ರೈತರ ಈ ನಡೆಯಿಂದ ಸರ್ಕಾರಕ್ಕೆ ತುಂಬಾ ನೋವಾಗಿದೆ; ರಕ್ಷಣಾ ಸಚಿವ
ನವದೆಹಲಿ, ಡಿಸೆಂಬರ್ 30: ರೈತರು ನಮ್ಮ ಅನ್ನದಾತರು ಹಾಗೂ ಈ ದೇಶದ ಆರ್ಥಿಕತೆಯ ಬೆನ್ನೆಲುಬು. ಆದರೆ ಪ್ರತಿಭಟನಾ ನಿರತ ರೈತರನ್ನು ನಕ್ಸಲ್ ಗಳು, ಖಲಿಸ್ತಾನಿಗಳು ಎಂದು ಕರೆಯುವುದು ಸರಿಯಲ್ಲ. ರೈತರ ವಿರುದ್ಧವಾಗಿ ಯಾರೂ ಆರೋಪ ಮಾಡಬಾರದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರೈತರ ಪರ ಮಾತನಾಡಿದ್ದಾರೆ.
ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಅವರು, "ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಪ್ರತಿಭಟನೆ ಕೈಗೊಂಡಿರುವ ರೈತರು ಎರಡು ವರ್ಷಗಳ ಅವಧಿ ಈ ಕಾಯ್ದೆಗಳ ಜಾರಿಗೆ ಒಪ್ಪಿಗೆ ನೀಡಿ, ಕಾಯ್ದೆಗಳ ಉಪಯೋಗ ಅನುಪಯೋಗವನ್ನು ಅರಿತುಕೊಂಡರೆ ಉತ್ತಮ" ಎಂದರು.
ಕನಿಷ್ಠ ಬೆಂಬಲ ಬೆಲೆ ಮುಂದುವರಿಕೆ: ರೈತರ ಜಮೀನನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ: ರಾಜನಾಥ್ ಸಿಂಗ್
ಆದರೆ ರೈತರು ಕೈಗೊಂಡಿರುವ ಪ್ರತಿಭಟನೆಯಿಂದ ಸರ್ಕಾರಕ್ಕೆ ತುಂಬಾ ನೋವಾಗಿದೆ ಎಂದು ಹೇಳಿದರು.
"ರೈತರ ಮೇಲೆ ಯಾವುದೇ ಆರೋಪ ಮಾಡುವುದು ಸರಿಯಲ್ಲ. ನಮಗೆ ರೈತರ ಮೇಲೆ ಅಪಾರ ಗೌರವವಿದೆ. ಅವರಿಗೆ ನಾವು ತಲೆ ಬಾಗುತ್ತೇವೆ. ಅವರು ನಮ್ಮ ಅನ್ನದಾತರು. ಆರ್ಥಿಕ ಹಿಂಜರಿತದ ಸಮಯದಲ್ಲಿ ಆ ಸಮಸ್ಯೆಯಿಂದ ಭಾರತವನ್ನು ಹೊರತರುವ ಜವಾಬ್ದಾರಿ ಹೊತ್ತವರು ರೈತರು. ಹಲವು ಸಂದರ್ಭಗಳಲ್ಲಿ ನಮ್ಮ ದೇಶವನ್ನು ರೈತರು ಸಮಸ್ಯೆಯಿಂದ ಮುಕ್ತಗೊಳಿಸಿದ್ದಾರೆ" ಎಂದರು.
ಪ್ರತಿಭಟನಾ ನಿರತ ರೈತರು ಸರ್ಕಾರದೊಂದಿಗೆ ತಾರ್ಕಿಕವಾಗಿ ಚರ್ಚೆ ನಡೆಸಬೇಕು. ನಾವು ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇವೆ. ಈ ಕಾಯ್ದೆಗಳನ್ನು ಎರಡು ವರ್ಷವಾದರೂ ಪ್ರಾಯೋಗಿಕವಾಗಿ ಜಾರಿಯಲ್ಲಿಡಬೇಕು. ಆಗ ರೈತರಿಗೆ ಈ ಕಾಯ್ದೆಗಳ ಚಿತ್ರಣ ಸಿಗುತ್ತದೆ. ಆನಂತರವೂ ಕಾಯ್ದೆ ಬಗ್ಗೆ ತಕರಾರಿದ್ದರೆ ತಿದ್ದುಪಡಿಯನ್ನು ಖಂಡಿತ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಈ ಕಾಯ್ದೆಗಳ ಮುಖಾಂತರ ರೈತರ ಆರ್ಥಿಕ ಸ್ಥಿತಿಯನ್ನು ಅಭಿವೃದ್ಧಿಪಡಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡರು.
ಬುಧವಾರ ಈ ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ರೈತರ ನಡುವೆ ಮಾತುಕತೆ ನಡೆಯುತ್ತಿದ್ದು, ಅದಕ್ಕೆ ಮುನ್ನ ರಕ್ಷಣಾ ಸಚಿವರು ರೈತರನ್ನುದ್ದೇಶಿಸಿ ಮಾತನಾಡಿದ್ದಾರೆ.