ಮುಸುಕಿನಜೋಳ ಬೆಳೆದ ರೈತರು ಪರಿಹಾರ ಪಡೆಯಲು ಮಾರ್ಗಸೂಚಿ
ಬೆಂಗಳೂರು, ಜೂನ್ 04 : ಲಾಕ್ ಡೌನ್ ಪರಿಣಾಮ ಬೆಳೆಗೆ ಬೇಡಿಕೆ ಇಲ್ಲದೆ ನಷ್ಟ ಅನುಭವಿಸಿದ ಮುಸುಕಿನಜೋಳ ಬೆಳೆದ ರೈತರಿಗೆ ಸರ್ಕಾರ ಪರಿಹಾರವನ್ನು ಘೋಷಣೆ ಮಾಡಿದೆ. ಪರಿಹಾರವನ್ನು ಪಡೆಯಲು ರೈತರಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.
2019-20ನೇ ಸಾಲಿನಲ್ಲಿ ನಷ್ಟ ಅನುಭವಿಸಿದ ಮುಸುಕಿನ ಜೋಳ ಬೆಳೆದ ಪ್ರತಿ ರೈತರಿಗೆ 5,000 ರೂ. ಆರ್ಥಿಕ ನೆರವನ್ನು ಘೋಷಣೆ ಮಾಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೆರವನ್ನು ನೀಡಲಾಗುತ್ತದೆ.
ಕಲ್ಲು ಭೂಮಿಯಲ್ಲಿ ಅಂಜದೆ ಅಂಜೂರ ಬೆಳೆದ ಕೊಪ್ಪಳ ರೈತ!
ಪರಿಹಾರವನ್ನು ಪಡೆಯುವ ಫಲಾನುಭವಿಗಳ ಆಯ್ಕೆಗೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. 2019-20ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದ ಇ-ಆಡಳಿತ ವತಿಯಿಂದ ಕೈಗೊಳ್ಳಲಾದ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ದಾಖಲಾಗಿರುವ ಬೆಳೆ ವಿವರಗಳ ಆಧಾರದ ಮೇಲೆ ನೆರವು ನೀಡಲಾಗುತ್ತದೆ.
ಹಣ್ಣು, ತರಕಾರಿ ಬೆಳೆದ ರೈತರು ಪರಿಹಾರ ಪಡೆಯುವುದು ಹೇಗೆ?
ಬೆಳೆ ಪರಿಹಾರವನ್ನು ನೇರವಾಗಿ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಆದ್ದರಿಂದ, ಅರ್ಜಿಗಳನ್ನು ಸಲ್ಲಿಸುವ ರೈತರು ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಸರಿಯಾಗಿ ನಮೂದಿಸಬೇಕು ಎಂದು ಸೂಚನೆ ನೀಡಲಾಗಿದೆ.
ಸರಳ ವಿವಾಹವಾಗಿ, ಖರ್ಚಿನ ಹಣವನ್ನು ದೇಣಿಗೆ ನೀಡಿದ ರೈತ ಮುಖಂಡ
ಸಮಿತಿ ರಚನೆ
ಮುಸುಕಿನ ಜೋಳ ಬೆಳೆಗಾರರ ಪಟ್ಟಿಯನ್ನು ಗ್ರಾಮ ಪಂಚಾಯತಿ ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಕಛೇರಿಯ ನಾಮಫಲಕದಲ್ಲಿ ಪ್ರದರ್ಶಿಸಬೇಕು. ಈ ಪಟ್ಟಿಯಲ್ಲಿ ದಾಖಲಾಗದೇ ಇರುವ ಬೆಳೆಗಾರರಿದ್ದರೆ ಅಂತಹ ರೈತರಿಂದ ಅರ್ಜಿಗಳನ್ನು ಪಡೆದು ಹೋಬಳಿ ಮಟ್ಟದಲ್ಲಿ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಹಾಗೂ ಗ್ರಾಮ ಲೆಕ್ಕಿಗರನ್ನೊಳಗೊಂಡ ತಂಡವನ್ನು ರಚಿಸಿ ಸ್ಥಳೀಯವಾಗಿ ಪಂಚನಾಮೆ ಮಾಡಿಕೊಂಡು ಪರಿಹಾರ ವಿತರಿಸಲು ತಾಲೂಕು ಮಟ್ಟದ ಸಮಿತಿಗೆ ಶಿಫಾರಸ್ಸು ಮಾಡಬೇಕು.
ಜಿಲ್ಲಾ ಸಮಿತಿಗೆ ಶಿಫಾರಸು
ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರನ್ನು ಒಳಗೊಂಡಂತೆ ಸಮಿತಿ ರಚಿಸಬೇಕು. ಹೋಬಳಿ ಮಟ್ಟದ ಶಿಫಾರಸ್ಸಿನಂತೆ ಪರಿಶೀಲಿಸಿ ಆರ್ಥಿಕ ನೆರವಿಗೆ ಜಿಲ್ಲಾ ಸಮಿತಿಗೆ ಶಿಫಾರಸ್ಸು ಮಾಡಬೇಕು.
ಜಿಲ್ಲಾಧಿಕಾರಿಗಳ ಸಮಿತಿ
ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ, ಜಂಟಿ ಕೃಷಿ ನಿರ್ದೇಶಕರು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಮತ್ತು ಉಪ ಕೃಷಿ ನಿರ್ದೇಶಕರನ್ನೊಳಗೊಂಡಂತೆ ರಚಿಸಿರುವ ಸಮಿತಿಯಿಂದ ಅನುಮೋದನೆ ಪಡೆಯಬೇಕು. ಆರ್ಥಿಕ ನೆರವನ್ನು ಜಿಲ್ಲಾ ಮಟ್ಟದ ಜಂಟಿ ಕೃಷಿ ನಿರ್ದೇಶಕರಿಗೆ ಬಿಡುಗಡೆ ಮಾಡಲಾಗುವುದು.
ಬ್ಯಾಂಕ್ ಖಾತೆಗೆ ಹಣ
ಜಿಲ್ಲಾ ಸಮಿತಿಯು ಅನುಮೋದಿಸಿದ ಫಲಾನುಭವಿಗಳಿಗೆ ಬೆಳೆ ಪರಿಹಾರವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ರೈತರು ಹೆಚ್ಚಿನ ವಿವರಗಳಿಗೆ ಹತ್ತಿರದ ಕೃಷಿ ಇಲಾಖೆಯ ಕಚೇರಿಗಳನ್ನು ಸಂಪರ್ಕಿಸಬಹುದು.