ರೈತ ವಿರೋಧಿ ಕಾಯ್ದೆ ಕೈಬಿಡುವಂತೆ ಹಸಿರು ಸೇನೆ ಆಗ್ರಹ
ಬೆಂಗಳೂರು, ಮೇ 14: ಕೇಂದ್ರ ಸರ್ಕಾರವು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದ್ದು, ಇದು ಎಪಿಎಂಸಿ ಅಸ್ತಿತ್ವಕ್ಕೆ ಧಕ್ಕೆ ತರಲಿದೆ. ಈ ತಿದ್ದುಪಡಿ ರೈತ ವಿರೋಧಿಯಾಗಿದ್ದು, ಈ ಕಾಯ್ದೆಯನ್ನು ಕೈಬಿಡುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಆಗ್ರಹಿಸಿದ್ದಾರೆ.
ಎಪಿಎಂಸಿ ಅಸ್ತಿತ್ವವನ್ನೇ ನಾಶಪಡಿಸುವ, ರೈತರ ಹಿತಾಸಕ್ತಿಯನ್ನೇ ಬಲಿ ಕೊಡುವಂಥ ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ಕೇಂದ್ರ ಸರ್ಕಾರವು ಮುಂದಾಗಿದ್ದು ಸರಿಯಲ್ಲ. ಮೇ 14ಕ್ಕೆ ಯಾವುದೇ ಕಾರಣಕ್ಕೂ ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ತರಬಾರದು ಎಂದಿದ್ದಾರೆ.
ಏನಿದು ಎಪಿಎಂಸಿ ಕಾಯಿದೆ ತಿದ್ದುಪಡಿ ಸುಗ್ರೀವಾಜ್ಞೆ? ಅದಕ್ಕೆ ಅಷ್ಟೊಂದು ವಿರೋಧ ಯಾಕೆ?
ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ ತಿದ್ದುಪಡಿಗೆ ರೈತರ ಸಂಪೂರ್ಣ ವಿರೋಧವಿದೆ. ಈವರೆಗೆ ಇರುವ ಎಪಿಎಂಸಿ ಕಾಯ್ದೆಯು ರೈತರ ಹಿತಾಸಕ್ತಿಯನ್ನು ಕಾಪಾಡುತ್ತಾ ಬಂದಿದೆ. ಕೃಷಿ ಉತ್ಪನ್ನಗಳ ಬೆಲೆ, ತೂಕ ಇತ್ಯಾದಿ ಯಾವುದೇ ರೀತಿ ರೈತರಿಗೆ ತೊಂದರೆಯಾದರೆ ಈಗಿರುವ ಕಾಯ್ದೆ ರೈತರ ರಕ್ಷಣೆಗೆ ಬರುತ್ತಿತ್ತು.ರೈತ ಬೆಳೆದಂತಹ ಉತ್ಪನ್ನಗಳಿಗೆ ಮಾರುಕಟ್ಟೆ ರಕ್ಷಣೆಯಾಗಿರುತ್ತಿತ್ತು.
ಇದೀಗ ಕೇಂದ್ರ ಸರ್ಕಾರವು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು, ವಿಶ್ವದ ಯಾವುದೇ ಕಂಪನಿ ನೇರವಾಗಿ ರೈತರಿಂದ ಕೃಷಿ ಉತ್ಪನ್ನ ಖರೀದಿಸಲು ಅವಕಾಶ ನೀಡುವಂತೆ ಕಾಯ್ದೆಗೆ ತಿದ್ದುಪಡಿ ತರುತ್ತಿದೆ. ದಿನಾಂಕ14ರಂದು ಕೇಂದ್ರ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಿದ್ದು, ಇದರಿಂದ ಎಪಿಎಂಸಿ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರೈತ - ಕೂಲಿಕಾರರ ಮೇಲೆ ಸರ್ಕಾರದ ದಾಳಿ: ಸಿಪಿಐಎಂ ಖಂಡನೆ
ತಿದ್ದುಪಡಿ ಕಾಯ್ದೆಯಿಂದ ಎಪಿಎಂಸಿಗಳು ಅಸ್ತಿತ್ವ ಕಳೆದುಕೊಳ್ಳಲಿವೆ. ಇದರಿಂದ ರೈತರು ಬೆಲೆ ಕುಸಿತ, ತೂಕದಲ್ಲಿ ಮೋಸ, ವಂಚನೆಯಾದರೆ ಯಾರನ್ನೂ ಕೇಳದಂತಹ ಸ್ಥಿತಿ ನಿರ್ಮಾಣವಾಗಲಿದೆ. ಈಗಾಗಲೇ ದೇಶದಲ್ಲಿ ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ, ಮೋರ್, ರಿಲಯನ್ಸ್, ವಾಲ್ ಮಾರ್ಟ್ನಂಥ ದೈತ್ಯ ಕಂಪನಿ, ಬಹುರಾಷ್ಟ್ರೀಯ ಕಂಪನಿ ಗಳು ಸ್ಥಳೀಯ ಮಾರುಕಟ್ಟೆಗೆ ಬಂದು ರೈತನಿಂದ ನೇರ ಖರೀದಿಸುತ್ತಿವೆ. ಇದರಿಂದ ಸ್ಥಳೀಯ ಖರೀದಿದಾರರು, ಕಂಪನಿಗಳ ಖರೀದಿದಾರರ ಮಧ್ಯೆ ಅನಾರೋಗ್ಯಕರ ಪೈಪೋಟಿಗೆ ಕಾರಣವಾಗಲಿದೆ ಎಂದು ಆರೋಪಿಸಿದ್ದಾರೆ.