾಗಿ ಹೇಳಿಕೊಂಡಿದೆ.
ಈ ಮಾತು ಹೌದಾದರೆ ನೇರವಾಗಿ ಡಾ.ಎಂ.ಎಸ್ ಸ್ವಾಮಿನಾಥನ್ ವರದಿಯನ್ನು ಅನುಷ್ಟಾನಕ್ಕೆ ತಂದಿದ್ದೇವೆ ಎಂದೋ ! ಅಥವಾ ಅವರ ಶಿಫಾರಸ್ಸಿಗಿಂತ ಹೆಚ್ಚಿನ ಬೆಂಬಲ ಬೆಲೆ ನೀಡುತ್ತಿದ್ದೇವೆ ಎಂದೋ ಹೇಳಬಹುದಿತ್ತು.
ಮಿಡತೆ ದಾಳಿ; "ತಿನ್ನೋ ಅನ್ನಕ್ಕೆ ಮಣ್ಣಾಕಿ" ಬೆಳೆ ಉಳಿಸಿಕೊಳ್ಳಬಹುದಂತೆ...!
ಆದರೆ ಹಾಗೆ ಹೇಳಲಿಲ್ಲವಾದರೂ ಯೋಜನೆ ಮಾಡಿರುವ ಅಂಕಿ ಅಂಶಗಳನ್ನು ಹಾಗೆಯೇ ಕಾಣುವಂತೆ ನೋಡಿಕೊಂಡಿದ್ದಾರೆ. ತೇಜಸ್ವಿ ಬರಹಗಳಲ್ಲಿ ಬರುವ ಪ್ಯಾರಾ "ಕಾಣ್ತಾ ಇದೆ-ಕಾಣ್ತಾ ಇಲ್ಲಾ ಸಾಮಿ" ಎಂದು ಹೇಳಿದ ಹಾಗಾಯಿತು.
ವಾಸ್ತವದಲ್ಲಿ ಹೆಚ್ಚು ಮಾಡಿರುವ ಮೊತ್ತ ಕಳೆದ ವರ್ಷಕ್ಕಿಂತ ಶೇಕಡಾ 10 ರಷ್ಟೂ ಹೆಚ್ಚಿಸಿಲ್ಲ. (ಉದಾಹರಣೆ : ಭತ್ತ 2019: 1815 ರೂ. 2020-21 1868 ರೂ. ಅಂದರೆ ಶೇಕಡಾ 2.92 ಹೆಚ್ಚಳ. ಅದೇ ರೀತಿ ರಾಗಿ ಕಳೆದ ವರ್ಷ 3150 ರೂ ಇದ್ದದ್ದು ಈ ವರ್ಷ 3,295 ಇದು ಶೇಕಡಾ 4.60 ಷ್ಟು ಹೆಚ್ಚಳ. ಇದೇ ರೀತಿ ಎಲ್ಲ ಬೆಳೆಗಳನ್ನೂ ಲೆಕ್ಕ ಹಾಕಬಹುದಾಗಿದೆ)
ಸಾಮಾನ್ಯವಾಗಿ ಯಾವುದೇ ಬೆಳೆ ಉತ್ಪಾದನೆಯ ಅಂದಾಜು ವೆಚ್ಚ ವಾಸ್ತವದಲ್ಲಿ ಆಗುವ ಖರ್ಚಿಗಿಂತ ಕಡಿಮೆಯೇ ಇರುತ್ತದೆ. ರಾಜ್ಯದಿಂದ ರಾಜ್ಯಕ್ಕೆ ಏರುಪೇರಾಗುತ್ತದೆ. ಇವೆಲ್ಲವನ್ನೂ ಮನಗಂಡು ರಾಷ್ಟ್ರೀಯ ಅಂದಾಜು ತೆಗೆದುಕೊಳ್ಳುವುದು ಕೊಂಚ ಕಷ್ಟ ಸಾಧ್ಯವಾದ ಕೆಲಸ.
ಹಾಗೆ ತೆಗೆದುಕೊಂಡಾಗಲೂ ಅನೇಕ ಅಂಶಗಳು ಲೆಕ್ಕಕ್ಕಿಲ್ಲದೆ ಹೋಗಿಬಿಡುವ ಸಾಧ್ಯತೆಯೇ ಹೆಚ್ಚು. ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಒನ್ಇಂಡಿಯಾ, ಕೃಷಿ ಅರ್ಥಶಾಸ್ತ್ರಜ್ಞ ಹಾಗೂ ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರಾದ ಡಾ ಟಿ.ಎನ್. ಪ್ರಕಾಶ್ ಕಮ್ಮರಡಿ ಅವರನ್ನು ಮಾತನಾಡಿಸಿದೆ.
ಡಾ ಕಮ್ಮರಡಿ ಮಾತು:
"ಕರ್ನಾಟಕ ರೈತರು ಭರಿಸಿದ ವೆಚ್ಚದ ಲೆಕ್ಕಾಚಾರವನ್ನು ಪರಿಗಣಿಸಿದರೆ ಭತ್ತ, ಮುಸುಕಿನ ಜೋಳ, ಉದ್ದು ಹಾಗೂ ಹತ್ತಿಯ ಹೊರತಾಗಿ ಬಾಕಿ ಎಲ್ಲಾ ಬೆಳೆಗಳಲ್ಲಿ ಈ ಬೆಂಬಲ ಬೆಲೆ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಿದ್ದು, ರೈತರು ನಷ್ಟ ಅನುಭವಿಸುತ್ತಾರೆ.
ಉದಾಹರಣೆಗೆ ಕೃಷಿ ಬೆಲೆ ಆಯೋಗ ದ ಲೆಕ್ಕಾಚಾರದ ಪ್ರಕಾರ ನಮ್ಮ ರೈತರು ಪ್ರತಿ ಕ್ವಿಂಟಲ್ ರಾಗಿ ಬೆಳೆಯಲು (ಎಲ್ಲಾ ಬಾಪ್ತಿನ ಸಮಗ್ರ ವೆಚ್ಚ) 3483 ರೂ. ಇದೀಗ ಕೇಂದ್ರ ಸರ್ಕಾರ ಘೋಷಿಸಿರುವ ಎಂಎಸ್ ಪಿ 3295 ರೂ. ಅದೇ ರೀತಿ ಸಜ್ಜೆ ಉತ್ಪಾದನೆ ವೆಚ್ಚ 3521, ಎಂ ಎಸ್ ಪಿ 2150, ತೊಗರಿ ಉತ್ಪಾದನೆ ವೆಚ್ಚ 6533, ಎಂ ಎಸ್ ಪಿ 6000, ಹೆಸರು ಉತ್ಪಾದನೆ ವೆಚ್ಚ 8936, ಎಂ ಎಸ್ ಪಿ 7196, ಶೇಂಗಾ ಉತ್ಪಾದನೆ ವೆಚ್ಚ 6509, ಎಂ ಎಸ್ ಪಿ 5275.
ಪ್ರಸ್ತುತ ಕೋವಿಡ್ ಸಂದರ್ಭದಲ್ಲಾದರೂ ಕೇಂದ್ರ ಸರ್ಕಾರ ರೈತರ ಪರವಾದ ಬೆಂಬಲ ಬೆಲೆ ಘೋಷಿಸಬಹುದೆಂದು ಆಶಿಸಿದ್ದೆವು. ಅದಾಗಲಿಲ್ಲ. ಒಂದು ದೇಶ, ಒಂದೇ ಎಂ.ಎಸ್ ಪಿ. ಈ ದೇಶಕ್ಕೆ ಸರಿ ಬರುವುದಿಲ್ಲ." ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
(ಮುಂದುವರೆಯುವುದು)