ಭವಿಷ್ಯ ಹೇಳಲು ನಾನು ಜ್ಯೋತಿಷಿಯಲ್ಲ; ಕೃಷಿ ಸಚಿವ
ನವದೆಹಲಿ, ಜನವರಿ 01: "ರೈತರೊಂದಿಗೆ ನಡೆಯುವ ಮುಂದಿನ ಚರ್ಚೆಯಲ್ಲಿ ಕೇಂದ್ರದ ಕೃಷಿ ಕಾಯ್ದೆಗಳ ಕುರಿತ ಗೊಂದಲಕ್ಕೆ ತೆರೆ ಬೀಳುವ ವಿಶ್ವಾಸ ಸರ್ಕಾರಕ್ಕಿದೆ. ಆದರೆ ಈ ಏಳನೇ ಸುತ್ತಿನ ಮಾತುಕತೆ ಸಫಲವಾಗುವುದೋ, ಈ ಮಾತುಕತೆಯೇ ಅಂತಿಮವಾಗುವುದೋ ಹೇಳುವುದು ಸಾಧ್ಯವಿಲ್ಲ. ಮುಂದೆ ನಡೆಯುವುದನ್ನು ಹೇಳಲು ನಾನು ಜ್ಯೋತಿಷಿಯಲ್ಲ" ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
"ಕೃಷಿ ಕಾಯ್ದೆಗಳ ಕುರಿತ ಚರ್ಚೆಗೆ ಡಿ.30ರಂದು ಕೇಂದ್ರ ಹಾಗೂ ರೈತರ ನಡುವೆ ಆರನೇ ಸುತ್ತಿನ ಮಾತುಕತೆ ನಡೆದಿದೆ. ಆಗ ಸಕಾರಾತ್ಮಕ ವಾತಾವರಣದಲ್ಲೇ ಚರ್ಚೆ ನಡೆದಿದ್ದು, ಎರಡು ವಿಷಯಗಳಿಗೆ ಒಮ್ಮತಕ್ಕೆ ಬರಲಾಗಿದೆ. ಜನವರಿ 4ರಂದು ನಡೆಯುತ್ತಿರುವ ಸಭೆಯಲ್ಲಿಯೂ ಸಕಾರಾತ್ಮಕ ಫಲಿತಾಂಶ ಸಿಗಬಹುದು" ಎಂದು ತಿಳಿಸಿದ್ದಾರೆ.
"ನಿಮಗೆ, ನಮಗೆ ಬೇರೆ ಪರ್ಯಾಯ ಆಯ್ಕೆಯೇ ಇಲ್ಲ"
ಆದರೆ ಮಾತುಕತೆ ನಂತರವೂ ರೈತ ಸಂಘಟನೆಗಳು ತಮ್ಮ ನಿಲುವಿನಿಂದ ಹಿಂದೆ ಸರಿದಿಲ್ಲ. ಕೃಷಿ ಮಾರುಕಟ್ಟೆ ಕಾಯ್ದೆ, ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕು (ತಿದ್ದುಪಡಿ) ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸಭೆಯಲ್ಲಿ ಸರ್ಕಾರ ಕಾಯ್ದೆ ರದ್ದತಿಗೆ ಪರ್ಯಾಯ ಆಯ್ಕೆ ಕೇಳಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ರೈತ ಸಂಘಗಳು ಸರ್ಕಾರದೊಂದಿಗಿನ ಮಾತುಕತೆಯಲ್ಲಿ ಶೇ 5ರಷ್ಟು ಮಾತ್ರ ಚರ್ಚೆ ನಡೆದಿದೆ. ಮುಂದಿನ ಸಭೆಯಲ್ಲಿ ಸರ್ಕಾರ ನಮ್ಮ ಪರ ತೀರ್ಮಾನ ತೆಗೆದುಕೊಳ್ಳದೇ ಇದ್ದರೆ, ಹರಿಯಾಣ ರಾಜಸ್ಥಾನ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ದೆಹಲಿ ಪ್ರವೇಶಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದಿನ ಸಭೆಯಲ್ಲಿ ವಿದ್ಯುತ್ ಕಾಯ್ದೆ ಹಾಗೂ ಕೃಷಿ ತ್ಯಾಜ್ಯ ಸುಡುವ ಕುರಿತು ತೀರ್ಮಾನಕ್ಕೆ ಬರಲಾಗಿದ್ದು, ರೈತರ ಪ್ರಮುಖ ಬೇಡಿಕೆಗಳ ಕುರಿತು ಚರ್ಚೆಗೆ ಜ.4ರಂದು ದಿನ ನಿಗದಿಯಾಗಿದೆ. ಈ ಸಭೆಯಲ್ಲಿ ಕಾಯ್ದೆಗಳ ಬಗ್ಗೆ ಅಂತಿಮ ತೀರ್ಮಾನ ಪ್ರಕಟವಾಗುವ ಸಾಧ್ಯತೆಯಿದ್ದು, ಇದೇ ಕಾರಣಕ್ಕೆ ಸಭೆ ಅತಿ ಮುಖ್ಯವೆನಿಸಿದೆ.
ನವೆಂಬರ್ 26ರಿಂದಲೂ ಕೃಷಿ ಕಾಯ್ದೆ ರದ್ದತಿಗೆ ಆಗ್ರಹಿಸಿ ದೆಹಲಿಯ ಗಡಿ ಪ್ರದೇಶಗಳಲ್ಲಿ ಸುಮಾರು 40 ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.