ಗೋಲಿಬಾರ್ ವರದಿ: ಸರ್ಕಾರ ಪತನಕ್ಕೆ ನಾಂದಿ
ಜೆಡಿಎಸ್ ಪಕ್ಷದ ಪ್ರಧಾನ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ವಾಸ್ತವಾಂಶವನ್ನು ಮರೆ ಮಾಡಿ, ಗೋಲಿಬಾರ್ ನಡೆದಾಗ ರೈತರು ಇರಲಿಲ್ಲ. ಸತ್ತವರು ರಾಜಕೀಯ ಪಕ್ಷದ ಕಾರ್ಯಕರ್ತರು ಎನ್ನುತ್ತಿರುವ ಜಗನ್ನಾಥ ಶೆಟ್ಟಿ ಆಯೋಗದ ವರದಿ ಅನೇಕ ಸಂಶಯಗಳನ್ನು ಹುಟ್ಟು ಹಾಕುತ್ತದೆ ಎಂದಿದ್ದಾರೆ.
ಗಲಭೆ ಹಿಂದೆ ಪ್ರಭಾವಿ ರಾಜಕಾರಣಿಗಳ ಕೈವಾಡವಿದೆ ಎನ್ನಲಾಗಿದೆ. ಹಾವೇರಿಗೆ ಬೆಂಗಳೂರಿನಿಂದ ಗೂಂಡಾಗಳನ್ನು ಕಳುಹಿಸಲಾಗಿತ್ತು. ಪೊಲೀಸರು ಮತ್ತು ವಾಹನದ ಮೇಲೆ ಕಲ್ಲು ತೂರಾಟ ನಡೆಸುತ್ತಿರುವಾಗ ಪೊಲೀಸರು ಅನಿವಾರ್ಯವಾಗಿ ಗುಂಡು ಹಾರಿಸಬೇಕಾಯಿತು ಎಂದು ವರದಿಯಲ್ಲಿ ತಿಳಿಸಿದ್ದಾರೆ.
ರಸಗೊಬ್ಬರ ಗಲಭೆಯಲ್ಲಿ ಮೃತರಾದ ಸಿದ್ದಲಿಂಗಪ್ಪ ಚೂರಿ ಹಾಗೂ ಪುಟ್ಟಪ್ಪ ಅವರ ಮನೆಗೆ ಸ್ವತಃ ಸಿಎಂ ಅವರೇ ಹೋಗಿ ಪರಿಹಾರ ನೀಡಿ ಬಂದಿದ್ದಾರೆ. ಮಾಧ್ಯಮಗಳಲ್ಲಿ ಗೋಲಿಬಾರ್ ದೃಶ್ಯಗಳು ಸಿಗುತ್ತವೆ. ನ್ಯಾಯಮೂರ್ತಿ ಮತ್ತೊಮ್ಮೆ ಕಣ್ಣರಳಿಸಿ ಅದನ್ನು ನೋಡಲಿ ಎಂದು ನುಡಿದರು.
ಸತ್ತವರು ರೈತರಲ್ಲ ಎಂದು ಯಾವ ಆಧಾರ ಮೇಲೆ ಹೇಳಿದ್ದಾರೋ ಗೊತ್ತಿಲ್ಲ. ವರದಿ ಅಂಗೀಕಾರಕ್ಕೆ ಮುನ್ನ ಸದನದಲ್ಲಿ ಚರ್ಚೆ ಆಗಬೇಕು. ಪಕ್ಷಭೇದ ಮರೆತು ಎಲ್ಲರೂ ವರದಿ ವಿರುದ್ಧ ದನಿ ಎತ್ತಬೇಕು ಎಂದು ದೇವೇಗೌಡ ಕರೆ ಕೊಟ್ಟರು.