ದೆಹಲಿಗೆ ಮುತ್ತಿಗೆ ಹಾಕಲು ಹೊರಟ ಲಕ್ಷಾಂತರ ರೈತರು: ತೀವ್ರ ಸಂಘರ್ಷ ಸಾಧ್ಯತೆ
ಚಂಡೀಗಡ, ನವೆಂಬರ್ 26: ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್ನ ರೈತರು ದೆಹಲಿಗೆ ಪ್ರತಿಭಟನಾ ಮೆರವಣಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸುತ್ತಮುತ್ತಲೂ ಭಾರಿ ಬಿಗಿಭದ್ರತೆ ವಹಿಸಲಾಗಿದೆ. ರೈತರು 'ದೆಹಲಿ ಚಲೋ' ಪ್ರತಿಭಟನೆಯ ಸಲುವಾಗಿ ತೆರಳುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿಯಲ್ಲಿ ಮೆಟ್ರೋ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಹರಿಯಾಣವು ಪಂಜಾಬ್ ಜತೆಗಿನ ತನ್ನ ಗಡಿಯನ್ನು ಮುಚ್ಚಿದೆ.
ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ, ಕೇರಳ ಮತ್ತು ಪಂಜಾಬ್ನ ರೈತರು ಕೂಡ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಗರದಲ್ಲಿ ಯಾವುದೇ ಪ್ರತಿಭಟನಾ ಮೆರವಣಿಗೆಗೆ ಅವಕಾಶ ನೀಡುವುದಿಲ್ಲ ಎಂದು ದೆಹಲಿ ಸರ್ಕಾರ ಸ್ಪಷ್ಟಪಡಿಸಿದೆ. ಹೀಗಾಗಿ ಗುರುಗ್ರಾಮ ಮತ್ತು ಫರೀದಾಬಾದ್ ಗಡಿ ಭಾಗಗಳಲ್ಲಿ ಭಾರಿ ಭದ್ರತೆ ಕಲ್ಪಿಸಲಾಗಿದೆ.
ನ.26, 27 ರಂದು ದೆಹಲಿಯಲ್ಲಿ ರೈತರ ಬೃಹತ್ ಪ್ರತಿಭಟನೆ
ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಆದೇಶಕ್ಕೆ ಅನುಗುಣವಾಗಿ ಪಂಜಾಬ್ನೊಂದಿಗಿನ ಹರಿಯಾಣದ ಗಡಿಗಳನ್ನು ಗುರುವಾರ ಮತ್ತು ಶುಕ್ರವಾರ ಬಂದ್ ಮಾಡಲಾಗಿದೆ. ಗಡಿಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದ್ದು, ಪಂಜಾಬ್ಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಹತ್ತಿಕ್ಕಲು ಜಲಫಿರಂಗಿ ಮತ್ತು ಗಲಭೆ ನಿಯಂತ್ರಕ ವಾಹನಗಳನ್ನು ನಿಯೋಜಿಸಲಾಗಿದೆ. ರಾಜ್ಯದಲ್ಲಿ ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಮುಂದೆ ಓದಿ.
ಹರಿಯಾಣ ಗಡಿಯಲ್ಲಿ ರೈತರು
ಇನ್ನು ಎರಡು ದಿನಗಳ ಕಾಲ ಪಂಜಾಬ್ಗೆ ಯಾವುದೇ ಬಸ್ ಸೇವೆಗಳನ್ನು ಸಹ ಹರಿಯಾಣ ಸ್ಥಗಿತಗೊಳಿಸಿದೆ. ತಡೆಯೊಡ್ಡಿರುವ ರಸ್ತೆಗಳಿಂದ ಎಲ್ಲ ಸಂಚಾರಗಳ ಮಾರ್ಗಗಳನ್ನು ಬದಲಿಸಲಾಗಿದೆ. ದೆಹಲಿಯತ್ತ ಮೆರವಣಿಗೆ ಹೊರಟಿರುವ ಪಂಜಾಬ್ ರೈತರು ಬುಧವಾರ ರಾತ್ರಿ ಹರಿಯಾಣ ಗಡಿಯಲ್ಲಿ ಬೀಡುಬಿಟ್ಟಿದ್ದರು. ಹರಿಯಾಣದಲ್ಲಿ ತಮ್ಮನ್ನು ಎಲ್ಲಿ ತಡೆದರೂ ಅಲ್ಲಿಯೇ ಕುಳಿತು ಪ್ರತಿಭಟನೆ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. ಸುಮಾರು ಎರಡು ಲಕ್ಷ ರೈತರು ಹರಿಯಾಣ ಪ್ರವೇಶಿಸಲಿದ್ದಾರೆ ಎಂದು ಭಾರತೀಯ ಕಿಸಾನ್ ಒಕ್ಕೂಟ ತಿಳಿಸಿದೆ.
Array |
ದಿನಸಿ, ತರಕಾರಿ ತಂದಿರುವ ರೈತರು
ಪ್ರತಿಭಟನೆಗೆ ಬಂದಿರುವ ರೈತರು ದಿನಸಿ, ತರಕಾರಿಗಳು, ಕಟ್ಟಿಗೆ, ಪಾತ್ರೆಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ತಮ್ಮೊಂದಿಗೆ ತಂದಿದ್ದಾರೆ. ಚಳಿ ವಾತಾವರಣ ಇರುವುದರಿಂದ ಬ್ಲಾಂಕೆಟ್ಗಳನ್ನು ತಂದಿದ್ದಾರೆ. ಬುಧವಾರ ದೆಹಲಿಯತ್ತ ಪ್ರತಿಭಟನೆಗೆ ತೆರಳುತ್ತಿದ್ದ ರೈತರನ್ನು ತಡೆಯುವಲ್ಲಿ ಹರಿಯಾಣ ವಿಫಲವಾಗಿತ್ತು. ಬ್ಯಾರಿಗೇಡ್ಗಳನ್ನು ಮುರಿದು ಸಾವಿರಾರು ಮಂದಿ ಒಳನುಗ್ಗಿದ್ದರು. ಅವರನ್ನು ಕರ್ನಾಲ್ ಮತ್ತು ಸೋನಿಪತ್ಗಳಲ್ಲಿ ರಾತ್ರಿ ತಡೆಹಿಡಿಯಲಾಗಿದೆ.
ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ: ಕೊನೆಗೂ ರೈಲು ಸಂಚಾರಕ್ಕೆ ಅವಕಾಶ ನೀಡಿದ ರೈತರು
ಮೇಧಾ ಪಾಟ್ಕರ್ ಬಂಧನ
ಮಧ್ಯಪ್ರದೇಶದಿಂದ ಮೇಧಾ ಪಾಟ್ಕರ್ ನೇತೃತ್ವದಲ್ಲಿ ದೆಹಲಿಗೆ ಹೊರಟಿದ್ದ ಪ್ರತಿಭಟನಾಕಾರ ರೈತರನ್ನು ಉತ್ತರ ಪ್ರದೇಶದ ಅಧಿಕಾರಿಗಳು ಆಗ್ರಾದ ಬಳಿ ತಡೆದಿದ್ದಾರೆ. ಮೇಧಾ ಪಾಟ್ಕರ್ ಅವರನ್ನು ಬಂಧಿಸಲಾಗಿದೆ.
ಅರೆಸೇನಾ ತುಕಡಿಗಳ ನಿಯೋಜನೆ
ಅತ್ತ ದೆಹಲಿ ಭದ್ರತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಗಡಿಭಾಗಗಳಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸುತ್ತಿದೆ. ಮುಖ್ಯವಾಗಿ ಘಾಜಿಪುರ ಗಡಿ, ಚಿಲ್ಲಾಗಡಿ ಮತ್ತು ಡಿಎನ್ಡಿಗಳಲ್ಲಿ ಅಧಿಕ ಭದ್ರತೆ ಕಲ್ಪಿಸಲಾಗಿದೆ. ಗಡಿ ಭಾಗಗಳಲ್ಲಿ ಎಂಟು ಅರೆ ಸೇನಾ ಪಡೆ ತುಕಡಿಗಳನ್ನು ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೆಟ್ರೋ ರೈಲುಗಳ ಓಡಾಟವನ್ನು ಸ್ಥಗಿತಗೊಳಿಸಲಾಗಿದೆ.
ಉಲ್ಲಂಘಿಸಿದರೆ ಕಠಿಣ ಕ್ರಮ
ದೆಹಲಿಯಲ್ಲಿ ಪ್ರತಿಭಟನೆಗೆ ಅವಕಾಶ ನೀಡುವಂತೆ ಕೋರಿ ವಿವಿಧ ರೈತ ಸಂಘಟನೆಗಳು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಸಂಘಟನೆಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ದೆಹಲಿಯಲ್ಲಿ ಕೊರೊನಾ ವೈರಸ್ ತೀವ್ರಗೊಳ್ಳುತ್ತಿರುವುದರಿಂದ ಜನರು ಗುಂಪುಗೂಡುವಂತಿಲ್ಲ. ಹೀಗಾಗಿ ಪೊಲೀಸರೊಂದಿಗೆ ಸಹಕರಿಸಿ. ಅದನ್ನು ಉಲ್ಲಂಘಿಸಿದರೆ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಪ್ರಧಾನಿ ಕಚೇರಿ ಮಧ್ಯಪ್ರವೇಶಿಸಲಿ
ಶಾಂತಿಯುತವಾಗಿ ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ನಡೆಸುತ್ತಿರುವ ರೈತರನ್ನು ತಡೆಯುವ ಮೂಲಕ ಕೇಂದ್ರ ಸರ್ಕಾರವು 1980ರ ಸ್ಥಿತಿಯನ್ನು ಪುನರಾವರ್ತಿಸುತ್ತಿದೆ. ಆಗ ಕೇಂದ್ರ ಸರ್ಕಾರವು ದೆಹಲಿಗೆ ಪ್ರತಿಭಟನೆಗೆ ತೆರಳುತ್ತಿದ್ದ ಅಕಾಲಿಗಳನ್ನು ತಡೆದಿತ್ತು. ಪ್ರಧಾನಿ ಕಾರ್ಯಾಲಯ ಕೂಡಲೇ ಮಧ್ಯಪ್ರವೇಶಿಸಿ ಅನ್ನದಾತರ ಮೇಲೆ ಶೋಷಣೆ ನಡೆಯದಂತೆ ತಡೆಯಬೇಕು ಎಂದು ಅಕಾಲಿದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.