ಯಾದಗಿರಿ: ಹತ್ತಿ ಬೆಳೆಗಾರರನ್ನು ಕಂಗೆಡಿಸಿದ ತಾಮ್ರ ರೋಗ
ಯಾದಗಿರಿ, ನವೆಂಬರ್ 02 : ರೈತರಿಗೆ ಮಳೆ ಬಂದರೂ ಒಂದು ಚಿಂತೆ, ಮಳೆ ಬಾರದಿದ್ದರೂ ಒಂದು ಚಿಂತೆ. ಹೌದು, ಯಾದಗಿರಿ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಸತತ ಮಳೆ ರೈತರನ್ನು ಸಂಕಷ್ಟಕ್ಕೀಡು ಮಾಡಿದೆ.
ಮಳೆಯಿಂದಾಗಿ ವಿವಿಧ ಬೆಳೆಗಳು ಜಲಾವೃತವಾಗಿ ಹೊಲದಲ್ಲಿಯೇ ಕೊಳೆಯುತ್ತಿವೆ. ಅದರಲ್ಲೂ ಬಡವರ ರೇಷ್ಮೆ ಹತ್ತಿ ಬೆಳೆಗೆ ತಾಮ್ರದ ರೋಗ ಆವರಿಸಿದ್ದು, ಇದು ರೈತರನ್ನ ಚಿಂತೆಗೀಡು ಮಾಡಿದೆ.
ಕೊಚ್ಚಿಹೋಗುವಷ್ಟು ಮಳೆಯಾದರೂ ಯಾದಗಿರಿಯ ಈ ಪ್ರದೇಶದಲ್ಲಿ ಕುಡಿವ ನೀರಿಲ್ಲ!
ಎಡೆ ಬಿಡದೆ ಸುರಿದ ಮಳೆಯಿಂದ ತೇವಾಂಶ ಹೆಚ್ಚಾಗಿ ಹತ್ತಿ ಹಾಗೂ ತೊಗರಿ ಬೆಳೆಗಳು ಕೊಳೆಯುತ್ತಿರುವುದು ಒಂದೆಡೆಯಾದರೆ ಗಾಯದ ಮೇಲೆ ಬರೆ ಎನ್ನುವಂತೆ ಹತ್ತಿ ಬೆಳೆಗೆ ತಾಮ್ರದ ರೋಗ ಆವರಿಸಿದೆ.
ಈ ದೃಶ್ಯ ಕಂಡು ಬರುವುದು ಯಾದಗಿರಿ ಜಿಲ್ಲೆಯ ವಿವಿಧೆಡೆ. ವಾರದ ಹಿಂದೆ ಸತತವಾಗಿ ಸುರಿದ ಮಳೆಯಿಂದ ಜಿಲ್ಲೆಯ ಅನ್ನದಾತರು ಸಂಕಷ್ಟದ ಭೀತಿ ಎದುರಿಸುತ್ತಿದ್ದಾರೆ.
ನಷ್ಟದ ಹಾದಿ ತಲುಪಿದ ವಾಣಿಜ್ಯ ಬೆಳೆಗಳು
ಇತ್ತೀಚೆಗೆ ಸುರಿದ ಮಳೆಯಿಂದ ಮುಂಗಾರು ಹಂಗಾಮಿನ ವಾಣಿಜ್ಯ ಬೆಳೆಗಳಾದ ಹತ್ತಿ, ತೊಗರಿ, ಭತ್ತದ ಬೆಳೆಗಳು ನಷ್ಟದ ಹಾದಿ ತಲುಪಿವೆ. ಜಿಲ್ಲೆಯ ಸಾವಿರಾರು ಹೆಕ್ಟೆರ್ ಪ್ರದೇಶದ ಹತ್ತಿ ಬೆಳೆಗೆ ತಾಮ್ರದ ರೋಗ ಅಂಟಿಕೊಂಡಿದೆ. ಇದು ಎಕೆರೆ ಸಾವಿರಾರು ರೂಪಾಯಿ ಖರ್ಚು ಮಾಡಿ ಭಿತ್ತನೆ ಮಾಡಿದ್ದ ರೈತರಲ್ಲಿ ಆತಂಕ ತಂದಿದೆ.
52 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ
ಸುರಪುರ, ಶಹಾಪುರ ಹಾಗೂ ಯಾದಗಿರಿ ತಾಲೂಕಿನ 52 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಹತ್ತಿ ಬಿತ್ತನೆ ಮಾಡಲಾಗಿದೆ. ಇದೀಗ ಸತತ ಮಳೆಯಿಂದ ಬೆಳಗಳು ಜಲಾವೃತವಾಗಿವೆ. ತೇವಾಂಶ ಹೆಚ್ಚಾಗಿ ಹತ್ತಿ ಹಾಗೂ ತೊಗರಿ ಬೇರುಗಳು ಕೊಳೆಯುತ್ತಿದೆ.
ತಾಮ್ರ ರೋಗದ ಲಕ್ಷಣಗಳು
ಹತ್ತಿಯ ಬೇರಿನ ಮೂಲಕ ಎಲೆ, ಕಾಂಡ, ಹತ್ತಿಕಾಯಿ ಕೆಂಪಾಗುತ್ತದೆ. ಇದನ್ನು ತಾಮ್ರದ ರೋಗ ಎಂದು ರೈತರು ಕರೆಯುತ್ತಾರೆ. ಬಳಿಕ ಎಲೆ, ಕಾಯಿ ಉದುರಲು ಆರಂಭಿಸುತ್ತವೆ. ಅದಾದ ನಂತರ ಹತ್ತಿ ಗಿಡವೇ ಬಾಡುತ್ತದೆ.
ಸೂಕ್ತ ಪರಿಹಾರಕ್ಕೆ ಆಗ್ರಹ
ಸದ್ಯ ಹತ್ತಿ ಬಿಡುವ ಹಂತದಲ್ಲಿರುವ ಕಾಯಿಗಳು ನೆಲಕಚ್ಚುತ್ತಿವೆ. ಇನ್ನೂ ತೇವಾಂಶ ಹೆಚ್ಚಾದರೆ ತೊಗರಿಯದ್ದು ಅದೇ ಕತೆ. ಹಾಗಾಗಿ ತಕ್ಷಣವೇ ಬೆಳೆ ನಷ್ಟದ ಬಗ್ಗೆ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ರೈತ ಮುಖಂಡರ ಆಗ್ರಹ.