ಇಳಿಕೆಯಾಗದ ಈರುಳ್ಳಿ ಬೆಲೆ: ರಫ್ತು ನಿಷೇಧ ಮುಂದುವರಿಕೆಗೆ ನಿರ್ಧಾರ
ಮುಂಬೈ, ನವೆಂಬರ್ 20: ಮಳೆಯಿಂದ ಅಪಾರ ಪ್ರಮಾಣದಲ್ಲಿ ಈರುಳ್ಳಿ ಬೆಳೆ ಹಾನಿಯಾಗಿರುವುದರಿಂದ ಪೂರೈಕೆಯಲ್ಲಿ ಕೊರತೆಯುಂಟಾಗಿ ಬೆಲೆ ಹೆಚ್ಚಳವಾಗಿದೆ. ಜನಸಾಮಾನ್ಯರಿಗೆ ಬೆಲೆ ಏರಿಕೆಯ ಹೊಡೆತ ಹೆಚ್ಚು ತಟ್ಟದಂತೆ ಕೇಂದ್ರ ಸರ್ಕಾರ ಈರುಳ್ಳಿ ರಫ್ತು ಮೇಲಿನ ನಿಷೇಧವನ್ನು ಫೆಬ್ರವರಿವರೆಗೂ ವಿಸ್ತರಿಸುವ ಸಾಧ್ಯತೆ ಇದೆ.
ಮಳೆಯಿಂದ ಬೆಳೆ ಹಾನಿಯಾಗಿದೆ. ಹೀಗಾಗಿ ಬೇಸಿಗೆ ಕಾಲದ ಬೆಳೆ ಬಿತ್ತನೆ ಮತ್ತು ಕೊಯ್ಲು ವಿಳಂಬವಾಗಲಿದೆ. ಈ ಹೊರೆಯನ್ನು ತಡೆದುಕೊಳ್ಳಲು ರಫ್ತು ನಿರ್ಬಂಧವನ್ನು ಮುಂದುವರಿಸಬಹುದು ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲಾಸು ಮಾಡಿದ ಈರುಳ್ಳಿ; ಚಿಂತೆ ಬಿಡಿಸಿತು ಸೀಗೆಣಸು
ಜಗತ್ತಿನ ಅತಿದೊಡ್ಡ ಈರುಳ್ಳಿ ರಫ್ತುದಾರ ದೇಶವಾಗಿರುವ ಭಾರತ, ಏಷ್ಯಾದಲ್ಲಿನ ಈರುಳ್ಳಿ ದರವು ಏರಿಕೆಯಾಗುತ್ತಿರುವುದರಿಂದ ವಿದೇಶಿ ಮಾರುಕಟ್ಟೆಯಲ್ಲಿ ತನ್ನ ಬೆಳೆ ಮಾರಾಟವನ್ನು ನಿಷೇಧಿಸಿದೆ. ಇದರಿಂದ ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಆಮದುದಾರರು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಇತರೆ ಮೂಲಗಳನ್ನು ಅವಲಂಬಿಸಬೇಕಾಗಿದೆ. ಆದರೆ ಇಡೀ ಭಾರತದ ಪೂರೈಕೆಯನ್ನು ಬೇರೆ ದೇಶಗಳು ನೀಡಲಾರವು. ಹೀಗಾಗಿ ಭಾರತದ ರಫ್ತು ಮಾರುಕಟ್ಟೆ ಬಾಗಿಲು ತೆರೆಯುವ ದಿನಗಳಿಗಾಗಿ ಈ ದೇಶಗಳು ಕಾಯುವಂತಾಗಿದೆ.
ಮಹಾರಾಷ್ಟ್ರದಲ್ಲಿ ಭಾರಿ ಹಾನಿ
ಈರುಳ್ಳಿ ಉತ್ಪಾದನೆಯಲ್ಲಿ ತೀವ್ರ ಕುಸಿತ ಉಂಟಾಗಿದ್ದರಿಂದ ದೇಶಿ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಈರುಳ್ಳಿ ಬೆಲೆ 100 ರೂ. ಮುಟ್ಟಿತ್ತು. ಇದರಿಂದ ಬೆಲೆ ನಿಯಂತ್ರಿಸಲು ಹಾಗೂ ಬೇಡಿಕೆಗೆ ಅಗತ್ಯವಾದ ಈರುಳ್ಳಿ ಪೂರೈಸಲು ಸೆಪ್ಟೆಂಬರ್ನಲ್ಲಿ ಈರುಳ್ಳಿ ರಫ್ತಿನ ಮೇಲೆ ನಿಷೇಧ ಹೇರಲಾಗಿತ್ತು. ಆದರೂ ಭಾರಿ ಮಳೆ ಮತ್ತು ಪ್ರವಾಹದ ಬಳಿಕ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಈರುಳ್ಳಿ ಸರಬರಾಜು ಸೀಮಿತಗೊಂಡಿರುವುದರಿಂದ ಈರುಳ್ಳಿ ಬೆಲೆ ಗಗನಕ್ಕೇರಿದೆ. ಮುಖ್ಯವಾಗಿ ದೇಶದ ಅತಿ ಹೆಚ್ಚು ಈರುಳ್ಳಿ ಉತ್ಪಾದಕ ರಾಜ್ಯವಾದ ಮಹಾರಾಷ್ಟ್ರದಲ್ಲಿ ಅಪಾರ ಬೆಳೆ ಹಾನಿ ಸಂಭವಿಸಿದೆ.
ಹೋಲ್ಸೇಲ್ ಈರುಳ್ಳಿ 40 ರೂ.
ಹೋಲ್ಸೇಲ್ ಈರುಳ್ಳಿ ದರವು ಕೆ.ಜಿಗೆ 40 ರೂ.ಗಳಷ್ಟಿದೆ. ಈ ತಿಂಗಳ ಆರಂಭದಲ್ಲಿ ಇದು 55 ರೂ.ದಷ್ಟಿತ್ತು. ಈ ಮೊತ್ತವು ಕಳೆದ ಆರು ವರ್ಷಗಳಲ್ಲಿಯೇ ಅತ್ಯಧಿಕವಾಗಿತ್ತು ಎಂದು ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ತೋಟಗಾರಿಕಾ ಸಂಶೋಧನಾ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ವರದಿ ತಿಳಿಸಿದೆ.
8 ರೂಪಾಯಿಗೆ ಒಂದು ಕೆಜಿ ಈರುಳ್ಳಿ: ಕಣ್ಣೀರು ಒರೆಸಲು ಸರ್ಕಾರವೇ ಇಲ್ಲ
ಬೆಲೆ ಇಳಿಕೆಯಾದ ನಂತರ ರಫ್ತು ಆರಂಭ
ಒಮ್ಮೆ ಬೆಲೆ ಇಳಿಕೆಯಾದ ಬಳಿಕ ರಫ್ತು ಮೇಲಿನ ನಿರ್ಬಂಧವನ್ನು ಸಡಿಲಗೊಳಿಸಲು ಆಲೋಚಿಸುತ್ತೇವೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದು ಸಾಧ್ಯವಿಲ್ಲ. ಜನವರಿಯಿಂದ ಈರುಳ್ಳಿ ಪೂರೈಕೆಯು ಸಹಜ ಸ್ಥಿತಿಯಲ್ಲಿ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಒಮ್ಮೆ ಬೆಲೆ ನಿರೀಕ್ಷಿತ ಮಟ್ಟಕ್ಕೆ ಇಳಿದ ಬಳಿಕ ನಾವು ರಫ್ತಿಗೆ ಅನುಮತಿ ನೀಡಬಹುದು ಎಂದು ಭಾರತೀಯ ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೇರೆ ದೇಶಗಳಿಂದ ಆಮದು
ಭಾರತವು ರಫ್ತು ಮೇಲೆ ನಿರ್ಬಂಧ ವಿಧಿಸಿದ ಬಳಿಕ ಏಷ್ಯಾದ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಹೆಚ್ಚಳವಾಗಿದೆ. ಇದರಿಂದಾಗಿ ಬಾಂಗ್ಲಾದೇಶ, ಶ್ರೀಲಂಕಾದಂತಹ ದೇಶಗಳು ಮಯನ್ಮಾರ್, ಈಜಿಪ್ಟ್, ಟರ್ಕಿ ಮತ್ತು ಚೀನಾದಿಂದ ಈರುಳ್ಳಿ ಆಮದು ಮಾಡಿಕೊಳ್ಳುವ ಅನಿವಾರ್ಯತೆಗೆ ಸಿಲುಕಿವೆ. ಆದರೆ ಭಾರತದಿಂದ ಸಿಗುವ ಗುಣಮಟ್ಟ ಮತ್ತು ಕಡಿಮೆ ಬೆಲೆಯ ಈರುಳ್ಳಿ ಅವುಗಳಿಗೆ ಲಭ್ಯವಾಗುವುದಿಲ್ಲ. ಭಾರತವು ವರ್ಷಕ್ಕೆ 2 ಮಿಲಿಯನ್ ಟನ್ಗೂ ಅಧಿಕ ಈರುಳ್ಳಿಯನ್ನು ಪ್ರತಿ ವರ್ಷ ರಫ್ತು ಮಾಡುತ್ತದೆ.