ಜೂನ್ 5: ಸಂಪೂರ್ಣ ಕ್ರಾಂತಿ ದಿವಸ; ಕಾರಣ?
ನಾಳೆ, ಅಂದರೆ ಜೂನ್ 5ಕ್ಕೆ ಕೇಂದ್ರ ಸರ್ಕಾರ ಜನವಿರೋಧಿ ಮೂರು ಕೃಷಿ ಕಾಯಿದೆಗಳನ್ನು ಸುಗ್ರೀವಾಜ್ಞೆ ಮೂಲಕ ತಂದು ಒಂದು ವರ್ಷವಾಯಿತು.
ಕೊರೊನಾ ಸಂಕಷ್ಟದ ನಡುವೆ, ರೈತರು ಮತ್ತು ಜನಸಾಮಾನ್ಯರ ವಿರೋಧಗಳ ನಡುವೆಯೇ ಈ ಕಾನೂನುಗಳನ್ನು ಕೇಂದ್ರ ನಮ್ಮ ಮೇಲೆ ಹೇರಿತು. ಈ ಕಾಯಿದೆಗಳ ವಿರುದ್ಧ ಕಳೆದ ಆರು ತಿಂಗಳುಗಳಿಂದ ಬಹುದೊಡ್ಡ ರೈತ ಚಳುವಳಿ ದಿಲ್ಲಿಯ ಗಡಿಗಳಲ್ಲಿ ನಡೆಯುತ್ತಿದೆ.
ಈ ಚಳುವಳಿಯು ಸರ್ಕಾರ ಹೇಗೆ ಶೋಷಣೆ ಮಾಡುತ್ತಿದೆ ಮತ್ತು ಕಾರ್ಪೋರೇಟ್ ಕಂಪನಿಗಳ ಪರ ಇದೆ ಎಂಬುದನ್ನು ತೋರಿಸಿಕೊಟ್ಟಿದೆ. 1974ರಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಮುಂದಾಳತ್ವದಲ್ಲಿ ಇನ್ನೂ ಅನೇಕ ಮಹನೀಯರು ಅಂದಿನ ಸರ್ಕಾರದ ವಿರುದ್ಧ ದೇಶದಲ್ಲಿ ಬಹುದೊಡ್ಡ ಜನ ಚಳವಳಿ ನಡೆಸಿದ್ದರು.
1974 ಜೂನ್ 5 ರಂದು ಜಯಪ್ರಕಾಶ್ ನಾರಾಯಣ್ ಅವರು "ಸಂಪೂರ್ಣ ಕ್ರಾಂತಿ" ಎಂಬ ಘೋಷಣೆಯನ್ನು ಕೊಟ್ಟರು. ಅದರಿಂದ ಆಗಿನ ಕೇಂದ್ರ ಸರ್ಕಾರಕ್ಕೆ ಪೆಟ್ಟು ಬಿತ್ತು.
ಇದೀಗ 2021 ಜೂನ್ 5 ರಂದು ಸಂಯುಕ್ತ ಕಿಸಾನ್ ಮೋರ್ಚಾವು ಭಾರತೀಯ ಜನತಾ ಪಕ್ಷದ ಮತ್ತು ಅವರ ಮೈತ್ರಿ ಪಕ್ಷಗಳ ನಾಯಕರು ಮನೆ ಹಾಗೂ ಕಚೇರಿಗಳ ಮುಂದೆ ಮೂರು ಕೃಷಿ ಕಾಯಿದೆಗಳನ್ನು ಸುಡುವ ಮೂಲಕ "ಸಂಪೂರ್ಣ ಕ್ರಾಂತಿ ದಿವಸ" ಆಚರಿಸುತ್ತಿದೆ.
ಈ ನಾಯಕರುಗಳ ಅನುಪಸ್ಥಿತಿ ಇದ್ದಲ್ಲಿ ಆಯಾ ಜಿಲ್ಲಾ ತಾಲ್ಲೂಕು ಕಚೇರಿಗಳ ಮುಂದೆ ಕಾಯಿದೆಗಳನ್ನು ಸುಡಲಾಗುವುದು. ಈ ಚಳವಳಿಯು ಸಂಪೂರ್ಣ ಅಹಿಂಸೆಯಿಂದ ಕೂಡಿರುತ್ತದೆ, ಜೊತೆಗೆ ಈ ಕಾಯಿದೆಗಳು ದೇಶದ ಜನತೆಗೆ ಬೇಡವೆಂಬ ಸ್ಪಷ್ಟ ಸಂದೇಶ ಮತ್ತು ಎಚ್ಚರಿಕೆಯನ್ನು ಕೇಂದ್ರಕ್ಕೆ ನೀಡುತ್ತದೆ.