ರಾಷ್ಟ್ರೀಯ ತೋಟಗಾರಿಕಾ ಮೇಳ 2021ಕ್ಕೆ ತೆರೆ
ಬೆಂಗಳೂರು, ಫೆ. 13: ಹೆಸರಘಟ್ಟದ ಸಸ್ಯಕಾಶಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್ಆರ್)ಯಲ್ಲಿ ಐದು ದಿನಗಳಿಂದ ನಡೆಯುತ್ತಿದ್ದ 'ರಾಷ್ಟ್ರೀಯ ತೋಟಗಾರಿಕಾ ಮೇಳ' ಶುಕ್ರವಾರ ಮುಕ್ತಾಯವಾಯಿತು. ಮೇಳದಲ್ಲಿ ರಾಜ್ಯ ಮತ್ತು ಹೊರರಾಜ್ಯಗಳೊಂದಿಗೆ ಲಕ್ಷಕ್ಕೂ ಅಧಿಕ ರೈತರು ಪಾಲ್ಗೊಂಡು ಮಾಹಿತಿ ಪಡೆದರು. ಬರೀ ರೈತರಲ್ಲದೆ, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಸಹ ಭೇಟಿ ಕೊಟ್ಟು ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು ಎಂದು ಐಐಎಚ್ಆರ್ ಮಾಹಿತಿ ನೀಡಿದೆ.
ಮೇಳಕ್ಕೆ ಬಂದವರಲ್ಲಿ ಕೃಷಿಯಲ್ಲಿ ಆಸಕ್ತಿ ಉಳ್ಳವರು ತಮ್ಮ ಮಕ್ಕಳೊಂದಿಗೆ ಮೇಳದಲ್ಲಿ ಭಾಗವಹಿಸಿ ಬೆಳೆಗಳ ಬಗ್ಗೆ ತಿಳುವಳಿಕೆ ಮೂಡಿಸಲು ಮುಂದಾಗಿದ್ದು ವಿಶೇಷವಾಗಿತ್ತು. ಈ ಬಾರಿ ಮೇಳಕ್ಕೆ ಸ್ಥಳೀಯ ರೈತರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿತ್ತಾದರೂ ಹೊರ ರಾಜ್ಯಗಳಿಂದ ಅಧಿಕ ಸಂಖ್ಯೆಯಲ್ಲಿ ರೈತರು, ಯುವ ಕೃಷಿ ಉದ್ದಿಮೆಗಳು ಸಹ ಆಗಮಿಸಿದ್ದರು. ನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳಿಂದ ರೈತರು ಮೇಳಕ್ಕೆ ಭೇಟಿ ಕೊಟ್ಟಿದ್ದರು. ದೂರದ ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತಿತರ ರಾಜ್ಯಗಳಿಂದಲೂ ಜನರು ಬಂದಿದ್ದರು.
ರೈತರಿಗೆ ಸಿಹಿ ಸುದ್ದಿ ಕೊಟ್ಟ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ!
ಲಕ್ಷದ ಗಡಿದಾಟಿದ ನೋಂದಣಿ
ದೇಶದ ಎಲ್ಲೆಡೆಯಿಂದ ರೈತರು, ತೋಟಗಾರಿಕೆ ಮೇಳಕ್ಕೆ ಆಗಮಿಸಿದ್ದು, ಸೋಮವಾರದಿಂದ ಶುಕ್ರವಾರದವರೆಗೆ 85 ಸಾವಿರಕ್ಕೂ ಹೆಚ್ಚು ಜನರು ಜನರು ನೋಂದಣಿ ಮಾಡಿಸಿಕೊಂಡು ಮೇಳವನ್ನು ವೀಕ್ಷಿಸಿದ್ದಾರೆ. ಒಟ್ಟಾರೆ, ಆನ್ಲೈನ್ ಮತ್ತು ಅಪ್ಲೈನ್ ನೋಂದಣಿ 15.5 ಲಕ್ಷ ದಾಖಲಾಗಿದೆ. ಮೇಳದ ಕೊನೆಯ ದಿನ ನೋಂದಣಿ ಹೆಚ್ಚಾಗಿತ್ತು. ಕೇವಲ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಿಂದ ಮಾತ್ರ ಜನರು ಬಂದಿರಲಿಲ್ಲ. ಕರ್ನಾಟಕ ಮಾತ್ರಲ್ಲದೆ, ಹೊರರಾಜ್ಯಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ರೈತರು ಆಗಮಿಸಿದ್ದರು.
ಈ ಬಾರಿ ಮೇಳದ ಪ್ರತ್ಯಕ್ಷ ವೀಕ್ಷಣೆಗೆ ರಾಜ್ಯದ ರೈತರಿಗೆ ಮಾತ್ರ ಪ್ರಾಮುಖ್ಯತೆ ನೀಡಲಾಗಿತ್ತು. ಆದರೆ, ಹೊರ ರಾಜ್ಯಗಳಿಂದ ಅಧಿಕ ಸಂಖ್ಯೆಯಲ್ಲಿ ರೈತರು, ಯುವ ಕೃಷಿ ಉದ್ದಿಮೆಗಳು ಆಗಮಿಸಿದ್ದರು ಎಂದು ಐಐಎಚ್ಆರ್ ಪ್ರಧಾನ ವಿಜ್ಞಾನಿ ಹಾಗೂ ಮೇಳದ ನೋಂದಣಿ ಸಮಿತಿ ಮುಖ್ಯಸ್ಥ ಡಾ. ಶ್ರೀನಿವಾಸಮೂರ್ತಿ ಮಾಹಿತಿ ನೀಡಿದರು.
ರೈತರು, ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆ
ಮೇಳದ ಆರಂಭದ ಮುನ್ನ ದಿನ ಫೆಬ್ರವರಿ 7ರಿಂದಲೇ ಬೇರೆ ಬೇರೆ ಜಿಲ್ಲೆಗಳು ಮತ್ತು ಹೊರರಾಜ್ಯಗಳಿಂದ ಮೇಳಕ್ಕೆ ಬರುವಂತವರಿಗೆ ವಸತಿ ಸೌಕರ್ಯ ಕಲ್ಪಿಸಲಾಗಿದೆ. ಪ್ರಗತಿಪರ ರೈತರು, ಕೃಷಿ ಆಸಕ್ತರು, ವಿಜ್ಞಾನಿಗಳು, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ, ಮೇಳದ ಮಳಿಗೆಗಳ ಮಾಲೀಕರು ಮತ್ತು ಸಹಾಯಕರಿಗೆ ತಂಗುವ ವ್ಯವಸ್ಥೆ ಮಾಡಲಾಗಿತ್ತು.
ಹೆಸರಘಟ್ಟದ ಟಿ.ಬಿ. ಕ್ರಾಸ್ನಲ್ಲಿ ಮೂರು ಕಲ್ಯಾಣ ಮಂಟಪಗಳು, ಐಐಎಚ್ಆರ್ ಹಾಸ್ಟಲ್, ಐಐಸಿಆರ್ ಗೆಸ್ಟ್ಹೌಸ್, ಜಿಕೆವಿಕೆಯ ಸುವರ್ವಭವನ, ರೈತ ತರಬೇತಿ ಕೇಂದ್ರದಲ್ಲಿ ವಸತಿಗೆ ಅನುವು ಮಾಡಿಕೊಡಲಾಗಿತ್ತು. ಗುಜರಾತ್, ಒಡಿಶಾ, ಪುದಚೇರಿ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಿಂದಲೂ ಬಂದು ರೈತರು ವಾಸ್ತವ್ಯ ಹೂಡಿದ್ದರು. ಐದಾರು ದಿನಗಳಿಂದ ಸುಮಾರು ಮೂರವರೆ ಸಾವಿರ ಮಂದಿಗೆ ವಸತಿ ಸೌಕರ್ಯ ಕಲ್ಪಿಸಿದ್ದು ವಿಶೇಷ ಎಂದು ಐಐಎಚ್ಆರ್ ಪ್ರಧಾನ ವಿಜ್ಞಾನಿ ಹಾಗೂ ಮೇಳದ ವಸತಿ ಸಮಿತಿ ಮುಖ್ಯಸ್ಥ ಡಾ. ಟಿ.ಎಂ. ಗಜಾನನ ಹೇಳಿದರು.
ನೂಕುನುಗ್ಗಲಿಲ್ಲದೆ ಸವಿ ಸವಿ ರುಚಿ
ಐದು ದಿನಗಳ ಈ ಮೇಳದಲ್ಲಿ ಎಂದೂ ಕೂಡ ಊಟೋಪಚಾರಕ್ಕೆ ಜನರು ನೂಕು ನುಗ್ಗಲು ಕಾಣಬರಲಿಲ್ಲ. ಊಟ, ತಿಂಡಿ ವ್ಯವಸ್ಥೆಯನ್ನು ತುಂಬಾ ಚೆನ್ನಾಗಿ ಐಐಎಚ್ಆರ್ ಮಾಡಿತ್ತು. ಅತ್ಯಂತ ಕಡಿಮೆ ಬೆಲೆಗೆ ಪ್ರತಿದಿನವೂ ತುಂಬಾ ಸ್ವಾದೀಷ್ಟಕರ ತಿಂಡಿ ಮತ್ತು ಊಟವನ್ನು ನೀಡಲಾಗುತ್ತಿದೆ. ಪ್ರತಿದಿನ ಬೆಳಿಗ್ಗೆ ತಿಂಡಿ ಒಂದೂವರೆ ಸಾವಿರ ಜನರಿಗೆ, ಜೊತೆಗೆ ಪ್ರತಿದಿನ 7-8 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಡಿಕೆ ಹಾಳೆಯಲ್ಲಿ ತಿಂಡಿ ಮತ್ತು ಊಟವನ್ನು ನೀಡಲಾಗುತ್ತಿತ್ತು.
ಹಲಸು ಸಸಿ ದಾಖಲೆ ಮಾರಾಟ
ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಳಿಗೆಗಳಿಗೆಗಳಿಗೆ ಜನರು ಆಸಕ್ತಿಯಿಂದ ಭೇಟಿ ನೀಡಿದ್ದರು. ಒಂದೂವರೆ ವರ್ಷದಲ್ಲಿ ಫಲಕೊಡುವ ಅದ್ಬುತ ಹಲಸು ಮಳಿಗೆಗೆ ಹೆಚ್ಚಿನ ಆಸಕ್ತರು ಮುಗಿಬಿದ್ದರು. ಶುಕ್ರವಾರ ಒಂದೇ ದಿನ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಹಲಸಿನ ಸಸಿಗಳು ಮಾರಾಟವಾಗಿವೆ. ಐದು ದಿನಗಳಲ್ಲಿ 7 ಸಾವಿರ ಸಸಿಗಳನ್ನು ರೈತರು, ಆಸಕ್ತರು ಕೊಂಡುಕೊಂಡಿದ್ದಾರೆ. ಪುತ್ತೂರು ಮತ್ತು ತೈಲಾಂಡಿನ ಹಲಸಿನ ಸಸಿಗಳಿಗೆ ತುಂಬಾ ಬೇಡಿಕೆಯಿದೆ ಎಂದು ಮಳಿಗೆಯ ಮಾಲೀಕ ಜಾಕ್ ಅನಿಲ್ ಪುತ್ತೂರು ತಿಳಿಸಿದರು.