ಗ್ರೆಟಾ ಟ್ವೀಟ್ನಿಂದ ಭಾರತ ವಿರುದ್ಧದ ಅಂತಾರಾಷ್ಟ್ರೀಯ ಸಂಚು ಬಹಿರಂಗವಾಯ್ತೇ?
ನವದೆಹಲಿ, ಫೆಬ್ರವರಿ 4: ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ವಿಚಾರವಾಗಿ ವಿದೇಶದ ಸೆಲೆಬ್ರಿಟಿಗಳು ಏಕಕಾಲಕ್ಕೆ ಧ್ವನಿ ಎತ್ತಿದ್ದಾರೆ. ಇದು ವ್ಯವಸ್ಥಿತ ಪ್ರಚಾರ ಕಾರ್ಯತಂತ್ರ ಎಂದು ಸರ್ಕಾರದ ಪರ ಇರುವ ಅನೇಕರು ಆರೋಪಿಸಿದ್ದಾರೆ. ಅದಕ್ಕೆ ಪೂರಕವಾಗಿ ಸ್ವೀಡನ್ ಮೂಲದ ಯುವ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಮಾಡಿದ್ದ ಟ್ವೀಟ್ ತೀವ್ರ ವಿವಾದ ಸೃಷ್ಟಿಸಿದೆ.
'ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಜತೆಗೆ ನಾವಿದ್ದೇವೆ' ಎಂದು ಗ್ರೆಟಾ ಥನ್ಬರ್ಗ್ ಟ್ವೀಟ್ ಮಾಡಿದ್ದರು. ಈ ಪ್ರತಿಭಟನೆಯ ಕುರಿತಾದ ವಿವರದ 'ಟೂಲ್ಕಿಟ್' ಇಲ್ಲಿದೆ ಎಂಬ ಡಾಕ್ಯುಮೆಂಟ್ ಒಂದನ್ನು ಗ್ರೆಟಾ ಹಂಚಿಕೊಂಡಿದ್ದರು. ಅದರೆ ಕೆಲವೇ ನಿಮಿಷದಲ್ಲಿ ಅವರು ಅದನ್ನು ಡಿಲೀಟ್ ಮಾಡಿದ್ದರು. ಅಷ್ಟರೊಳಗೆ ಆ ಕೊಂಡಿ ತೆರೆದ ಜನರು ಅದರಲ್ಲಿದ್ದ ವಿವರಗಳ ಸ್ಕ್ರೀನ್ಶಾಟ್ಗಳನ್ನು ತೆಗೆದುಕೊಂಡಿದ್ದರು.
ನೀವೂ 'ಸಂಘಿ'ಯಾದ್ರಾ?: ಅನಿಲ್ ಕುಂಬ್ಳೆ ವಿರುದ್ಧ ಟ್ವಿಟ್ಟರಿಗರ ಕಿಡಿ
ಈ ಸ್ಕ್ರೀನ್ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರೈತರ ಪ್ರತಿಭಟನೆ ಮತ್ತು ಅದರ ಪರವಾಗಿ ಸೆಲೆಬ್ರಿಟಿಗಳು ಧ್ವನಿ ಎತ್ತುವುದರ ಹಿಂದೆ ವ್ಯವಸ್ಥಿತವಾದ ಸಂಚು ನಡೆದಿದೆ ಎಂಬ ಆರೋಪಕ್ಕೆ ಸಾಕ್ಷಿ ಇದು ಎಂದು ಹಂಚಿಕೊಳ್ಳುತ್ತಿದ್ದಾರೆ. ಈ ಹಿಂದಿನ ದಾಖಲೆ ಹಳತಾಗಿದ್ದರಿಂದ ಅವರು ಅದನ್ನು ತೆಗೆದುಹಾಕಿದ್ದಾರೆ. ಹೀಗಾಗಿ ಪರಿಷ್ಕೃತ ಟೂಲ್ಕಿಟ್ ಇಲ್ಲಿದೆ ಎಂದು ಗ್ರೆಟಾ ಹೊಸದಾಗಿ ಟ್ವೀಟ್ ಮಾಡಿದ್ದರು. ಅವರ ಟ್ವೀಟ್ ಪ್ರತಿಭಟನೆ ಪರ ಧ್ವನಿ ಎತ್ತುವವರ ಮುಖವಾಡ ಕಳಚಿದೆ ಎಂದು ಸರ್ಕಾರದ ಪರ ನಿಂತಿರುವವರು ಆರೋಪಿಸಿದ್ದಾರೆ. ಮುಂದೆ ಓದಿ.
ಅಂತಾರಾಷ್ಟ್ರೀಯ ಸಂಚು
'ಭಾರತಕ್ಕೆ ಕೆಟ್ಟ ಹೆಸರು ತರಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚು ನಡೆದಿದೆ. ಅದರಲ್ಲಿ ಗ್ರೆಟಾ, ರಿಹಾನ್ನ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ'. 'ಗ್ರೆಟಾಥನ್ಬರ್ಗ್ ಎಕ್ಸ್ಪೋಸ್ಡ್' ಎಂಬ ಹ್ಯಾಶ್ಟ್ಯಾಗ್ ಟ್ರೆಂಡ್ ಆಗಿದೆ. ಗ್ರೆಟಾ ಮೊದಲು ಹಂಚಿಕೊಂಡಿದ್ದ ದಾಖಲೆಯನ್ನು ತಯಾರಿಸಿದ್ದು ಯಾರು ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಇದನ್ನು ಜನವರಿ 23ರಂದು ಸಿದ್ಧಪಡಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ರೈತರಿಗೆ ಪಾಪ್ ಗಾಯಕಿ ಬೆಂಬಲ; ಗರಂ ಆದ ವಿದೇಶಾಂಗ ವ್ಯವಹಾರ ಸಚಿವಾಲಯ
ಮೊದಲೇ ಯೋಜನೆ ಸಿದ್ಧವಾಗಿತ್ತು
ಜನವರಿ 26ರಂದು ಗಣರಾಜ್ಯೋತ್ಸವ ದಿನದಂದು ನಡೆಯಲಿರುವ ರೈತರ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಹಿಂಸಾಚಾರ ನಡೆಯಲಿದೆ ಎನ್ನುವುದು ಮೊದಲೇ ತಿಳಿದಿತ್ತು. ಅದಕ್ಕೆ ಪೂರಕವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಲು ಸಕಲ ಸಿದ್ಧತೆ ನಡೆಸಲಾಗಿತ್ತು. ಆದರೆ ಅವರು ಅಂದುಕೊಂಡ ರೀತಿಯಲ್ಲಿ ಹಿಂಸಾಚಾರ ನಡೆದು ರೈತರು ಸಾಯಲಿಲ್ಲ. ಹೀಗಾಗಿ ಯೋಜನೆ ತಲೆಕೆಳಗಾಯಿತು. ಕೆಲವು ದಿನಗಳ ಬಳಿಕ ಹೊಸ ಯೋಜನೆ ಸಿದ್ಧಪಡಿಸಲಾಯಿತು. ಈಗ ಸೆಲೆಬ್ರಿಟಿಗಳು ಯೋಜನೆಯಂತೆ ಟ್ವೀಟ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಹ್ಯಾಶ್ಟ್ಯಾಗ್ ಟ್ರೆಂಡ್
ಗ್ರೆಟಾ ಹಂಚಿಕೊಂಡಿರುವ ದಾಖಲೆಗಳಲ್ಲಿದ್ದಂತೆ, 'AskIndiaWhy', 'FarmersProtest', TheWorldsWatching' ಮುಂತಾದ ಹ್ಯಾಶ್ಟ್ಯಾಗ್ಗಳನ್ನು ಜನವರಿ 26ರಂದು ಟ್ರೆಂಡ್ ಮಾಡಲು ಉದ್ದೇಶಿಸಲಾಗಿತ್ತು. ಸ್ವಯಂ ಕಾರ್ಯಕರ್ತರು ಕೂಡ ತಮ್ಮ ಸಂಬಂಧಿತ ಪ್ರತಿನಿಧಿಗಳನ್ನು ಟ್ಯಾಗ್ ಮಾಡುವ ಮೂಲಕ ಟ್ರೆಂಡ್ ತೀವ್ರಗೊಳಿಸಲು ಸಲಹೆ ನೀಡಲಾಗಿತ್ತು. ರೈತರ ವಿರುದ್ಧದ ಕ್ರೌರ್ಯದ ಬಗ್ಗೆ ವಿಶ್ವಸಂಸ್ಥೆಗೆ ಮನವರಿಕೆ ಮಾಡಿಕೊಡುವಂತೆ ಯೋಜನೆ ರೂಪಿಸಲಾಗಿತ್ತು ಎಂದು ಆರೋಪಿಸಲಾಗಿದೆ.
'ಗೇಂ ಚೇಂಜರ್' ಆಗಬಹುದಾದ ರೈತರ ಹೋರಾಟದ ಕುರಿತು ಪಾಪ್ ಸಿಂಗರ್ ರಿಹಾನಾ ನೀಡಿದ ಹೇಳಿಕೆ
ವಿಡಿಯೋ, ಟ್ಯಾಗ್, ಸಹಿ ಸಂಗ್ರಹ
'ನೀವು ಹೇಗೆ ಸಹಾಯ ಮಾಡಬಹುದು?' ಎಂಬ ಶೀರ್ಷಿಕೆಯಡಿ ಜನರು ಪ್ರತಿಭಟನಾ ಸ್ಥಳಗಳಿಗೆ ತೆರಳಿ ಪಾಲ್ಗೊಳ್ಳುವಂತೆ, ಫೆಬ್ರವರಿ 21ರಿಂದ 26ರವರೆಗೆ ರೈತರೊಂದಿಗೆ ಅನುಕಂಪದ ವಿಡಿಯೋಗಳನ್ನು ಹಂಚಿಕೊಳ್ಳುವಂತೆ, ಫೆಬ್ರವರಿ 4 ಮತ್ತು 5ರಂದು ಜಾಗತಿಕ ಮಟ್ಟದಲ್ಲಿ ಟ್ವಿಟ್ಟರ್ನಲ್ಲಿ ಸರಣಿ ಟ್ವೀಟ್ಗಳನ್ನು ಮಾಡಿ, ರೈತರನ್ನು ಬೆಂಬಲಿಸಿ ಅರ್ಜಿಗಳಿಗೆ ಸಹಿ ಹಾಕುವ ಅಭಿಯಾನ ನಡೆಸುವಂತೆ ಕೋರಲಾಗಿದೆ.
ಅಗೋಚರ ಶಕ್ತಿ ಕಾಯುತ್ತಿದೆ
ಸೋ ಕಾಲ್ಡ್ ಪ್ರತಿಭಟನೆಯೊಂದನ್ನು ಹೇಗೆ ವ್ಯವಸ್ಥಿತವಾಗಿ ನಿರ್ವಹಿಸಬೇಕು ಎನ್ನುವುದನ್ನು ನಗರನಕ್ಸಲರು + ಖಲಿಸ್ತಾನಿಗಳಿಂದ ಕಲಿಯಬೇಕು ನೋಡಿ. ಈ ಎಳಸು ಹುಡುಗಿ, ಇವತ್ತು ಟ್ವೀಟ್ ಮಾಡಿ ಎಡವಟ್ಟಾಗಿ ಈ Document ಹೊರಗೆ ಬಿಟ್ಟಿದ್ದಾಳೆ (ಈಗ ಟ್ವೀಟ್ ಡಿಲೀಟ್ ಮಾಡಿಸಿದ್ದಾರೆ).
ದೇಶದ ವಿರುದ್ಧ ಹೇಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಹೆಸರು ಮೂಡಿಸುವ ಪ್ರಯತ್ನ ನೋಡಿ. 26ನೇ ತಾರೀಖಿನಂದು ಇವರು ಗಲಭೆ ಎಬ್ಬಿಸಿದಾಗ ಅಪ್ಪಿ ತಪ್ಪಿ ಪೋಲಿಸರು ಒಂದೇ ಒಂದು ಗುಂಡು ಹಾರಿಸಿ ಯಾವನಾದರೂ ಸತ್ತಿದ್ದರೆ #AskIndiaWhy ಪ್ಲಾನ್ ರೆಡಿಯಿತ್ತು. ಈ ನೆಲದ ಅದೃಷ್ಟ ದೊಡ್ಡದು. ದೇಶವನ್ನು ಹಾಳು ಗೆಡವಲು ಸಾವಿರಾರು ಕಳ್ಳರು ಒಂದಾದರೂ, ದೇಶವನ್ನು ಸಾವಿರಾರು ವರ್ಷಗಳಿಂದ ಅಗೋಚರ ಶಕ್ತಿಯೊಂದು ಕಾಯುತ್ತಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.