ಅಡಿಕೆಯಲ್ಲಿ ಬಸವನ ಹುಳುವಿನ ಬಾಧೆ ನಿವಾರಣೆ ಹೇಗೆ?
ಶಿವಮೊಗ್ಗ, ಆಗಸ್ಟ್ 26: ಮಲೆನಾಡು ಮತ್ತು ಅರೆ ಮಲೆನಾಡು ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಬಸವನ ಹುಳು ಅಥವಾ ಶಂಖದ ಹುಳು ಅಡಿಕೆ ಹಾಗೂ ಇತರೆ ಬೆಳೆಗಳಿಗೆ ಹೆಚ್ಚು ಹಾನಿಯನ್ನು ಉಂಟುಮಾಡುತ್ತಿದ್ದು, ರೈತರು ಇವುಗಳ ನಿರ್ವಹಣಾ ಕ್ರಮಗಳನ್ನು ನವಿಲೆ-ಶಿವಮೊಗ್ಗ ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ನಾಗರಾಜಪ್ಪ ಅಡಿವಪ್ಪರ್ ಅವರು ತಿಳಿಸಿದ್ದಾರೆ.
ನಿರ್ವಹಣಾ ಕ್ರಮಗಳು: ಹುಳುಗಳ ಬೆಳವಣಿಗೆಗೆ ಅನುಕೂಲಕರವಾಗಿರುವ ವಾತಾವರಣವನ್ನು ಒದಗಿಸದೇ ಇರುವುದು. ಅಂದರೆ, ತೋಟಗಳ ಕಳೆಗಳನ್ನು ನಿರ್ಮೂಲನೆ ಮಾಡಿ ಆದಷ್ಟು ಶುಚಿಯಾಗಿಡುವುದು. ತೋಟಗಳಲ್ಲಿ ಕೃಷಿ ತ್ಯಾಜ್ಯಗಳನ್ನು ಗುಂಪು ಹಾಕದೇ ಹುಳುಗಳಿಗೆ ಅಡಗಿಕೊಳ್ಳಲು ಸ್ಥಳಗಳು ಸಿಗದಂತೆ ಮಾಡಬೇಕು.
ಕಬ್ಬಿನ ಬೆಳೆಯಲ್ಲಿ ಬಿಳಿ ನೊಣದ ಹಾವಳಿ ನಿಯಂತ್ರಣಕ್ಕೆ ಸಲಹೆಗಳು
ಹೊಲದಲ್ಲಿ ಅಲ್ಲಲ್ಲಿ ನೆನೆಸಿದ ಗೋಣಿ ಚೀಲಗಳನ್ನು ಹರಡುವುದರಿಂದ ಅಥವಾ ಕಸವನ್ನು ಗುಂಪಾಗಿರಿಸಿ ಅದರ ಆಶ್ರಯವನ್ನು ಪಡೆಯಲು ಬರುವ ಹುಳುಗಳನ್ನು ಆಯ್ದು ನಾಶಪಡಿಸುವುದು ಅಥವಾ 25-30 ಗ್ರಾಂ ಬ್ಲೀಚಿಂಗ್ ಪುಡಿ /ಸುಣ್ಣದ ಪುಡಿ / ತಂಬಾಕು ಮತ್ತು ಮೈಲುತುತ್ತದ ಮಿಶ್ರಣವನ್ನು ಸಿಂಪರಣೆ ಮಾಡಿ ಹುಳುಗಳನ್ನು ನಾಶಮಾಡಬೇಕು.
ಬಾಧೆಯಿರುವ ತೋಟಗಳಲ್ಲಿ ಶೇ 2.5 ರ ಮೆಟಾಲ್ಡಿಹೈಡ್ ತುಣುಕುಗಳನ್ನು 20ಗ್ರಾಂ ನಂತೆ ಅಲ್ಲಲ್ಲಿ ಸುಮಾರು ಕಡೆ ಸಂಜೆ 6 ಗಂಟೆಯ ನಂತರ ಉದುರಿಸದರೆ ಹುಳುಗಳು ಈ ಪಾಷಾಣಕ್ಕೆ ಆಕರ್ಷಣೆಗೊಂಡು, ಪಾಷಾಣದ ತುಣುಕುಗಳನ್ನು ತಿಂದು ತಲೆಯ ಭಾಗವನ್ನು ಹೊರಗೆ ಚಾಚಿಕೊಂಡು ಲೋಳೆ ಸುರಿಸಿ ಮರುದಿನವೇ ಸಾವನ್ನಪ್ಪುತ್ತವೆ.
ಸುಮಾರಾಗಿ ಬಲಿತ ಪರಂಗಿ ಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಹೊಲ/ತೋಟದಲ್ಲಿ ಅಲ್ಲಲ್ಲಿ ಸಣ್ಣ ಗುಡ್ಡೆ ಮಾಡಿ ಸಂಜೆ 6 ರಿಂದ 7 ಗಂಟೆ ಸಮಯದಲ್ಲಿ ಇಡಬೇಕು. ಅಂತಹ ಕಡೆಗೆ ಎಲ್ಲ ವಯಸ್ಸಿನ ಹಾಗೂ ಎಲ್ಲಾ ಗಾತ್ರದ ಬಸವನ ಹುಳುಗಳು ಆಕರ್ಷಿತವಾಗುತ್ತವೆ. ಒಂದೆರಡು ಗಂಟೆಗಳ ನಂತರ, ಈ ಎಲ್ಲ ಹುಳುಗಳನ್ನು ಆರಿಸಿ ನಾಶಪಡಿಸಬೇಕು.
ಕಡಿಮೆ ಖರ್ಚಿನಲ್ಲಿ ಕಳೆ ಕೀಳುವ ಯಂತ್ರ ಪರಿಚಯಿಸಿದ ಕೋಲಾರದ ರೈತ
ಗೋಧಿ ಅಥವಾ ಅಕ್ಕಿಯ ತೌಡು (10 ಕೆ.ಜಿ), ಬೆಲ್ಲ (1.5 ಕೆ.ಜಿ) ಮತ್ತು ತಕ್ಕ ಮಟ್ಟಿಗೆ ನೀರನ್ನು (3-4 ಲೀ) ಬೆರೆಸಿ 36 ಗಂಟೆಗಳ ನೆನೆಯಿಸಬೇಕು. ನಂತರ, ಮಿಥೋಮಿಲ್ 40 ಎಸ್.ಪಿ. ಕೀಟನಾಶಕವನ್ನು (150 ಗ್ರಾಂ) ಮಿಶ್ರಣ ಮಾಡಿ, ಸಂಜೆ 6.00 ಗಂಟೆಯ ನಂತರ ಹೊಲದ ಸುತ್ತ ಅಂಚಿನಲ್ಲಿ ಅಥವಾ ಸಾಲುಗಳಲ್ಲಿ ಚೆಲ್ಲಿ ಹುಳುಗಳನ್ನು ನಾಶಪಡಿಸಬಹುದಾಗಿದೆ ಎಂದವರು ತಿಳಿಸಿದ್ದಾರೆ.(ಮಾಹಿತಿ ಕೃಪೆ: ವಾರ್ತಾ ಇಲಾಖೆ)