ಮೈಷುಗರ್ ಕಾರ್ಖಾನೆಯ ಗೊಂದಲಕ್ಕೆ ತೆರೆ ಬೀಳುತ್ತಾ?
ಮಂಡ್ಯ, ಮೇ 16: ಮೈಷುಗರ್ ಕಾರ್ಖಾನೆಯನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವ ನಿರ್ಧಾರದಿಂದ ಹಿಂದೆ ಸರಿದಿರುವ ಸರ್ಕಾರ, ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಮಾತ್ರ ಖಾಸಗಿಯವರಿಗೆ ವಹಿಸಲು ನಿರ್ಧರಿಸಿದೆ ಎಂದು ಹೇಳಲಾಗಿದೆ.
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮೈಷುಗರ್ ಕಾರ್ಖಾನೆಯ ವಿಚಾರವನ್ನು ಚರ್ಚೆಗೆ ತರಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆಂದು ಹೇಳಲಾಗುತ್ತಿದ್ದು, ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನಷ್ಟೇ ಖಾಸಗಿಯವರಿಗೆ ವಹಿಸಿ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ತೀರ್ಮಾನಿಸಲಾಗಿದೆ.
ಮಂಡ್ಯದಲ್ಲಿ ಕಬ್ಬು ಕಟಾವು; ಜೆಡಿಎಸ್ ಶಾಸಕರಿಂದ ಜಿಲ್ಲಾಧಿಕಾರಿ ಭೇಟಿ
ಆದರೆ ಮಾಲೀಕತ್ವ ಮಾತ್ರ ಸರ್ಕಾರದ ಬಳಿಯೇ ಇರಲಿದೆಯಂತೆ. ಮೈಷುಗರ್ ಖಾಸಗೀಕರಣಗೊಳಿಸಲು ರಾಜ್ಯಸರ್ಕಾರ ಈ ಮೊದಲು ನಿರ್ಧಾರ ಕೈಗೊಂಡಿತ್ತು. ಎಲ್ಲ ಸರ್ಕಾರಗಳು ಕಾರ್ಖಾನೆ ಅಭಿವೃದ್ಧಿಗೆ 350 ಕೋಟಿ ರೂ.ಗಿಂತ ಹೆಚ್ಚು ಹಣ ನೀಡಿದ್ದರೂ ಇದುವರೆಗೆ ಕಂಪನಿ ಪುನಶ್ಚೇತನ ಕಾಣಲಿಲ್ಲ. ಇನ್ನು ಸರ್ಕಾರದಿಂದ ಹಣ ಕೊಡಲು ಸಾಧ್ಯವಿಲ್ಲ. ಖಾಸಗಿಯವರಿಗೆ ವಹಿಸುವುದೇ ಉತ್ತಮ ಎಂಬ ನಿರ್ಧಾರಕ್ಕೆ ಬರಲಾಗಿತ್ತು.
ಮೈಷುಗರ್ ಕೈಬಿಟ್ಟು ಹೋಗುವ ಆತಂಕ
ರಾಜ್ಯಸರ್ಕಾರ ಕೈಗೊಂಡ ನಿರ್ಧಾರಕ್ಕೆ ಜಿಲ್ಲೆಯ ರೈತ ಮುಖಂಡರು, ಜನಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮೈಷುಗರ್ ಕಾರ್ಖಾನೆ ಖಾಸಗೀಕರಣಗೊಳಿಸಿದಲ್ಲಿ ಕಾರ್ಖಾನೆಯ ಸುಮಾರು 250 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿ ಕೈಬಿಟ್ಟುಹೋಗುವ ಆತಂಕವಿದೆ. ಕಾರ್ಖಾನೆಯ ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನಷ್ಟೇ ಖಾಸಗಿಯವರಿಗೆ ವಹಿಸಿ ಕಾರ್ಖಾನೆಯ ಮಾಲೀಕತ್ವ ಸರ್ಕಾರದ ಬಳಿಯೇ ಇರಬೇಕು ಎಂದು ಒತ್ತಾಯಿಸಿದ್ದರು.
ಮೈಷುಗರ್ ಖಾಸಗೀಕರಣಗೊಳಿಸುವ ಸರ್ಕಾರದ ನಿರ್ಧಾರವನ್ನು ಸಂಸದೆ ಸುಮಲತಾ ಅಂಬರೀಶ್ ಹಾಗೂ ಕೆಲವು ಕಬ್ಬು ಬೆಳೆಗಾರರು ಬೆಂಬಲಿಸಿದ್ದರು. ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಿ ಸಕಾಲದಲ್ಲಿ ಕಬ್ಬು ಅರೆಯುವಂತಾದರೆ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಹಾಗಾಗಿ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವುದನ್ನು ಬೆಂಬಲಿಸಿದ್ದರು.
ಸಂಕಷ್ಟಕ್ಕೆ ಸಿಲುಕಿದ ಕಬ್ಬು ಬೆಳೆಗಾರರು
ಮೈಷುಗರ್ ಹಾಗೂ ಪಿಎಸ್ಎಸ್ಕೆ ಕಾರ್ಖಾನೆ ಸ್ಥಗಿತಗೊಂಡಿದ್ದರಿಂದ ಈ ವ್ಯಾಪಿಯ ಕಬ್ಬನ್ನು ಹೊರಗಿನ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ. ನೆರೆ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುವ ಕಬ್ಬು ಸಾಗಣೆ ವೆಚ್ಚ ಹೆಚ್ಚಿದ್ದು, ಸರ್ಕಾರ ಅದನ್ನು ಭರಿಸಲಾಗದ ಸ್ಥಿತಿಯಲ್ಲಿದೆ. ಕಳೆದ ವರ್ಷದ ಕಬ್ಬು ಸಾಗಣೆ ವೆಚ್ಚ 4.50 ಕೋಟಿ ರೂ. ಹಣವನ್ನು ಬೆಳೆಗಾರರಿಗೆ ಸರ್ಕಾರ ನೀಡದೆ ಬಾಕಿ ಉಳಿಸಿಕೊಂಡಿದೆ. ಇದರಿಂದ ಕಬ್ಬು ಬೆಳೆಗಾರರು ಸಂಕಷ್ಟ ಪರಿಸ್ಥಿತಿಗೆ ಸಿಲುಕಿದ್ದಾರೆ. ಹಾಗಾಗಿ ಈ ಎರಡೂ ಕಾರ್ಖಾನೆಗಳ ಕಾರ್ಯಾರಂಭ ತುರ್ತು ಅಗತ್ಯ ಮತ್ತು ಅನಿವಾರ್ಯವಾಗಿದೆ.
ಬೇರೆ ಕಾರ್ಖಾನೆಗಳಿಗೆ ಕಬ್ಬು ರವಾನೆ
ಜಿಲ್ಲಾ ವ್ಯಾಪ್ತಿಯೊಳಗೆ ಪ್ರಸ್ತುತ 36 ಲಕ್ಷ ಟನ್ ಕಬ್ಬು ಉತ್ಪಾದನೆಯಾಗುತ್ತಿದೆ. ಈ ಎಲ್ಲ ಕಬ್ಬನ್ನು ಮೂರು ಸಕ್ಕರೆ ಕಾರ್ಖಾನೆಗಳಿಂದ ಅರೆಯಲು ಸಾಧ್ಯವಾಗದೆ ಕುಂತೂರು ಸಕ್ಕರೆ ಕಾರ್ಖಾನೆ, ತಮಿಳುನಾಡಿನ ಶಕ್ತಿ ಷುಗರ್ಸ್ ಹಾಗೂ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸಲಾಗುತ್ತಿದೆ. ಇದು ತಪ್ಪಬೇಕಾದರೆ ಮೈಷುಗರ್ ಕಾರ್ಖಾನೆಯ ಕಾರ್ಯಾಚರಣೆ ಹಾಗೂ ನಿರ್ವಹಣೆಯನ್ನು ಖಾಸಗಿಯವರಿಗೆ ತ್ವರಿತವಾಗಿ ವಹಿಸಿ ಕಾರ್ಖಾನೆಯನ್ನು ಸಮರ್ಥವಾಗಿ ಮುನ್ನಡೆಸುವುದು ಅಗತ್ಯವಾಗಿದೆ. ಅದೇ ರೀತಿ ಕಾರ್ಖಾನೆಯ ಒಡೆತನವನ್ನು ಸರ್ಕಾರದ ಬಳಿಯೇ ಇಟ್ಟುಕೊಂಡಾಗ ಮೈಷುಗರ್ ಅಸ್ತಿತ್ವಕ್ಕೂ ಧಕ್ಕೆಯಾಗುವುದಿಲ್ಲ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಈ ನಡುವೆ ಶನಿವಾರ ಸಭೆ ನಡೆಸಿರುವ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮೈಷುಗರ್ ಸಕ್ಕರೆ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಯಬೇಕು, ತಕ್ಷಣ ಕಾರ್ಖಾನೆ ಪ್ರಾರಂಭ ಆಗಲೇಬೇಕು ಎಂಬುದು ಸೇರಿದಂತೆ ವಿವಿಧ ಪ್ರಮುಖ ನಿರ್ಣಯಗಳನ್ನು ಕೈಗೊಂಡಿದೆ.
ಮೈಷುಗರ್ ಅಭಿವೃದ್ಧಿಗೆ ನಿರ್ಣಯ
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ಕಾರಿ ಸ್ವಾಮ್ಯದಲ್ಲೇ ಮೈಷುಗರ್ ಉಳಿಯಬೇಕು. ತಕ್ಷಣ ಕಾರ್ಖಾನೆ ಪ್ರಾರಂಭ ಆಗಲೇಬೇಕು. ಮೈಷುಗರ್ ಕಾರ್ಖಾನೆಯನ್ನು ಸರ್ಕಾರ ಖಾಸಗೀಕರಣ ಮಾಡುವುದನ್ನು ಕೈಬಿಟ್ಟು ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಸದೆ ಏನಾದರೂ ವ್ಯತಿರಿಕ್ತ ತೀರ್ಮಾನ ಕೈಗೊಂಡರೆ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ತಕ್ಷಣ ಸಭೆ ಸೇರಿ ಮುಂದಿನ ಹೋರಾಟ ರೂಪಿಸಲಿದ್ದು, ಕಳೆದ 20 ವರ್ಷದಿಂದ ಮೈಷುಗರ್ ಕಾರ್ಖಾನೆಗೆ ನೀಡಿರುವ ಅನುದಾನ ಹಾಗೂ ವೆಚ್ಚ ಮತ್ತು ನಿರ್ವಹಣೆಯ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಲಾಗಿದೆ.