ಗೊಬ್ಬರದ ಮೇಲಿನ ಜಿಎಸ್ ಟಿ ಶೇ 12ರಿಂದ 5ಕ್ಕೆ ಇಳಿಕೆ, ರೈತರು ನಿರಾಳ
ನವದೆಹಲಿ, ಜೂನ್ 30: ಜಿಎಸ್ ಟಿ ಜಾರಿಯ ಕೆಲ ಗಂಟೆಗಳ ಮುಂಚೆ ಗೊಬ್ಬರದ ಮೇಲೆ ತೆರಿಗೆಯನ್ನು ಶೇ ಹನ್ನೆರಡರಿಂದ ಐದಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಇದರಿಂದ ಬೆಲೆ ಏರಿಕೆಯಾಗಿ, ರೈತರಿಗೆ ಹೊರೆಯಾಗಬಾರದು ಎಂಬ ಕಾರಣಕ್ಕೆ ಈ ತೀರ್ಮಾನಕ್ಕೆ ಬರಲಾಗಿದೆ.
ಜಿಎಸ್ ಟಿ: ತೆರಿಗೆದಾರರ 10 ಪ್ರಶ್ನೆಗಳಿಗೆ ನಮ್ಮ ಉತ್ತರ
ಗೊಬ್ಬರದ ಮೇಲೆ ಹನ್ನೆರಡು ಪ್ರತಿಶತ ಜಿಎಸ್ ಟಿ ಹೆಚ್ಚಾಯಿತು. ಇದರಿಂದ ರೈತರ ಮೇಲೆ ಹೊರೆ ಬಿದ್ದಂತಾಗುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟರು. ಆ ನಂತರ ಸಮಿತಿಯಲ್ಲಿ ಈ ಬಗ್ಗೆ ಒಮ್ಮತಾಭಿಪ್ರಾಯದಿಂದ ಐದು ಪರ್ಸೆಂಟ್ ಗೆ ಇಳಿಸಲಾಯಿತು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ವಿವಿಧ ರಾಜ್ಯಗಳಲ್ಲಿ ಸದ್ಯಕ್ಕೆ ಗೊಬ್ಬರದ ಮೇಲಿನ ತೆರಿಗೆ ಶೇ ಸೊನ್ನೆಯಿಂದ ಆರರಷ್ಟಿದೆ. ಹನ್ನೆರಡರಷ್ಟು ಜಿಎಸ್ ಟಿ ಹಾಕುವುದರಿಂದ ಪ್ರತಿ ಐವತ್ತು ಕೆಜಿ ಗೊಬ್ಬರಕ್ಕೆ ಮೂವತ್ತರಿಂದ ನೂರಾ ಇಪ್ಪತ್ತು ರುಪಾಯಿ ದುಬಾರಿಯಾಗುತ್ತಿತ್ತು. ಪಂಜಾಬ್, ಹರಿಯಾಣ, ಆಂಧ್ರಪ್ರದೇಶ ಮತ್ತಿತರ ಕಡೆ ಗೊಬ್ಬರಕ್ಕೆ ತೆರಿಗೆ ವಿಧಿಸುತ್ತಿಲ್ಲ.
ಶ್ರೀಸಾಮಾನ್ಯರಿಗೆ ಅನ್ವಯವಾಗುವ ಜಿಎಸ್ಟಿ ದರಗಳ ಅಂತಿಮ ಪಟ್ಟಿ ಇಲ್ಲಿದೆ
ರೈತರ ಹಿತ ಕಾಯುವ ದೃಷ್ಟಿಯಿಂದ ಗೊಬ್ಬರದ ಮೇಲಿನ ಜಿಎಸ್ ಟಿ ದರ ಇಳಿಸುವಂತೆ ಹಲವು ಮನವಿ ಮಾಡಲಾಗಿತ್ತು. ಇಷ್ಟು ತೆರಿಗೆ ವಿಧಿಸಿದರೆ ವೆಚ್ಚ ಹೆಚ್ಚಾಗಿ, ರೈತರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ತಿಳಿಸಲಾಗಿತ್ತು. ಅಂದಹಾಗೆ ಮುಂದಿನ ಐದು ವರ್ಷಗಳಲ್ಲಿ ರೈತರ ಆದಾಯ ದ್ವಿಗುಣಗೊಳ್ಳಬೇಕು ಎಂಬುದು ಸರಕಾರದ ಆಶಯವಾಗಿದೆ.
ಜಿಎಸ್ ಟಿ ಪರಿಚಯಿಸುವ ಕಾರ್ಯಕ್ರಮ ಶುಕ್ರವಾರ ರಾತ್ರಿ ಸಂಸತ್ ನಲ್ಲಿ ನಡೆಯಲಿದೆ. ಇದರಿಂದ ದೇಶದ ಜಿಡಿಪಿ ಶೇ ಎರಡರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.