ಮಳೆ ಆರ್ಭಟಕ್ಕೆ ಚಿತ್ರದುರ್ಗ, ಚಾಮರಾಜನಗರದಲ್ಲಿ ಕೊಳೆಯುತ್ತಿರುವ ಬೆಳೆಗಳು
ಚಿತ್ರದುರ್ಗ, ಅಕ್ಟೋಬರ್ 1: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಎಡಬಿಡದೆ ಸುರಿದ ಮಳೆಯಿಂದ ಈರುಳ್ಳಿ ಬೆಳೆ ಕೊಳೆಯುತ್ತಿವೆ. ಇದರಿಂದ ಮನನೊಂದ ರೈತರೊಬ್ಬರು ಎರಡು ಎಕರೆ ಈರುಳ್ಳಿ ಬೆಳೆಯನ್ನು ಟ್ರಾಕ್ಟರ್ ಮೂಲಕ ನಾಶ ಪಡಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸಲಬೊಮ್ಮನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ರೈತ ಉಮೇಶ್ ಎಂಬ ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದರು. ನಿರಂತರವಾಗಿ ಸುರಿದ ಜಿಟಿ ಜಿಟಿ ಮಳೆಯಿಂದ ಈರುಳ್ಳಿ ಬೆಳೆ ಸಂಪೂರ್ಣ ಕೊಳೆತಿದೆ.
ನಷ್ಟಕ್ಕೆ ಬೇಸತ್ತು ಈರುಳ್ಳಿ ಬೆಳೆ ನಾಶಪಡಿಸುತ್ತಿರುವ ಚಿತ್ರದುರ್ಗದ ರೈತರು
1 ಲಕ್ಷದ 20 ಸಾವಿರ ರೂ. ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದ ರೈತ, ಬೆಳೆ ಕೊಳೆತದ್ದನ್ನು ಕಂಡು ಮನನೊಂದಿದ್ದರು. ಚಿತ್ರದುರ್ಗ ಜಿಲ್ಲೆಯಲ್ಲಿ ಹೇರಳವಾಗಿ ಈರುಳ್ಳಿ ಬೆಳೆಯುತ್ತಿದ್ದು, ಆದರೆ ಕಳೆದ ವರ್ಷ ಹಾಗೂ ಈ ವರ್ಷ ಭಾರಿ ಮಳೆಯಿಂದ ನೂರಾರು ಎಕರೆ ಈರುಳ್ಳಿ ಬೆಳೆ ಕೊಳೆತಿದೆ. ಬೆಳೆ ಪರಿಹಾರಕ್ಕಾಗಿ ಸರ್ಕಾರಕ್ಕೆ ಅನ್ನದಾತರು ಒತ್ತಾಯಿಸಿದ್ದಾರೆ.
ಗಡಿ ಜಿಲ್ಲೆ ಚಾಮರಾಜನಗರದಲ್ಲೂ ಭಾರಿ ಮಳೆಗೆ ಬಾಳೆ ಬೆಳೆ ನೆಲ ಕಚ್ಚಿದೆ. ಜಿಲ್ಲೆಯ ಹನೂರು ತಾಲ್ಲೂಕಿನ ಕೂಡಲೂರು ಗ್ರಾಮದಲ್ಲಿ 50 ಎಕರೆಗೂ ಹೆಚ್ಚು ಬಾಳೆ, ಮೆಕ್ಕೆಜೋಳ ಬೆಳೆ ನಾಶ ಮಾಡಲಾಯಿತು.
ರಾತ್ರಿ ಸುರಿದ ಗಾಳಿ, ಮಳೆಗೆ ಸುಮಾರು 50 ಎಕರೆ ಬಾಳೆ ಬೆಳೆ, ಮೆಕ್ಕೆ ಜೋಳ, ವಿವಿಧ ತರಕಾರಿ ಬೆಳೆ ಹಾನಿಯಾಗಿದ್ದು, ಕಟಾವಿಗೆ ಬಂದಿದ್ದ ಬಾಳೆ ಬೆಳೆ ನಾಶವಾಗಿದ್ದನ್ನು ಕಂಡು ರೈತ ಕಂಗಾಲಾಗಿದ್ದು, ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.