ಲಾಲ್ಬಾಗಿನಲ್ಲಿ ಮೈವೆತ್ತಿದೆ ದೇಶ-ವಿದೇಶಗಳ ಹಣ್ಣಿನ ಸಾಮ್ರಾಜ್ಯ
ಬೆಂಗಳೂರು,ಫೆಬ್ರವರಿ,25: ಲಿಚ್ಚಿ, ಪಲ್ಸಾ, ಬೇಲ, ಸಿಟ್ರಾನ್, ಕಿನೋ ಮ್ಯಾಂಡ್ರೀನ್, ಬಾರ್ ಬಡನ್ ಚೆಲ್ಲಿ, ಡ್ರಾಗನ್, ಮ್ಯಾಂಗೋಸ್ಟೀನ್, ರಾಮ್ ಭೂತಾನ್, ರಾಸ್ ಬೆರಿ, ಬ್ಲೂಬೆರಿ, ಪಿಯರ್ಸ್....ಇದ್ಯಾವುದೋ ದೇಶದ ಹೆಸರುಗಳ ಪಟ್ಟಿ ಎಂದುಕೊಂಡ್ರಾ? ಖಂಡಿತಾ ಅಲ್ಲಾ ರೀ.. ಕಂಡು ಕೇಳರಿಯದ ಹಣ್ಣಿನ ಹೆಸರುಗಳು ಕಂಡ್ರೀ...ಈ ಎಲ್ಲಾ ಹಣ್ಣುಗಳನ್ನು ನೀವು ಸವಿಬೇಕಾ? ಮನೆಗೆ ಕೊಂಡೊಯ್ಯಬೇಕಾ? ಹಾಗಾದರೆ ಹಣ್ಣಿನ ಕಾಶಿಯಾಗಿ ಮಾರ್ಪಟ್ಟಿರುವ ಲಾಲ್ ಬಾಗಿಗೆ ಭೇಟಿ ನೀಡಿ.
ಹೌದು...ಹಾಪ್ ಕಾಮ್ಸ್ (Horticultural Producer's Cooperative Marketing and Processing Society Ltd) ಸಂಸ್ಥೆಯು ಡಾ. ಎಂ. ಎಚ್ ಮರೀಗೌಡರವರ ಜನ್ಮ ಶತಮಾನೋತ್ಸವದ ಅಂಗವಾಗಿ 'ಬಳಕೆದಾರರಿಗಾಗಿ- ಬೆಳೆಗಾರರಿಗಾಗಿ' ಎಂಬ ಘೋಷವಾಕ್ಯದಡಿ 'ದ್ರಾಕ್ಷಿ-ಕಲ್ಲಂಗಡಿ ಮೇಳ'ವನ್ನು ಫೆ.28ರವರೆಗೆ ಆಯೋಜಿಸಿದ್ದು, ಚೀನಾ, ಆಸ್ಟ್ರೇಲಿಯಾ, ಅರೇಬಿಯಾ ಇನ್ನಿತರ ದೇಶಗಳ ಹಣ್ಣುಗಳನ್ನು ಸವಿಯಲು ವೇದಿಕೆ ನೀಡಿದೆ.[ಲಾಲ್ ಬಾಗಿನಲ್ಲಿ 'ದ್ರಾಕ್ಷಿ, ಕಲ್ಲಂಗಡಿ ಮೇಳ-2016']
ಬಿಸಿಲಿನ ಧಗೆಯ ನಿವಾರಣೆ, ಹಣ್ಣು ಬೆಳೆಯುವ ರೈತರ ಬಾಳಿಗೆ ಬೆಳಕು, ಮಧ್ಯವರ್ತಿಗಳ ಮೋಸ ತಡೆಗಟ್ಟುವಿಕೆ ಹೀಗೆ ಇನ್ನಿತರ ಉದ್ದೇಶಗಳನ್ನು ಇರಿಸಿಕೊಂಡ ಈ ಹಣ್ಣಿನ ಮೇಳ ನಿಮಗೆ ಜ್ಞಾನದ ಬುತ್ತಿ, ವೃತ್ತಿ ಸಾಮರ್ಥ್ಯ, ಉತ್ತಮ ಆರೋಗ್ಯ ನೀಡಲು ಪಣತೊಟ್ಟಿದೆ.[ಬುಧವಾರದಿಂದ ಲಾಲ್ಬಾಗಿನಲ್ಲಿ ಆರಂಭವಾಗಿದೆ ತಾಜಾ ಹಣ್ಣಿನ ಮೇಳ]
ಒಟ್ಟಿನಲ್ಲಿ ಲಾಲ್ ಬಾಗಿನಲ್ಲಿ ವಿವಿಧ ಸಸ್ಯ, ಹೂವುಗಳ ಅಂದ ನೋಡಿ ಆನಂದಪಟ್ಟ, ಹಿರಿಹಿರಿ ಹಿಗ್ಗಿದ ನಿಮಗೆ ಈ ಹಣ್ಣಿನ ಮೇಳ ಜಸ್ಟ್ ಫಾರ್ ಅ ಚೇಂಜ್ ಎಂದೆನಿಸದೆ ಇರದು. ಇದನ್ನು ಆರಂಭಿಸಿರುವ ಹಾಪ್ ಕಾಮ್ಸ್ ಮುಂದಿನ ದಿನಗಳಲ್ಲಿ ಮಾವು, ಹಲಸಿನ ಹಣ್ಣಿನ ಮೇಳ ಹೀಗೆ ನಾನಾ ಮೇಳಗಳಿಗೆ ಮುಂಚಿತವಾಗಿಯೇ ಆಹ್ವಾನ ನೀಡಿದೆ. ಹಾಗಾದರೆ ನಾ ಇನ್ನೂ ತಡಮಾಡಲ್ಲ, ನಿಮಗೆ ಹಣ್ಣಿನ ಮೇಳದಲ್ಲಿ ಏನೆಲ್ಲಾ ವಿಶೇಷತೆ ಯಾವ ಬಗೆಯ ಹಣ್ಣುಗಳು ಮಾರಾಟಕ್ಕಿವೆ, ಅವುಗಳ ಬೆಲೆ ಎಷ್ಟು ಹೀಗೆ ನಾನಾ ಮಾಹಿತಿ ನೀಡ್ತೇನೆ. ತಪ್ಪದೇ ಹೋಗಿ ಬನ್ನಿ
ದ್ರಾಕ್ಷಿ-ಕಲ್ಲಂಗಡಿ ಮೇಳದ ಮೂಲ ಉದ್ದೇಶ ಏನು?
ಹಾಪ್ ಕಾಮ್ಸ್ ಸಂಸ್ಥೆಯ ಮೊದಲ ನಿರ್ದೇಶಕರಾದ ಡಾ. ಎಂ. ಎಚ್ ಮರೀಗೌಡ ಅವರು 2016ಕ್ಕೆ ಶತಾಯುಷಿ ಪಟ್ಟ ಪಡೆದುಕೊಂಡಿದ್ದಾರೆ. ಇವರ ಜನ್ಮ ಶತಮಾನೋತ್ಸವದ ದ್ಯೋತಕವಾಗಿ ಈ ದ್ರಾಕ್ಷಿ-ಕಲ್ಲಂಗಡಿ ಮೇಳವನ್ನು ಐದು ದಿನಗಳ ಕಾಲ ಆಯೋಜಿಸಲಾಗಿದೆ.
ಡಾ. ಎಂ. ಎಚ್ ಮರೀಗೌಡ ಯಾರು?
ಡಾ. ಎಂ, ಎಚ್ ಮರೀಗೌಡ ಅವರು 1916ರಲ್ಲಿ ಜನಿಸಿದರು. ಬಡಜನರಿಗೆ, ರೈತರಿಗೆ ಉತ್ತಮ ಬದುಕನ್ನು ಕಟ್ಟಿಕೊಡಬೇಕೆಂಬ ಮನಸ್ಸು ಉಳ್ಳವರು. ತೋಟಗಾರಿಕಾ ನಿರ್ದೇಶಕರಾಗಿದ್ದ ಇವರು 1959ರಲ್ಲಿ ಹಾಪ್ ಕಾಮ್ಸ್ ಸಂಘವನ್ನು ಸ್ಥಾಪಿಸಿದರು. ಕಳೆದ ೫೭ ವರ್ಷಗಳಿಂದ ರೈತರ ಹಾಗೂ ಗ್ರಾಹಕರ ಹಿತದೃಷ್ಟಿಯನ್ನು ಕಾಯ್ದುಕೊಂಡು ಬಂದಿರುವ ಹಾಪ್ ಕಾಮ್ಸ್ ಸಂಘವನ್ನು ಏಷ್ಯಾ ಖಂಡದಲ್ಲಿಯೇ ಮಾದರಿ ಸಹಕಾರಿ ಸಂಸ್ಥೆಯಾಗಿ ಮಾಡುವಲ್ಲಿ ಶ್ರಮಿಸಿದವರು.
ಹಣ್ಣಿನ ಮೇಳದಲ್ಲಿ ಸಿಗುವ ದ್ರಾಕ್ಷಿಯ ವಿಧಗಳು ಗೊತ್ತಾ?
ದ್ರಾಕ್ಷಿ ಎಂದಾಕ್ಷಣ ನಮಗೆ ಗೊಂಚಲುಗಳು ನೆನಪಾಗುತ್ತದೆ. ಆದರೆ ಯಾವ ಬಗೆಯ ತಳಿ ಎಂದು ತಿಳಿಯುವ ಗೋಜಲಿಗೆ ನಾವು ಹೋಗುವುದೇ ಇಲ್ಲ. ಆದರೆ ನೀವು ದ್ರಾಕ್ಷಿ ತಿನ್ನುವ ಮುನ್ನ ದ್ರಾಕ್ಷಿ ವಿಧಗಳೆಷ್ಟು ತಿಳಿದುಕೊಳ್ಳಿ..ಬೆಂಗಳೂರು ನೀಲಿ, ಶರದ್ ಸೀಡ್ ಲೆಸ್, ಕೃಷ್ಣ ಶರದ್, ಫ್ಲೇಮ್ ಸೀಡ್ ಲೆಸ್, ಥಾಮ್ಸನ್ ಸೀಡ್ ಲೆಸ್, ಸೊನಾಕ, ತಾಜ್ ಗಣೇಶ್, ಇಂಡಿಯನ್ ರೆಡ್ ಗ್ಲೋಬ್, ಇಂಡಿಯನ್ ಬ್ಲಾಕ್ ಗ್ಲೋಬ್, ಕ್ರಿಮ್ ಸನ್ ಸೀಡ್ ಲೆಸ್ ....
ದ್ರಾಕ್ಷಿ ಹಣ್ಣನ್ನು ಏಕೆ ತಿನ್ನಬೇಕು? ಅದರ ಬೆಲೆ ಎಷ್ಟು?
ದ್ರಾಕ್ಷಿ ಹಣ್ಣಿನಲ್ಲಿ ಕಾರ್ಬೋಹೈಡ್ರೆಟ್, ಸಕ್ಕರೆ, ಕೊಬ್ಬು, ಪ್ರೋಟಿನ್, ನಾರಿನಾಂಶ ಹೀಗೆ ನಾನಾ ಪೋಷಕಾಂಶಗಳನ್ನು ಇದು ಒಳಗೊಂಡಿದೆ. ಆರೋಗ್ಯ ವಾಹಿತಿಯಾದ ದ್ರಾಕ್ಷಿಯ ಪ್ರಾರಂಭಿಕ ಬೆಲೆ 1 ಕೆಜಿಗೆ 130 ಇದೆ. 11 ಬಗೆಯಲ್ಲಿ ಕಾಣುವ ದ್ರಾಕ್ಷಿ ಹಣ್ಣಿನ ಬೆಲೆಯು ಅವುಗಳ ಸ್ವಾದ ಮತ್ತು ವಿಧದ ಮೇಲೆ ನಿಗದಿಯಾಗಿದೆ.
ದ್ರಾಕ್ಷಿ ಹೆಸರು ಕೇಳುತ್ತಾ ಕಲ್ಲಂಗಡಿ ಮರೆತೀರಾ?
ವಿವಿಧ ತಳಿಗಳ ದ್ರಾಕ್ಷಿ ಸವಿಯುವ ನಿಮಗೆ ಬೇಸಿಗೆ ದಾಹ ತೀರಿಸುವ ಎರಡು ವಿಧದ ಕಲ್ಲಂಗಡಿ ಹಣ್ಣು ಈ ಹಣ್ಣಿನ ಮೇಳದಲ್ಲಿ ದೊರೆಯಲಿದೆ. ಇಲ್ಲಿ ನಂಬೂದರಿ ಮತ್ತು ಕಿರಣ್ ಎಂಬ ಎರಡು ವಿಧದ ಕಲ್ಲಂಗಡಿ ದೊರೆಯಲಿದೆ. ಕಿರಣ್ ಕಲ್ಲಂಗಡಿ ಎರಡು ಕೆಜಿ ತೂಗಿದರೆ, ನಂಬೂದರಿ 30ಕ್ಕೂ ಹೆಚ್ಚು ತೂಗುತ್ತದೆ. ಒಂದು ಕೆಜಿ ಕಿರಣ್ ಕಲ್ಲಂಗಡಿ, ನಂಬೂದರಿ ಕಲ್ಲಂಗಡಿ ಹಣ್ಣಿಗೆ 17 ರೂ, ಇದೆ. ಕೊಂಡುತನ್ನಿ.
ಕಲ್ಲಂಗಡಿ ಹಣ್ಣಿನಲ್ಲಿರುವ ಪೋಷಕಾಂಶಗಳು?
ಪೊಟ್ಯಾಷಿಯಂ, ಫಾಸ್ಪರಸ್, ಮೆಗ್ನೇಷಿಯಂ, ಕ್ಯಾಲ್ಸಿಯಂ, ಸೋಡಿಯಂ, ಐರಾನ್, ಮ್ಯಾಂಗನೀಸ್, ಕಬ್ಬಿಣ, ಸತು ಇತ್ಯಾದಿ. ಬೇಸಿಗೆಯ ದಾಹಕ್ಕೆ ಇದೊಂದು ಉತ್ತಮ ಹಣ್ಣು ಎಂಬುದರಲ್ಲಿ ಎರಡು ಮಾತಿಲ್ಲ.
ಈ ಹಣ್ಣುಗಳ ಜೊತೆ ಇನ್ನು ಯಾವ ಹಣ್ಣು ನಮ್ಮನ್ನು ಆಕರ್ಷಿಸುತ್ತದೆ?
ಈ ಮೇಳದಲ್ಲಿ ಕಲ್ಲಂಗಡಿ, ದ್ರಾಕ್ಷಿ ಹಣ್ಣಿನ ನಂತರ ಸ್ಥಾನ ಪಡೆದಿರುವುದು ಬಾಳೆಹಣ್ಣು. ಇಲ್ಲಿ ಆರು ವಿಧದ ಅಂದರೆ ಪಚ್ಚೆ ಬಾಳೆ (ಕೆಜಿಗೆ 17ರೂ), ಏಲಕ್ಕಿ ಬಾಳೆ (42 ರೂ), ಸಕ್ಕರೆ ಬಾಳೆ (36 ರೂ), ನೇಂದ್ರಾ ಬಾಳೆ, ಚಂದ್ರಬಾಳೆ (44 ರೂ ), ರಸ ಬಾಳೆ (42 ರೂ) ಲಭ್ಯವಾಗುತ್ತದೆ.
ಅಪರೂಪದ ಹಣ್ಣುಗಳನ್ನು ನೀವು ನೋಡಲೇಬೇಕು
ಲಿಚ್ಚಿ, ಪಲ್ಸಾ, ಬೆಣ್ಣೆ ಹಣ್ಣು, ಬೇಲ, ಸಿಟ್ರಾನ್, ಕಿನೋ ಮ್ಯಾಂಡ್ರೀನ್, ಬಾರ್ ಬಡನ್ ಚೆಲ್ಲಿ, ಡ್ರಾಗನ್ ಫ್ರೂಟ್, ಮ್ಯಾಂಗೋಸ್ಟೀನ್, ರಾಮ್ ಭೂತಾನ್, ರಾಸ್ ಬೆರಿ, ಬ್ಲೂಬೆರಿ, ಪಿಯರ್ಸ್, ಮಿನಿ ಆರೆಮಜ್ , ಅಂಜೂರ, ಸಿಹಿ ಹುಣಸೆ, ಕೊಬ್ಬರಿ ಹಣ್ಣು, ಫ್ಯಾಷನ್ ಪ್ರೂಟ್, ಸ್ಟ್ರಾಬೆರಿ, ನೇರಳೆ, ಬಾರ್ ಬಡನ್ ಚೆರಿ, ಪಲ್ಸಾ, ಮುಳ್ಳುರಾಮ್ ಫಲ, ರಾಮ್ ಫಲ, ಚಕ್ಕೋತಾ, ಕಿನೋ ಮ್ಯಾಂಡ್ರಿನ್ ಇತ್ಯಾದಿ
ಇನ್ನಿತರ ಹಣ್ಣುಗಳ ಬೆಲೆಗಳು ಈ ರೀತಿ ಇದೆ
ಬೋರೆ ಹಣ್ಣು-29 ರೂ, ತೈವಾನ್ ಸೀಬೆ- 134ರೂ, ಪನ್ನೆರಳೆ- 232, ಆಸ್ಟ್ರೇಲಿಯಾ ಪ್ಲಮ್ಸ್ 1 ಹಣ್ಣಿಗೆ 35, ಒಂದು ಕೆ.ಜಿಗೆ 375 ರೂ, ದಾಳಿಂಬೆ ಬಾಗ್ವಾ, ಸಪೋಟಾ ಹೀಗೆ ನಾನಾ ಹಣ್ಣುಗಳು ಲಭ್ಯವಿದೆ.
ಒಳ ಪ್ರವೇಶಕ್ಕೆ ಹಣವಿದೆ?
ದ್ರಾಕ್ಷಿ-ಕಲ್ಲಂಗಡಿ ಮೇಳ ನೋಡಲು ಲಾಲ್ ಬಾಗ್ ಒಳಗೆ ಹೋಗಲು 20 ರೂ, ಕ್ಯಾಮರ ತೆಗೆದುಕೊಂಡು ಹೋಗಬೇಕಾದಲ್ಲಿ 50ರೂ ನೀಡಲೇಬೇಕು. ಒಟ್ಟಿನಲ್ಲಿ ನಿಮ್ಮ ಜೇಬಿನಲ್ಲಿ 70ರೂ ಇದ್ದರೆ ಒಳಗೆ ಪ್ರವೇಶ ಸಿಗಲಿದೆ.
ಒಳಹೋದರೆ ಬೋರೋ ಬೋರೋ
ನೀವು ದೇಶ ವಿದೇಶ ಹಣ್ಣುಗಳೇನೋ ಕಾಣಬಹುದು. ಆದರೆ ಲಾಲ್ ಬಾಗಿನಲ್ಲಿ ನಡೆಯುತ್ತಿರುವ ಹಣ್ಣಿನ ಮೇಳ ಜನರಿಂದ ತುಂಬಿ ತುಳುಕುತ್ತಿರುತ್ತದೆ ಎಂದು ಅಲ್ಲಿಗೆ ತೆರಳಿದರೆ ನಿರಾಸೆ ಖಂಡಿತ. ಒಟ್ಟಿನಲ್ಲಿ ದಗೆ ದಗೆ ಬಿಸಿಲಿನ ನಡುವೆ ಜನಜಂಗುಳಿ ಇಲ್ಲದ ವಾತಾವರಣ ಬೇಸರ ತರಿಸುತ್ತದೆ.
ಹಣ್ಣಿನ ಮೇಳದ ಬಗ್ಗೆ ಜನರ ಅಭಿಪ್ರಾಯವೇನು?
ಈ ಹಣ್ಣಿನ ಮೇಳವು ಸದಾಕಾಲ ಮನೆಯಲ್ಲಿರುವವರಿಗೆ ಸಮಯ ಕಳೆಯಲು, ಮಕ್ಕಳಿಗೆ ದೇಶ ವಿದೇಶ ಹೆಸರುಗಳನ್ನು ತಿಳಿಸಲು ಪುರಕವಾಗಿದೆ. ನಶಿಸಿ ಹೋಗುತ್ತಿರುವ ಹಲವು ಹಣ್ಣುಗಳನ್ನು ನೋಡಲು ಇದೊಂದು ಸದಾವಕಾಶ, ಕಣ್ಣಿಗೆ ಒಂದು ರೀತಿಯ ಹಬ್ಬ ಎಂದು ದೇವರ ಚಿಕ್ಕ ಹಳ್ಳಿಯ ಶಾಂತ ಮಲೇಗೌಡ ಹಣ್ಣಿನ ಮೇಳದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.