ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ; ಮಾಜಿ ಸಿಎಂ ಕುಮಾರಸ್ವಾಮಿ ಮಹತ್ವದ ಹೇಳಿಕೆ!
ಬೆಂಗಳೂರು, ನ. 07: ಕಳೆದ ಎರಡು ದಿನಗಳಲ್ಲಿ ರಾಜ್ಯದಲ್ಲಿ ನಾಲ್ವರು ರೈತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಆತಂಕಕಾರಿ ಘಟನೆಗಳು ನಡೆದಿವೆ. ಕೊರೊನಾ ವೈರಸ್ ತಂದಿಟ್ಟಿರುವ ಸಂಕಷ್ಟ ಒಂದೆಡೆಯಾದರೆ, ಅತಿವೃಷ್ಠಿಯಿಂದ ಮುಂಗಾರು ಹಾಗೂ ಹಿಂಗಾರು ಬೆಳೆ ನಾಶವಾಗಿರುವುದು ನಾಡಿನ ರೈತರನ್ನು ಮತ್ತಷ್ಟು ಕಂಗೆಡಿಸಿದೆ. ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರೈತರ ಆತ್ಮಹತ್ಯೆ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.
ಸತತ ಎರಡು ವರ್ಷಗಳ ನೆರೆಹಾವಳಿಯಿಂದ ಕಂಗೆಟ್ಟಿರುವ ರಾಜ್ಯದ ರೈತ ಸಮುದಾಯ, ಬೆಳೆದ ಫಸಲು ಕೈಗೆಟುಕದೆ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿರುವ ಆಘಾತಕಾರಿ ಬೆಳವಣಿಗೆ ಹತ್ತಿಕ್ಕಲು ರಾಜ್ಯ ಸರ್ಕಾರ ತಕ್ಷಣವೇ ಮುಂದಾಗಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ. ಸತತ ಎರಡು ವರ್ಷಗಳ ನೆರೆಹಾವಳಿಯಿಂದ ಕಂಗೆಟ್ಟಿರುವ ರಾಜ್ಯದ ರೈತ ಸಮುದಾಯ, ಬೆಳೆದ ಫಸಲು ಕೈಗೆಟುಕದೆ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿರುವ ಆಘಾತಕಾರಿ ಬೆಳವಣಿಗೆ ಹತ್ತಿಕ್ಕಲು ರಾಜ್ಯ ಸರ್ಕಾರ ತಕ್ಷಣವೇ ಮುಂದಾಗಬೇಕು ಎಂದು ಎಚ್ಡಿಕೆ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
48 ಗಂಟೆಗಳಲ್ಲಿ 4 ರೈತರ ಆತ್ಮಹತ್ಯೆ
ಕಳೆದ 48 ತಾಸುಗಳ ಅವಧಿಯಲ್ಲಿ ರಾಜ್ಯದಲ್ಲಿ ಸಾಲದ ಸುಳಿಗೆ ನಲುಗಿಹೋದ ನಾಲ್ವರು ರೈತರು (ಹಾವೇರಿ ಜಿಲ್ಲೆ 2, ಮಂಡ್ಯ, ದಾವಣಗೆರೆ ಜಿಲ್ಲೆ ತಲಾ ಒಂದು) ಆತ್ಮಹತ್ಯೆ ಮಾಡಿಕೊಂಡಿರುವ ವರದಿ ನನ್ನನ್ನು ಅಧೀರನನ್ನಾಗಿಸಿದೆ. ರೈತರ ಆತ್ಮಹತ್ಯೆ ಪ್ರಕರಣಗಳು 'ಸಮೂಹ ಸನ್ನಿ' ಆಗದಂತೆ ಆರಂಭದಲ್ಲೇ ಎಚ್ಚೆತ್ತುಕೊಂಡು, ಧೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದು ಆಗ್ರಹಿಸಿದ್ದಾರೆ.
ರೈತರಿಗೆ ಕಿಲುಬು ಕಾಸಿನ ಪರಿಹಾರ
ಅತಿವೃಷ್ಟಿ ನಡುವೆ ಕಾಡುತ್ತಿರುವ ಕೊರೊನಾ ಸೋಂಕು ಸೃಷ್ಟಿಸಿದ ಅವಾಂತರದಲ್ಲಿ ಕೃಷಿಕ ಸಮುದಾಯದ ಬದುಕು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ನೆರೆಹಾವಳಿಯ ಸಂತ್ರಸ್ತರಿಗೆ ಸರ್ಕಾರ ನೀಡಿದ ಕಿಲುಬು ಕಾಸಿನ ಪರಿಹಾರದಿಂದ ರೈತರು ತೀವ್ರ ಹತಾಶರಾಗಿದ್ದಾರೆ.
ಕೊರೋನಾ ಸೋಂಕು ವ್ಯಾಪಿಸಿದ ನಂತರ ದೇಶದಲ್ಲಿ ಎಲ್ಲ ವಲಯಗಳ ಜಿಡಿಪಿ ನೆಲಕಚ್ಚಿದರೂ ಕೃಷಿ ವಲಯದಿಂದ ಮಾತ್ರ ದೇಶದ ಆರ್ಥಿಕ ಬೆನ್ನೆಲುಬು ಅದಃಪತನವಾಗಿರಲಿಲ್ಲ ಎಂಬುದನ್ನು ಕೇಂದ್ರ, ರಾಜ್ಯ ಸರ್ಕಾರಗಳು ಮನಗಾಣಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಸರಣಿ ಆತ್ಮಹತ್ಯೆ ತಡೆಯಿರಿ
ರಾಜ್ಯದ ರೈತರು ಸಾಲಭಾದೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗುವ ಮುನ್ಸೂಚನೆ ಸಿಗುತ್ತಿರುವ ಬೆನ್ನಲ್ಲೇ ಸರ್ಕಾರ ಅನ್ನದಾತನ ಕೈಹಿಡಿಯಬೇಕು. ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ನಡೆದ ರೈತರ ಸರಣಿ ಆತ್ಮಹತ್ಯೆ ಸಂಕೋಲೆ ಪುನರಾವರ್ತನೆ ಆಗುವುದಕ್ಕೆ ಬಿಡಬಾರದು.
ಆಗ ವಿರೋಧ ಪಕ್ಷದಲ್ಲಿದ್ದರೂ ನಾನು ರಾಜ್ಯದ ಸುಮಾರು 500 ಮಂದಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ತಲಾ 50 ಸಾವಿರ ರೂಪಾಯಿಗಳಿಂದ ಒಂದು ಲಕ್ಷ ರೂಪಾಯಿಗಳವರೆಗೆ ಆರ್ಥಿಕ ನೆರವು ನೀಡಿದ್ದೆ ಎಂದು ನೆನಪಿಸಿದ್ದಾರೆ.
ರೈತರ ಸಾಲಮನ್ನಾ ಮಾಡಿದ್ದೆ
ನೀಡಿದ್ದ ವಾಗ್ದಾನದಂತೆ ರಾಜ್ಯದ ರೈತರ 25 ಸಾವಿರ ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಿದ್ದೆ. ಬರೀ ಸಾಲಮನ್ನಾದಿಂದ ರೈತರ ಬದುಕ ಹಸನಾಗದು ಎಂಬುದನ್ನು ಅರಿತಿದ್ದೆ. ಆದರೆ, ಆರ್ಥಿಕ ಚೈತನ್ಯ ನೀಡುವ ಕಾರ್ಯಕ್ರಮ ರೂಪಿಸುವ ಕನಸು ಸಾಕಾರವಾಗಲಿಲ್ಲ.
ಬೆಳೆ ಹಾನಿ, ಆಸ್ತಿಪಾಸ್ತಿ ನಷ್ಟ, ಎರಡು ಹೊತ್ತು ಊಟಕ್ಕೂ ಪರದಾಡುವಂತಹ ಪರಿಸ್ಥಿತಿಗೆ ಬಂದಿರುವ ಅನ್ನದಾತರು ಆತ್ಮಹತ್ಯೆಗೆ ಶರಣಾಗದಂತೆ ಎಚ್ಚರ ವಹಿಸುವ ಮೂಲಕ ಸಂಭವನೀಯ ಸರಣಿ ಆತ್ಮಹತ್ಯೆಯ ಅನಾಹುತಕಾರಿ ಬೆಳವಣಿಗೆಯನ್ನು ಆರಂಭದಲ್ಲೇ ಚಿವುಟಿ ಹಾಕಬೇಕು ಎಂದು ಒತ್ತಾಯಿಸುತ್ತೇನೆ ಎಂದು ಎಚ್ಡಿಕೆ ಹೇಳಿದ್ದಾರೆ.