ರೈತ ಹೋರಾಟ: ಯುವ ರೈತರಿಗೆ ಹೆಣ್ಣು ಸಿಗುತ್ತಿಲ್ಲ ಮತ್ತು ಚಳವಳಿಯ ಮುಂದಿನ ಹಾದಿ…
ತುಮಕೂರು, ಅಕ್ಟೋಬರ್ 18: ಜಿಲ್ಲೆಯ ತಿಪಟೂರು ತಾಲ್ಲೂಕಿಗೆ ಸೇರಿದ ತಿಮ್ಲಾಪುರ, ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಸೇರಿದ ಲಕ್ಮಗೊಂಡನಹಳ್ಳಿ ಅವಳಿ ಗ್ರಾಮಗಳು. ಈ ಎರಡೂ ಗ್ರಾಮಗಳ ಪ್ರತಿ ಮನೆಯಲ್ಲೂ ರೈತ ಸತ್ಯಾಗ್ರಹಿಗಳಿದ್ದಾರೆ.
ಅದೊಮ್ಮೆ ರೈತ ಸಂಘದಲ್ಲಿ ಬಿರುಕು ಬಂದು ಚಳವಳಿ ವೀಕ್ ಆಯಿತೇನೋ ಅನ್ನುವಷ್ಟರಲ್ಲಿ ಕೆ.ಬಿ. ಕ್ರಾಸ್ನ ರೈತ ಸಮಾವೇಶ ಪ್ರೊ. ಎಂ.ಡಿ.ಎನ್ರಿಗೆ ಮರುಶಕ್ತಿ ನೀಡಿ ಮುಂಚಲಿಸುವಂತೆ ಮಾಡಿದ್ದು ಇದೇ ಗ್ರಾಮಗಳ ರೈತರು. ರೈತರ ಹಕ್ಕುಗಳು, ಸರ್ಕಾರದ ಜವಾಬ್ದಾರಿ ಇತ್ಯಾದಿ ವಿಷಯಗಳನ್ನು ಯಾರ ಮುಂದೆ ಬೇಕಾದರೂ ತರ್ಕಬದ್ಧವಾಗಿ ಮಂಡಿಸಬಲ್ಲ ಸಮರ್ಥರು ಇಲ್ಲಿದ್ದಾರೆ.
ಸರ್ಕಾರ ಕರೆಂಟು ಕೊಟ್ಟು ಅದಕ್ಕೆ ಫೀಸ್ ತೆಗೆದುಕೊಳ್ಳುವುದಾದರೆ, ಸರ್ಕಾರ ಮಾರಾಟಗಾರ, ರೈತರು ಖರೀದಿದಾರರಾಗುತ್ತಾರೆ. ಈಗ ಕನ್ಸ್ಯೂಮರ್ ಹಕ್ಕುಗಳು ರೈತನಿಗೆ ಇದೆ ಅಂತಾಯ್ತು. ಇನ್ನು ಯಾವುದೇ ಸರಕು- ಸೇವೆ ಮಾರಾಟ ಮಾಡುವವರು ಗುಣಮಟ್ಟದ ಸರಕು- ಸೇವೆಗಳನ್ನು ಒದಗಿಸಬೇಕಾದ್ದು ಅವರ ಜವಾಬ್ದಾರಿ.
ಈಗ ವಿಷಯಕ್ಕೆ ಬರೋಣ. ಸರ್ಕಾರ (ಸರ್ಕಾರದ ಸಂಸ್ಥೆ) ಕಳಪೆ ಕರೆಂಟ್ ಕೊಡುತ್ತಿದೆ. ಅದರಿಂದ ನಮ್ಮ ಮೋಟಾರ್ಗಳು ಸುಟ್ಟುಹೋಗುತ್ತಿವೆ. ಸರ್ಕಾರ ಕೊಡುತ್ತಿರುವ ಕರೆಂಟ್ ಸೇವೆ ಅನ್ನಿಸಿಕೊಳ್ಳಲು ಯೋಗ್ಯವಲ್ಲ. ಅದು ಕಿರುಕುಳ. ಕಿರುಕುಳಕ್ಕೆ ಫೀಸ್ ಕಟ್ಟುವುದಿಲ್ಲ. ಇದು ಈ ಗ್ರಾಮಸ್ಥರಿಗಿರುವ ಅರಿವಿನ ಮಾಡೆಲ್. ಇದೆಲ್ಲಾ ಪ್ರೊ. ಎಂಡಿಎನ್ ಪಾಠ ಎಂದು ಮತ್ತೊಮ್ಮೆ ಹೇಳಬೇಕಿಲ್ಲ.
ಒಮ್ಮೆ ಡಾ. ಎಪಿಜೆ ಅಬ್ದುಲ್ ಕಲಾಂ ತಮ್ಮ ಭಾಷಣವೊಂದರಲ್ಲಿ ಮಕ್ಕಳಿಗೆ ಡಾಕ್ಟರ್ ಆಗು, ಇಂಜಿಯಿಯರ್ ಆಗಿ ಎಂದೆಲ್ಲಾ ಹೇಳಿ ಕುಳಿತಾಗ ವೇದಿಕೆಯಲ್ಲಿದ್ದ ಇನ್ನೊಬ್ಬ ಅತಿಥಿ ಡಾ. ದೇವಿಂದರ್ ಶರ್ಮಾ ನೀವೇಕೆ ಮಕ್ಕಳಿಗೆ ರೈತರಾಗಿ ಎಂದು ಹೇಳಲಿಲ್ಲ ಎಂಬ ಪ್ರಶ್ನೆಗೆ ಕಲಾಂ ತಬ್ಬಿಬ್ಬಾಗಿದ್ದ ಬಗ್ಗೆ ಹಿಂದೆ ನಾನೇ ಅನುವಾದ ಮಾಡಿದ ಲೇಖನವೊಂದರ ಸಾಲುಗಳು ಅಸ್ಪಷ್ಟವಾಗಿ ನೆನಪಾಗುತ್ತಿವೆ. ಇರಲಿ.
ನಾವು ಶಾಲೆ ಕಲಿಯುವಾಗ ಮಾಸ್ತರು, "ಹಿಂಗೇ ಆದರೆ ಎಮ್ಮೆ ಕಾಯಕೋಗ್ಬೇಕಷ್ಟೇ", ''ಹೊಲ ಉಳಾಕೋಗ್ಬೇಕಷ್ಟೇ" ಎಂದೆಲ್ಲಾ ರೈತರ ಕಸುಬಿನ ಬಗ್ಗೆ ಅತ್ಯಂತ ಕೀಳುಮಟ್ಟದಲ್ಲಿ ಮೂದಲಿಸುತ್ತಿದ್ದನ್ನು ಕಂಡಿದ್ದೇವೆ. ಕಾಲಾನಂತರ ನಾನು ಅನೇಕ ಶಾಲಾ ಶಿಕ್ಷಕರಿಗೆ ಆ ರೀತಿಯಾಗಿ ನೀವಿನ್ನೂ ಮೂದಲಿಸುತ್ತಿದ್ದರೆ ಹಾಗೆ ಮಾಡಬೇಡಿ ಎಂದು ಕೋರಿಕೊಂಡಿದ್ದೇನೆ.
ಈಗ ಲಕ್ಮಗೊಂಡನಹಳ್ಳಿ ಮತ್ತು ತಿಮ್ಲಾಪುರದ ಯುವಕರು ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದ ಬಗ್ಗೆ ನೋಡೋಣ. ಈ ಪತ್ರದಲ್ಲಿ ಇತ್ತೀಚೆಗೆ ಹುಡುಗಿಯರು ರೈತಾಪಿ ಯುವಕರನ್ನು ಮದುವೆಯಾಗಲು ಇಚ್ಛಿಸುತ್ತಿಲ್ಲ ಎಂದು ಬರೆದಿದ್ದಾರೆ. ಅದನ್ನು ಸರ್ಕಾರದ ಮಟ್ಟದಲ್ಲಿ ಗಂಭೀರವಾಗಿ ಚರ್ಚಿಸಿ ಪರಿಹಾರ ಕೊಡಿಸಬೇಕಾಗಿಯೂ ಕೋರಿದ್ದಾರೆ. ಈ ಬಗ್ಗೆ ಮುಂದೆ ಮಾತನಾಡೋಣ.
ಹಿಂದೆಲ್ಲಾ ಹೆಣ್ಣು ಕೊಡುವುದಕ್ಕೆ ಹುಡುಗನಿಗೆ ಹೊಲ, ಮನೆ ಇದೆಯಾ ಎಂದು ನೋಡುತ್ತಿದ್ದರು. (ಇರದೇ ಇದ್ದವರಿಗೂ ಹೆಣ್ಣು ಕೊಟ್ಟರೂ, ಹೊಲ ಮನೆ ಇರಬೇಕಾದ್ದು ಹೆಣ್ಣೆತ್ತವರ ಆಯ್ಕೆಯಾಗಿರುತ್ತಿತ್ತು) ಅದಕ್ಕೆ ಕಾರಣ ಆದಾಯಕ್ಕೊಂದಿಷ್ಟು ಭೂಮಿ, ಇರಲೊಂದು ಸೂರು ಇರಲಿ ಎಂಬುದಷ್ಟೇ. (ಕೂಲಿ ಕಾರ್ಮಿಕರ ಕಥೆ ಬೇರೆಯದ್ದೇ ಇದೆ. ಅದು ಇನ್ನೊಂದು ಲೇಖನದ ವಸ್ತು)
ಈಗ ಪತ್ರದ ವಿಷಯಕ್ಕೆ ಬರುವುದಾದರೆ ಹೊಲ, ಮನೆ ಇರುವ ಈ ಹುಡುಗರಿಗೆ ಹೆಣ್ಣು ಸಿಗುತ್ತಿಲ್ಲಾ ಅನ್ನೋದಾದರೆ, ಈಗ ಕೇಂದ್ರ ಸರ್ಕಾರ ತಂದಿರುವ ಮೂರು ಕಾಯಿದೆಗಳು ಜಾರಿಯಾದಲ್ಲಿ ಇರುವ ಭೂಮಿಯೂ ಕೈತಪ್ಪಿ ಹೋಗಿ ಯಾವುದೋ ಕಂಪನಿ ಭೂಮಿಯಲ್ಲಿ ಕೂಲಿಯಂತೆ ದುಡಿಯುವ, ತನ್ನದೇ ಹೊಲದಲ್ಲಿ ಯಾವುದೋ ಕಂಪನಿಯ ಆದೇಶಕ್ಕಾಗಿ (ಆರ್ಡರ್ಗಾಗಿ) ದುಡಿಯುವ ಕಾಲ ಬರುತ್ತಲ್ಲ, ಆಗ ಹೆಣ್ಣೆತ್ತವರು ಈ ಹುಡುಗರಿಗೆ ಹೆಣ್ಣು ಕೊಟ್ಟಾರ? ಇಲ್ಲವೇ ಇಲ್ಲ. ಸರಿಯೋ.?
ಹಾಗಾಗಿ ರೈತ ಚಳವಳಿಗೆ ಹೆಸರಾದ ಈ ಎರಡೂ ಗ್ರಾಮದ ಯುವಕರು ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿಯಲ್ಲಿ ಸಾಂಕೇತಿಕವಾಗಿ ಕೆಲ ಮಂದಿ ಭಾಗಿಯಾಗಿ, ಮಿಕ್ಕವರು ಇದ್ದ ಊರಿನಲ್ಲಿ ಮತ್ತು ಎರಡೂ ತಾಲ್ಲೂಕುಗಳಲ್ಲಿ ರೈತ ಚಳವಳಿಯನ್ನು ತೀವ್ರಗೊಳಿಸಬೇಕು. ಈ ಹೊಸ ಕಾಯಿದೆಗಳಿಂದ ಕೈತಪ್ಪಿ ಹೋಗಬಹುದಾದ ಭೂಮಿ, ಎಪಿಎಂಸಿ ವ್ಯವಸ್ಥೆ ಮತ್ತು ರೈತರು ಸ್ವತಂತ್ರವಾಗಿ ಸ್ವಾವಲಂಬಿಗಳಾಗಿ ಬದುಕುವ ಹಕ್ಕು ಉಳಿಸಿಕೊಳ್ಳಬೇಕಾದದ್ದು ರೈತಾಪಿ ಯುವಕರದ್ದೇ ಕರ್ತವ್ಯವಾಗಿದೆ. ಈ ಕೆಲಸಕ್ಕೆ ಸ್ಥಳೀಯ ಹಿರಿಯ ರೈತ ಮುಖಂಡರಾದ ಶಂಕರಣ್ಣ ಚಾಲನೆ ಕೊಡಬಹುದು.