ಇತಿಹಾಸದಲ್ಲಿಯೇ ಇಂತಹ ದುರಹಂಕಾರಿ ಸರ್ಕಾರವನ್ನು ನೋಡಿಲ್ಲ: ಸೋನಿಯಾ ಗಾಂಧಿ ವಾಗ್ದಾಳಿ
ನವದೆಹಲಿ, ಜನವರಿ 4: ಭಾರತವು ಸ್ವಾತಂತ್ರ್ಯ ಪಡೆದ ಬಳಿಕ ಇಂತಹ ದರ್ಪದ ಸರ್ಕಾರ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಅನ್ನದಾತರ ಸಂಕಷ್ಟಗಳನ್ನು ಆಲಿಸದ ಇಂತಹ ಅಹಂಕಾರಿ ಸರ್ಕಾರವನ್ನು ನೋಡಿರಲಿಲ್ಲ ಎಂದಿರುವ ಅವರು, ಕೂಡಲೇ ಕೃಷಿ ಕಾಯ್ದೆಗಳನ್ನು ಬೇಷರತ್ ಹಿಂಪಡೆಯುವ ಮೂಲಕ ರಾಜಧರ್ಮ ಪಾಲಿಸಿ ಎಂದು ಆಗ್ರಹಿಸಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ತನ್ನ ಅಧಿಕಾರದ ದರ್ಪವನ್ನು ಬಿಟ್ಟು ಎಲ್ಲ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಬೇಷರತ್ ಹಿಂಪಡೆಯಲು ಮತ್ತು ಚಳಿ ಹಾಗೂ ಮಳೆಯಲ್ಲಿ ಸಾಯುತ್ತಿರುವ ರೈತರ ಪ್ರತಿಭಟನೆಯನ್ನು ಅಂತ್ಯಗೊಳಿಸಲು ಇನ್ನೂ ಸಮಯವಿದೆ. ಇದು ರಾಜಧರ್ಮವಾಗುತ್ತದೆ ಮತ್ತು ಸಾವಿಗೀಡಾದ ರೈತರಿಗೆ ನೈಜ ಕೊಡುಗೆಯಾಗುತ್ತದೆ' ಎಂದು ಸೋನಿಯಾ ಗಾಂಧಿ ಹೇಳಿಕೆ ನೀಡಿದ್ದಾರೆ.
ಪ್ರತಿಯೊಬ್ಬ ರೈತ, ಕಾರ್ಮಿಕನೂ ಇಲ್ಲಿ ಸತ್ಯಾಗ್ರಹಿ: ರಾಹುಲ್ ಗಾಂಧಿ
'ದೆಹಲಿಯ ಗಡಿ ಭಾಗದಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೆಣಗಾಡುತ್ತಿರುವ ಅನ್ನದಾತರ ಸ್ಥಿತಿಯನ್ನು ಕಂಡು ದೇಶದ ಇತರೆ ಜನರಂತೆ ನಾನು ಕೂಡ ಯಾತನೆಗೆ ಒಳಗಾಗಿದ್ದೇನೆ. ರೈತರ ಬೇಡಿಕೆಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿರುವ ಸರ್ಕಾರದ ನಡವಳಿಕೆಯಿಂದ ಇದುವರೆಗೂ 50ಕ್ಕೂ ಹೆಚ್ಚು ರೈತರು ತಮ್ಮ ಜೀವ ಕಳೆದುಕೊಂಡಿದ್ದಾರೆ' ಎಂದು ವಿಷಾದಿಸಿದ್ದಾರೆ. ಮುಂದೆ ಓದಿ.
ಸಂತಾಪ ಕೂಡ ಸೂಚಿಸದಷ್ಟು ಹೃದಯಹೀನ
ಸರ್ಕಾರದ ನಿರ್ಲಕ್ಷ್ಯದಿಂದ ಕೆಲವು ರೈತರು ಆತ್ಮಹತ್ಯೆ ಮಾಡಿಕೊಳ್ಳುವ ನಡೆಯನ್ನೂ ಅನುಸರಿಸಿದ್ದಾರೆ. ಆದರೆ ಈ ಹೃದಯಹೀನ ಮೋದಿ ಸರ್ಕಾರವಾಗಲಿ, ಪ್ರಧಾನಿಯವರಾಗಲಿ ಅಥವಾ ಯಾವುದೇ ಇತರೆ ಸಚಿವರಾಗಲಿ ಇಂದಿನವರೆಗೂ ಸಂತಾಪದ ಒಂದೇ ಒಂದು ಪದವನ್ನು ಆಡಿಲ್ಲ. ಮೃತಪಟ್ಟ ಎಲ್ಲ ರೈತರಿಗೆ ನಾನು ಗೌರವ ಸಲ್ಲಿಸುತ್ತೇನೆ ಮತ್ತು ಅವರ ಕುಟುಂಬದವರಿಗೆ ಈ ದುಃಖವನ್ನು ಸಹಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಉದ್ಯಮಿಗಳ ಲಾಭವೇ ಗುರಿ
'ಸ್ವಾತಂತ್ರ್ಯದ ಬಳಿಕ ದೇಶದ ಇತಿಹಾಸದಲ್ಲಿಯೇ ಇಂತಹ ದುರಹಂಕಾರಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಜನರನ್ನು ಬಿಡಿ, ಅನ್ನದಾತರ ಸಂಕಷ್ಟ ಮತ್ತು ಸಮಸ್ಯೆಗಳನ್ನು ಕೂಡ ಅದು ನೋಡುತ್ತಿಲ್ಲ. ಕೈಗಾರಿಕೋದ್ಯಮಿಗಳಿಗೆ ಕೈತುಂಬಾ ಲಾಭ ತಂದುಕೊಡುವುದೊಂದೇ ಈ ಸರ್ಕಾರದ ಮುಖ್ಯ ಕಾರ್ಯಸೂಚಿ ಎಂದು ಕಾಣಿಸುತ್ತದೆ' ಎಂದು ಕಿಡಿಕಾರಿದ್ದಾರೆ.
ರೈತರು-ಕೇಂದ್ರ ಸರ್ಕಾರದ ನಡುವೆ ಇಂದು ನಿರ್ಣಾಯಕ ಸಭೆ
ಪ್ರತಿ ರೈತ ಸತ್ಯಾಗ್ರಹಿ
ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗಳಿಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಕೃಷಿ ಮತ್ತು ರೈತರನ್ನು ಮೋದಿ ಸರ್ಕಾರ ನಾಶಪಡಿಸುತ್ತಿದೆ ಎಂದು ಆರೋಪಿಸಿದೆ. ಪ್ರತಿ ರೈತ ಕೂಡ ಸತ್ಯಾಗ್ರಹಿ. ಅವರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದು, ಅದನ್ನು ಪಡೆದೇ ತೀರುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದರು.
ಇಂದು ಮಾತುಕತೆ
ಚಳಿಯನ್ನೂ ಲೆಕ್ಕಿಸದೆ ಪಂಜಾಬ್, ಹರ್ಯಾಣ ಸೇರಿದಂತೆ ವಿವಿಧ ಭಾಗಗಳ ರೈತರು ದೆಹಲಿ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಬೇಡಿಕೆ ಹಾಗೂ ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಕಾನೂನಾತ್ಮಕ ಖಾತರಿಯ ಕುರಿತಾಗಿ ಕೇಂದ್ರ ಸರ್ಕಾರ ಮತ್ತು ರೈತರ ನಡುವೆ ಏಳನೇ ಸುತ್ತಿನ ಸಭೆ ನಡೆಯಲಿದೆ.