ಹಾಸನ ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ; ತತ್ತರಿಸಿದ ಕಾಫಿ ಬೆಳೆಗಾರರು
ಹಾಸನ, ನವೆಂಬರ್ 17: ಹಾಸನ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿರುವ ಪರಿಣಾಮ ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿವೆ. ರೈತರು ಬೆಳೆದ ಬೆಳೆಗಳು ನೆಲಕಚ್ಚಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದಲ್ಲದೆ, ಮಳೆಯಿಂದ ಸಾಕಷ್ಟು ಅನಾಹುತ ಸೃಷ್ಟಿಯಾಗಿವೆ.
ಹಾಸನ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ರೈತರು ಬಳಲಿ ಬೆಂಡಾಗಿದ್ದಾರೆ. ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡಿನ ತಾಲೂಕಿನಲ್ಲಿ ಕಾಫಿ ಬೆಳೆಗಾರರು ಕಾಫಿ ಕೊಯ್ಯೋಕೆ ಆಗದೆ, ಕೊಯ್ಯದರೂ ಒಣಗಿಸೋಕೆ ಜಾಗವಿಲ್ಲದೆ ಒಂದು ರೀತಿಯಲ್ಲಿ ಅಕ್ಷರಶಃ ನೊಂದು ಹೋಗಿದ್ದಾರೆ.
ಕಾಫಿ ಕೊಯ್ಯದಿದ್ದರೆ ವರ್ಷದ ಬದುಕು ತೋಟದಲ್ಲೇ ಮಣ್ಣು ಪಾಲಾಗಲಿದೆ ಎಂದು ಕಣ್ಣೀರಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಕೃತಿ ಎದುರು ನರಮನುಷ್ಯ ತೃಣಕ್ಕೆ ಸಮ ಎಂಬಂತೆ, ಏನು ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಕೊಯ್ದಿರುವ ಕಾಫಿ ಮೇಲೆ ಈಗಾಗಲೇ ಹೂ (ಬೂಸ್ಟ್) ಬೆಳೆಯುತ್ತಿದೆ. ಸದ್ಯಕ್ಕೆ ತಲೆಮೇಲೆ ಕೈಹೊತ್ತು ಕೂರುವುದೊಂದೆ ರೈತರಿಗೆ ಉಳಿದಿರುವುದು.
ಇನ್ನು ಬಯಲುಸೀಮೆಯ ರೈತರ ಪರಿಸ್ಥಿತಿಯನ್ನು ಕೇಳುವುದೇ ಬೇಡವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ರೌದ್ರನರ್ತನಕ್ಕೆ ರೈತರ ಬದುಕು ಬರ್ಬಾದ್ ಆಗಿದೆ. ಮಳೆಯಿಂದ ಬಹುತೇಕ ಬೆಳೆ ಮಣ್ಣುಪಾಲಾಗಿದೆ. ಸದ್ಯ ಮಳೆ ನಿಲ್ಲಲಿ ಎಂದು ಹಾಸನದ ಜನರು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಇನ್ನು ಹೋಳೆನರಸೀಪುರ ತಾಲೂಕಿನ ಐಚನಹಳ್ಳಿ ಗ್ರಾಮದ ಕೆರೆ ಕೋಡಿ ಹರಿದು ಹಳ್ಳದ ನೀರು ಜಮೀನುಗಳಿಗೆ ನುಗ್ಗಿ ಜಮೀನುಗಳು ಜಲಾವೃತವಾಗಿವೆ. ಕೆರೆ ಕೋಡಿ ತುಂಬಿ ಹರಿದ ಪರಿಣಾಮ ಎಲೆಚಾಗಳ್ಳಿ ಸುತ್ತಮುತ್ತಲಿನ ರೈತರ ಜಮೀನುಗಳು ಜಲಾವೃತಗೊಂಡಿವೆ. ತಾತನಹಳ್ಳಿ ಗ್ರಾಮದಲ್ಲಿ ಕಾಲುವೆ ಏರಿ ಹೊಡೆದು ಗದ್ದೆಗಳಿಗೆ ನೀರು ನುಗ್ಗಿದೆ. ಹದಿನೈದು ವರ್ಷಗಳ ನಂತರ ಚಾಕೇನಹಳ್ಳಿ ಕಟ್ಟೆ ತುಂಬಿದ್ದು, ನಾಲ್ಕು ಗೇಟಿನ ಮೂಲಕ ನೀರು ಹೊರಕ್ಕೆ ಬಿಡಲಾಗುತ್ತಿದೆ.
ಪೂಜೆಕೊಪ್ಪಲು ಗ್ರಾಮದ ಹಳ್ಳದಲ್ಲಿರುವ ಗದ್ದೆಗಳು ಸಂಪೂರ್ಣ ಜಲಾವೃತಗೊಂಡು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಚನ್ನರಾಯಪಟ್ಟಣ ತಾಲ್ಲೂಕಿನ, ಬಾಗೂರು ಹೋಬಳಿಯ, ದಡ್ಡಿಹಳ್ಳಿ ಗ್ರಾಮದಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ಗ್ರಾಮದ ಸಂಪರ್ಕ ಸಂಪೂರ್ಣ ಕಡಿತವಾಗಿದೆ.
ಕಳೆದೊಂದು ತಿಂಗಳಿಂದ ಹಾಸನ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ನಿನ್ನೆಯಿಂದ ಎಡಬಿಡದೆ ಸುರಿದ ಮಳೆಗೆ 60 ವರ್ಷಗಳ ನಂತರ ಇದೇ ಮೊದಲಬಾರಿಗೆ ದಡ್ಡಿಹಳ್ಳಿ ಗ್ರಾಮದ ಕೆರೆಗೆ ಬಂದ ಭಾರೀ ಪ್ರಮಾಣದಲ್ಲಿ ನೀರು ಬಂದಿದೆ. ಕೆರೆ ತುಂಬಿ ನೀರು ಹರಿದ ಪರಿಣಾಮ ತೋಟ, ಗದ್ದೆಗಳು ಜಲಾವೃತವಾಗಿವೆ. ತೋಟ ಮತ್ತು ಗದ್ದೆಗಳಿಗೆ ನೀರು ನುಗ್ಗಿದ ಪರಿಣಾಮ ಕೆರೆಯಲ್ಲಿ ತೆಂಗಿನಕಾಯಿಗಳು ತೇಲಿ ಬರುತ್ತಿವೆ.
ಮಳೆಯಿಂದಾಗಿ ಅಪಾರ ನಷ್ಟವಾಗಿದ್ದು, ಸರ್ಕಾರ ನಮ್ಮ ಕಷ್ಟಕ್ಕೆ ಸ್ಪಂದಿಸಬೇಕೆಂದು ರೈತರು ಆಗ್ರಹಿಸಿದ್ದಾರೆ. ಅಕಾಲಿಕ ಮಳೆ, ಕಾಫಿ ಬೀಜ ಒಣಗಿಸಲು ರೈತರ ಪರದಾಟ ನಡೆಸುವಂತಾಗಿದೆ. ಶೀತಗಾಳಿ ವಾತಾವರಣದಿಂದ ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡಿನ ತಾಲೂಕಿನ ಕಾಫಿ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಮನೆಯೊಳಗೆ ಹೆತ್ತೂರಿನಲ್ಲಿ ಸೌದೆ ಒಲೆಗಳ ಮೇಲೆ ತಗಡು ಇರಿಸಿ ಕಾಫಿ ಬೀಜಗಳನ್ನು ಒಣಗಿಸಲಾಗುತ್ತಿದೆ.
ರಾಜ್ಯದ ವಾತಾವರಣ ಹೇಗಿರಲಿದೆ?
ಮುಂದಿನ
24
ಗಂಟೆಗಳಲ್ಲಿ
ರಾಜ್ಯದ
ಕರಾವಳಿ,
ದಕ್ಷಿಣ
ಒಳನಾಡು
ಹಾಗೂ
ಉತ್ತರ
ಒಳನಾಡಿನಲ್ಲಿ
ಮಳೆಯಾಗಲಿದೆ.
ಉತ್ತರ
ಕನ್ನಡ,
ದಕ್ಷಿಣ
ಕನ್ನಡ,
ಉಡುಪಿ,
ಬೆಂಗಳೂರು
ಗ್ರಾಮಾಂತರ,
ಬೆಂಗಳೂರು
ನಗರ
ಚಾಮರಾಜನಗರ,
ಚಿಕ್ಕಬಳ್ಳಾಪುರ,
ಚಿಕ್ಕಮಗಳೂರು,
ಚಿತ್ರದುರ್ಗ,
ದಾವಣಗೆರೆ,
ಹಾಸನ,
ಕೊಡಗು,
ಕೋಲಾರ,
ಮಂಡ್ಯ,
ಮೈಸೂರು,
ರಾಮನಗರ,
ಶಿವಮೊಗ್ಗ,
ತುಮಕೂರು
ಜಿಲ್ಲೆಗಳಲ್ಲಿ
ಮಳೆಯಾಗಲಿದೆ
ಎಂದು
ಹೇಳಲಾಗಿದೆ.
ಇನ್ನು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
Recommended Video