ಬೆಳಗಾವಿಯಲ್ಲಿ ಇನ್ನೂ ಆರಂಭವಾಗದ ಪುಷ್ಪ ಹರಾಜು ಕೇಂದ್ರ
ಬೆಳಗಾವಿ, ಮಾರ್ಚ್ 18: ಹೂವು ಬೆಳೆಗಾರರು ಹಾಗೂ ಪುಷ್ಪೋದ್ಯಮಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಳಗಾವಿ ನಗರದ ಪಿ.ಬಿ ರಾಷ್ಟ್ರೀಯ ಹೆದ್ದಾರಿಯ ಸಮೀಪದ ಅಶೋಕ ನಗರದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಪುಷ್ಟ ಹರಾಜು ಕೇಂದ್ರ ಉದ್ಘಾಟನೆಯಾಗಿ ಸುಮಾರು ದಿನಗಳು ಕಳೆದರೂ ಕಾರ್ಯಾರಂಭ ಮಾಡಿಲ್ಲ.
ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ 2 ಕೋಟಿ ರೂ. ಅನುದಾನದಲ್ಲಿ ಈ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ. ಈ ಕಟ್ಟಡ ನಿರ್ಮಾಣವಾಗಲು ಬರೋಬ್ಬರಿ ಎರಡು ವರ್ಷಗಳಿಂದ ನಡೆದಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು.
ಫೆ. 22 ರಂದು ಆಗಿನ ಅರಣ್ಯ ಸಚಿವರಾಗಿದ್ದ ಸತೀಶ ಜಾರಕಿಹೊಳಿ ಅವರು ಉದ್ಘಾಟನೆ ಮಾಡಿದ್ದಾರೆ. ಶೀಘ್ರದಲ್ಲೇ ಹರಾಜು ಪ್ರಕ್ರಿಯೆ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರೂ, ಬಳಿಕ ಆ ಕೇಂದ್ರದ ಗೇಟಿಗೆ ಬೀಗ ಹಾಕಲಾಗಿದೆ.
ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ನಿರ್ಮಿಸಿ ಇದರ ಪ್ರಯೋಜನವನ್ನು ಫಲಾನುಭವಿಗಳಿಗೆ ಕಲ್ಪಿಸುವ ಕೆಲಸವನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಿಲ್ಲ. ಇದರಿಂದ ಇಲ್ಲಿ ಹೂಗಳ ಪರಿಮಳ ಬರುತ್ತಿಲ್ಲ ಎನ್ನುವುದು ಹೂವಿನ ವ್ಯಾಪಾರಿಗಳ ನೋವಾಗಿದೆ.
ಹೂವಿನ ವ್ಯಾಪಾರಿಗಳು ಗಾಂಧಿನಗರದ ರಸ್ತೆಯ ಪಕ್ಕದಲ್ಲಿಯೇ ಹೂವುಗಳನ್ನು ಮಾರಾಟ ಮಾಡುತ್ತಾರೆ. ಬೆಳಗಾವಿ ಜಿಲ್ಲೆಯ ವಿವಿಧ ಕಡೆಗಳಿಂದ ಹೂವುಗಳನ್ನು ತರುವ ರೈತರು ಇಲ್ಲಿನ ಹೂವಿನ ವ್ಯಾಪಾರಿಗಳಿಗೆ ನೀಡುತ್ತಾರೆ. ವ್ಯಾಪಾರಿಗಳು ಸಗಟು ಹಾಗೂ ಚಿಲ್ಲರೆಯಾಗಿ ಹೂವುಗಳನು ಮಾರುತ್ತಾರೆ.
ರಸ್ತೆಯಲ್ಲಿಯೆ ಈ ಚಟುವಟಿಕೆ ನಡೆಯುವುದರಿಂದ ವಾಹನಗಳ ಸಂಚಾರಕ್ಕೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ಗಮನಿಸಿ ಪುಷ್ಪ ಹರಾಜು ಕೇಂದ್ರವನ್ನು ಸ್ಥಾಪಿಸಲಾಗಿತ್ತು.
ಪುಷ್ಪ ಹರಾಜು ಕೇಂದ್ರದಲ್ಲಿ ಸುಮಾರು 16 ಮಳಿಗೆಗಳಿವೆ. ಪುಷ್ಪ ಕೃಷಿ ಮಾಡುವುದರಿಂದ ಆಗುವ ಪ್ರಯೋಜನಗಳು ಹಾಗೂ ಆರ್ಥಿಕವಾಗಿ ಲಾಭ ಮಾಡಿಕೊಳ್ಳಲು ಇರುವ ಅವಕಾಶಗಳು ಮತ್ತು ಸರಕಾರದ ಯೋಜನೆಗಳ ಕುರಿತು ತಿಳಿಸಲು ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದಕ್ಕೂ ಸ್ಥಳಾವಕಾಶ ಇದೆ.
ರೈತರು ತಂದ ಹೂವುಗಳನ್ನು ಅಂದು ಮಾರಾಟವಾಗದಿದ್ದಲ್ಲಿ ಸಂರಕ್ಷಿಸಿ ಇಡುವುದಕ್ಕಾಗಿ ಕೊಲ್ಡ್ ಸ್ಟೋರೇಜ್ ಘಟಕವು ಇದೆ. ಮಳಿಗೆ ಹಂಚಿಕೆ ಕಾರ್ಯ ಮಾತ್ರ ನಡೆಯದಿರುವುದು ದುರ್ದೈವದ ಸಂಗತಿ.