ಕೊಪ್ಪಳದಲ್ಲಿ ಪೇರಲ ಬೆಳೆ ಸಂಸ್ಕರಣೆ ಕ್ಲಸ್ಟರ್ ಸ್ಥಾಪನೆ
ಕೊಪ್ಪಳ, ಮಾರ್ಚ್ 02: ಕರ್ನಾಟಕ ತೋಟಗಾರಿಕೆ ಇಲಾಖೆ ವತಿಯಿಂದ ಕೊಪ್ಪಳ ಜಿಲ್ಲೆಗೆ 'ಒಂದು ಜಿಲ್ಲೆ ಒಂದು ಬೆಳೆ' ಯೋಜನೆಯಡಿ ಪೇರಲ ಬೆಳೆಯನ್ನು ಆಯ್ಕೆ ಮಾಡಲಾಗಿದೆ. ಜಿಲ್ಲೆಯಲ್ಲಿ ಪೇರಲ ಬೆಳೆಯುವ ಕ್ಷೇತ್ರವನ್ನು ಆಧರಿಸಿ ಈ ಬೆಳೆಯನ್ನು ನಿರ್ಧರಿಸಲಾಗಿದೆ.
ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವ ಆರ್. ಶಂಕರ್ ಪೇರಲ ಬೆಳೆಗೆ ಸಂಬಂಧಿಸಿದಂತೆ ಕೊಪ್ಪಳ ಪೇರಲ ಲಾಂಛನವನ್ನು, ಪೇರಲ ಬೆಳೆ ಕುರಿತ ತಾಂತ್ರಿಕ ಕೈಪಿಡಿಯನ್ನು, ಕೊಪ್ಪಳ ಪೇರಲ ಬಾಕ್ಸ್ ಬಿಡುಗಡೆ ಮಾಡಿದ್ದಾರೆ.
ತೈವಾನ್ ಚೇಪೆಕಾಯಿ ಬೇಸಾಯ; ಕಡಿಮೆ ಖರ್ಚು, ಹೆಚ್ಚು ಆದಾಯ
ಮಾಧ್ಯಮ ಜೊತೆ ಮಾತನಾಡಿದ ಸಚಿವರು, "ರೈತರು ಬೆಳೆದ ಬೆಳೆಗೆ ಉತ್ತಮ ವೇದಿಕೆ, ಮಾರುಕಟ್ಟೆ ಒದಗಿಸುವುದು ಇಲಾಖೆಯ ಉದ್ದೇಶವಾಗಿದೆ. ಒಂದು ಜಿಲ್ಲೆ ಒಂದು ಬೆಳೆ ಯೋಜನೆಯಡಿ ಆಯ್ಕೆಯಾದ ಬೆಳೆಗೆ ಸಾಮಾನ್ಯ ಮೂಲಭೂತ ಸೌಕರ್ಯ, ಬ್ರಾಂಡಿಂಗ್, ಸಂಸ್ಕರಣೆ ಮತ್ತು ರಫ್ತು ಮಾರುಕಟ್ಟೆ ಕುರಿತು ರೈತರಿಗೆ ತರಬೇತಿ ನೀಡಲಾಗುತ್ತಿದೆ" ಎಂದು ಹೇಳಿದರು.
ಕೊಪ್ಪಳ ರೈತನ ಸಾಧನೆ; ಪಪ್ಪಾಯ ಬೆಳೆದು ಒಳ್ಳೆಯ ಆದಾಯ!
"ರೈತರು ಬೆಳೆಯುವ ಯಾವುದೇ ಬೆಳೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲು ರಾಜ್ಯದಲ್ಲಿ ಒಟ್ಟು 715 ಕೃಷಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ರೈತರು ತಮಗೆ ಬೇಕಾದ ಬೆಳೆ, ಬ್ಯಾಂಕ್ ಸಹಾಯ, ಸರ್ಕಾರದ ಸೌಲಭ್ಯ, ಸಬ್ಸಿಡಿ ಮುಂತಾದ ವಿಷಯಗಳ ಕುರಿತು ಮಾಹಿತಿ ಪಡೆಯಬಹುದು" ಎಂದು ಸಚಿವರು ವಿವರಣೆ ನೀಡಿದರು.
ಒಂದು ಜಿಲ್ಲೆ, ಒಂದು ಉತ್ಪನ್ನ; ಧಾರವಾಡಕ್ಕೆ ಮಾವು
"ಕೊಪ್ಪಳ ಜಿಲ್ಲೆಯ ಬಸಾಪುರ ಕೈಗಾರಿಕಾ ವಲಯದಲ್ಲಿ ಪೇರಲ ಬೆಳೆಯ ಸಂಸ್ಕರಣೆ ಕ್ಲಸ್ಟರ್ ಅನ್ನು ಸ್ಥಾಪಿಸಲು ಜಿಲ್ಲಾಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ಸಚಿವರು ಭರವಸೆ ನೀಡಿದರು.
ಕೊಪ್ಪಳ ಜಿಲ್ಲೆಯ 4 ತಾಲೂಕಿಗಳಲ್ಲಿ 700 ಹೆಕ್ಟೇರ್ ಪ್ರದೇಶದಲ್ಲಿ ಪೇರಲ ಬೆಳೆಯನ್ನು ಬೆಳೆಯಲಾಗುತ್ತಿದೆ. ಒಟ್ಟು ಮೂರು ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಇತರೆ ಬೆಳೆಗಳಿಗಿಂತ ಪೇರಲ ಬೆಳೆ ಕೃಷಿಯು ಕಡಿಮೆ ವೆಚ್ಚದ್ದಾಗಿದೆ.
ಪೇರಲ ಬೆಳೆಗೆ ರೋಗಗಳು ಬಾಧಿಸುವುದು ಕಡಿಮೆ ಹಾಗೂ ನಿರ್ವಹಣಾ ವೆಚ್ಚವೂ ಸಹ ಕಡಿಮೆ. ಪೇರಲ ಬೆಳೆಯಲ್ಲಿ ಅಲಹಾಬಾದ್ ಸಫೇದ್, ಬನಾರಸಿ, ನಾಸಿಕ್ ಸೀಬೆ, ಲಕ್ನೋ 49 ಅರ್ಕಾಕಿರಣ್ ಪ್ರಮುಖ ತಳಿಗಳಾಗಿವೆ.