ಬೇರೆ ರಾಜ್ಯಕ್ಕೆ ಹಣ್ಣು, ತರಕಾರಿ; ಹಾವೇರಿ ರೈತರ ಮೊಗದಲ್ಲಿ ಮಂದಹಾಸ
ಹಾವೇರಿ, ಏಪ್ರಿಲ್ 26 : ಲಾಕ್ ಡೌನ್ ಕಾರಣದಿಂದಾಗಿ ಹಣ್ಣು ಮತ್ತು ತರಕಾರಿಗಳಿಗೆ ಮಾರುಕಟ್ಟೆ ಇಲ್ಲದೆ ರೈತರು ತಲೆಮೇಲೆ ಕೈ ಹೊತ್ತು ಕೂತಿದ್ದರು. ಹಾವೇರಿ ಜಿಲ್ಲಾಡಳಿತ ರೈತರ ನೆರವಿಗೆ ಧಾವಿಸಿದ್ದು, 592.67 ಮೆಟ್ರಿಕ್ ಟನ್ಗೂ ಹೆಚ್ಚು ಹಣ್ಣು ಹಾಗೂ ತರಕಾರಿ ಸಾಗಾಣಿಕೆ ಮಾಡಿದೆ.
ಹಾವೇರಿ ಜಿಲ್ಲೆಯ ರೈತರ ಸಂಕಷ್ಟಕ್ಕೆ ಸ್ಪಂದಿಸಿರುವ ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿ, ವಿಳ್ಯದೆಲೆಗಳನ್ನು ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ಮಾರುಕಟ್ಟೆಗಳ ಜೊತೆ ಸಂಪರ್ಕ ಸಾಧಿಸಿ ರಫ್ತು ಮಾಡಲು ನೆರವು ಒದಗಿಸುತ್ತಿದೆ.
ಕೊರೊನಾ ಲಾಕ್ ಡೌನ್; ಸಂಕಷ್ಟಕ್ಕೆ ಸಿಲುಕಿದ ಮಾವು ಬೆಳೆದ ರೈತ
ದೆಹಲಿ, ಕೋಲ್ಕತ್ತಾ, ಪುಣೆ, ಮುಂಬೈ, ಗೋವಾ, ಉತ್ತರ ಪ್ರದೇಶ, ಆಂಧ್ರಪ್ರದೇಶ, ಬಾಗಲಕೋಟೆ, ಧಾರವಾಡ, ಬೆಂಗಳೂರು, ಶಿವಮೊಗ್ಗ, ಮಂಗಳೂರು, ಉಡುಪಿ, ಕಾರವಾರ, ಬಳ್ಳಾರಿ ಜಿಲ್ಲೆಗಳ ಮಾರುಕಟ್ಟೆಗಳ ಜೊತೆ ನಿರಂತರ ಸಂಪರ್ಕ ಸಾಧಿಸಿ ರೈತರ ಮೂಲಕ ನೇರ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿದೆ.
ಲಾಕ್ ಡೌನ್; ದ್ರಾಕ್ಷಿ ಬೆಳೆದ ಕೊಪ್ಪಳದ ರೈತ ಎಲ್ಲರಿಗೂ ಮಾದರಿ
ಹಣ್ಣು ಮತ್ತು ತರಕಾರಿ ಸಾಗಾಣಿಕೆ ಮಾಡುವ ವಾಹನಗಳಿಗೆ ಪಾಸುಗಳನ್ನು ನೀಡಿ, ಶ್ರಮವಹಿಸಿ ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಹಾಗೂ ಸಂಪರ್ಕ ಕಲ್ಪಿಸಲು ತೋಟಗಾರಿಗೆ ಇಲಾಖೆ ವ್ಯವಸ್ಥೆ ಮಾಡುತ್ತಿದೆ. ಏಪ್ರಿಲ್ 4 ರಿಂದ 22ರ ತನಕ 592.67 ಮೆಟ್ರಿಕ್ ಟನ್ಗೂ ಹೆಚ್ಚು ಹಣ್ಣು ಹಾಗೂ ತರಕಾರಿ ಸಾಗಣೆ ಮಾಡಲಾಗಿದೆ.
ಎಕರೆಗಟ್ಟಲೆ ಕಲ್ಲಂಗಡಿ ಕಿತ್ತು ಬೇರೆ ಬೆಳೆಯತ್ತ ಚಿತ್ತ ಹರಿಸಿದ ಗುಂಡ್ಲುಪೇಟೆ ರೈತ
ವಿವಿಧ ತರಕಾರಿಗಳು
ರಾಣೇಬೆನ್ನೂರು, ಹಿರೇಕೆರೂರು ತಾಲೂಕಿನಿಂದ ಕೋಲ್ಕತ್ತಾ ದೆಹಲಿ, ಬಾಗಲಕೋಟೆಗೆ ಈವರೆಗೆ 22 ಮೆಟ್ರಿಕ್ ಟನ್ ಶುಂಠಿ ಸಾಗಾಣೆ ಮಾಡಲಾಗಿದೆ. ರಾಣೆಬೆನ್ನೂರು, ಹಾನಗಲ್, ಹಿರೇಕೆರೂರು, ಹಾವೇರಿ, ಸವಣೂರ ತಾಲೂಕಿನಿಂದ ಹುಬ್ಬಳ್ಳಿ, ಬೆಂಗಳೂರು, ಶಿವಮೊಗ್ಗ, ಕಾರವಾರ, ಕುಂದಾಪುರ, ಆಂಧ್ರಪ್ರದೇಶದ ಕಲ್ಯಾಣದುರ್ಗ, ಗೋವಾ, ಕಂಪ್ಲಿ, ಬಳ್ಳಾರಿ, ಮಂಗಳೂರಿಗೆ ಈವರೆಗೆ 181 ಮೆಟ್ರಿಕ್ ಟನ್ ಬಾಳೆಹಣ್ಣು ಸಾಗಾಣಿಕೆ ಮಾಡಲಾಗಿದೆ.
ಕುಂಬಳಕಾಯಿ, ಟೊಮ್ಯಾಟೋ
ಹಾವೇರಿ, ಹಿರೇಕೆರೂರು, ಸವಣೂರು ತಾಲೂಕಿನಿಂದ ಗೋವಾ, ಕಾರವಾರ, ಉಡುಪಿಗೆ ಈವರೆಗೆ 28 ಮೆಟ್ರಿಕ್ ಟನ್ ಟೊಮ್ಯಾಟೋ ರಫ್ತು ಮಾಡಲಾಗಿದೆ. ಹಾವೇರಿ, ಸವಣೂರು ತಾಲೂಕಿನಿಂದ ಕಾರವಾರ, ಬೆಂಗಳೂರಿಗೆ 22 ಮೆಟ್ರಿಕ್ ಟನ್ ಬದನೆಕಾಯಿ ಕಳಿಸಲಾಗಿದೆ.
ಸವಣೂರ, ಬ್ಯಾಡಗಿ, ಹಾವೇರಿಯಿಂದ ಕಾರವಾರ, ಶಿವಮೊಗ್ಗ, ಗೋವಾಕ್ಕೆ ಈವರೆಗೆ 17 ಮೆಟ್ರಿಕ್ ಟನ್ ಈರುಳ್ಳಿ ಕಳಿಸಲಾಗಿದೆ. ಹಾನಗಲ್ ತಾಲೂಕಿನಿಂದ ಹುಬ್ಬಳ್ಳಿ, ಕಾರವಾರ, ಬೆಂಗಳೂರ, ಮಂಗಳೂರು ಮಾರುಕಟ್ಟೆಗೆ ಈವರೆಗೆ 96.6 ಮೆಟ್ರಿಕ್ ಟನ್ ಮಾವು ಕಳಿಸಲಾಗಿದೆ. ಹಿರೇಕೆರೂರ ತಾಲೂಕಿನಿಂದ ಕಾರವಾರಕ್ಕೆ 1 ಮೆಟ್ರಿಕ್ ಟನ್ ಬೆಳ್ಳುಳ್ಳಿ, ರಾಣೇಬೆನ್ನೂರಿನಿಂದ ಕಲಾಸಿಪಾಳ್ಯಕ್ಕೆ ಈವರೆಗೆ 120 ಮೆಟ್ರಿಕ್ ಟನ್ ಕುಂಬಳಕಾಯಿ ಸಾಗಣೆ ಮಾಡಲಾಗಿದೆ.
ವೀಳ್ಯದೆಲೆ, ಕಲ್ಲಂಗಡಿ
ರಾಣೇಬೆನ್ನೂರು, ಸವಣೂರು ತಾಲೂಕಿನಿಂದ ಧಾರವಾಡ, ಆಂಧ್ರಪ್ರದೇಶದ ಅನಂತಪುರ, ಬೆಂಗಳೂರು, ದಾವಣಗೆರೆ, ಮಂಗಳೂರು, ಗೋವಾ, ಹುಬ್ಬಳ್ಳಿಗೆ ಈವರೆಗೆ 25.25 ಲಕ್ಷ ಸಂಖ್ಯೆ ವೀಳ್ಯದೆಲೆ ಕಳುಹಿಸಲಾಗಿದೆ. ಬ್ಯಾಡಗಿ ತಾಲೂಕಿನ ಕಾಗಿನೆಲೆ, ಹಾವೇರಿ ತಾಲೂಕಿನಿಂದ ಗೋವಾ, ಶಿವಮೊಗ್ಗ ಮಾರುಕಟ್ಟೆಗೆ ಈವರೆಗೆ 15 ಮೆಟ್ರಿಕ್ ಟನ್ ಕಲ್ಲಂಗಡಿ ಕಳುಹಿಸಲಾಗಿದೆ. ಹಿರೇಕೆರೂರು ತಾಲೂಕಿನಿಂದ ಕುಂದಾಪುರಕ್ಕೆ 3 ಮೆಟ್ರಿಕ್ ಟನ್ ಕೆಂಪು ಮೆಣಸಿನಕಾಯಿ ಕಳುಹಿಸಲಾಗಿದೆ.
ಬೇಡಿಕೆಗೆ ತಕ್ಕ ಪೂರೈಕೆ
ಹಾವೇರಿ ಜಿಲ್ಲೆಯ ರೈತರ ಉತ್ಪನ್ನಗಳನ್ನು ಹೊರ ಜಿಲ್ಲೆ ಹಾಗೂ ರಾಜ್ಯಗಳ ಮಾರುಕಟ್ಟೆಯ ಬೇಡಿಕೆಗೆ ಅನುಸಾರ ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯ ರೈತರಿಗೆ ಮಾರುಕಟ್ಟೆಯ ಸಂಪರ್ಕ ಕಲ್ಪಿಸಿಕೊಡಲಾಗುತ್ತಿದೆ. ನಿತ್ಯವು ಹಣ್ಣು, ತರಕಾರಿ ಸಾಗಾಣಿಕೆ ಮಾಡಲಾಗುತ್ತಿದೆ. ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.