ಈರುಳ್ಳಿ ಸಂಗ್ರಹದ ಮೇಲೆ ಮಿತಿ ವಿಧಿಸಿದ ಕೇಂದ್ರ ಸರ್ಕಾರ
ನವದೆಹಲಿ, ಅಕ್ಟೋಬರ್ 24: ದೇಶದ ಅನೇಕ ಭಾಗಗಳಲ್ಲಿ ಈರುಳ್ಳಿ ದರ ಕೆಜಿಗೆ 100 ರೂ. ದಾಟಿದೆ. ಇನ್ನು ಕೆಲವು ಕಡೆಗಳಲ್ಲಿ 100 ರೂ. ಗಿಂತ ಕಡಿಮೆ ಇದ್ದು, ಶತಕ ತಲುಪುವ ಸನ್ನಿಹಿತದಲ್ಲಿದೆ. ಈಗಾಗಲೇ ಈರುಳ್ಳಿ ರಫ್ತಿನ ಮೇಲೆ ನಿರ್ಬಂಧ ಹೇರಿ ಆಮದಿಗೆ ಉತ್ತೇಜನ ನೀಡಿರುವ ಕೇಂದ್ರ ಸರ್ಕಾರ, ಚಿಲ್ಲರೆ ಹಾಗೂ ಹೋಲ್ಸೇಲ್ ಮಾರಾಟಗಾರರು ಈರುಳ್ಳಿ ಸಂಗ್ರಹ ಮಾಡುವುದರ ಮೇಲೆ ಮಿತಿ ಹೇರಿದೆ.
ಅಗತ್ಯವಸ್ತುಗಳ ಕಾಯ್ದೆಗೆ ಕೆಲವು ದಿನಗಳ ಹಿಂದಷ್ಟೇ ತಿದ್ದುಪಡಿ ತಂದಿದ್ದ ಸರ್ಕಾರ, ಅಗತ್ಯ ವಸ್ತುಗಳ ಪಟ್ಟಿಯಿಂದ ಈರುಳ್ಳಿಯನ್ನು ಕೈಬಿಟ್ಟಿತ್ತು. ಆದರೆ ಈಗ ಬೆಲೆ ಏರಿಕೆ ತಡೆಯುವ ಉದ್ದೇಶದಿಂದ ಈರುಳ್ಳಿ ಸಂಗ್ರಹದ ಮೇಲೆ ಮಿತಿ ವಿಧಿಸಿದೆ.
ಚಿಲ್ಲರೆ ಮಾರಾಟಗಾರರು 20 ಕ್ವಿಂಟಲ್ ಹಾಗೂ ಸಗಟು ಮಾರಾಟಗಾರರು 250 ಕ್ವಿಂಟಲ್ ಈರುಳ್ಳಿ ಸಂಗ್ರಹ ಮಾಡಬಹುದಾಗಿದೆ. ದೇಶದ ಅನೇಕ ನಗರಗಳಲ್ಲಿ ಈರುಳ್ಳಿ ದರ ತೀರಾ ಹೆಚ್ಚಾಗಿದೆ. ಇದರಿಂದ ಪೂರೈಕೆಯ ಕೃತಕ ಅಭಾವ ಉಂಟಾಗಿ ಮತ್ತಷ್ಟು ದರ ಹೆಚ್ಚುವಂತೆ ಮಾಡುವುದನ್ನು ತಡೆಯಲು ಕೇಂದ್ರ ಸರ್ಕಾರ ಈ ಆದೇಶ ಹೊರಡಿಸಿದೆ.
ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಈ ಬಾರಿ 43 ಲಕ್ಷ ಟನ್ ಈರುಳ್ಳಿ ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಮಳೆ, ಪ್ರವಾಹದಿಂದ ಬೆಳೆ ನಾಶವಾಗಿದ್ದು, ಉತ್ಪಾದನೆಯ ಅಂದಾಜನ್ನು 36 ಲಕ್ಷ ಟನ್ಗೆ ಪರಿಷ್ಕರಿಸಲಾಗಿದೆ.