"ಹೋರಾಟನಿರತ ರೈತರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ"
ನವದೆಹಲಿ, ಜನವರಿ 13: ಕೇಂದ್ರದ ಮೂರು ವಿವಾದಿತ ಕೃಷಿ ಕಾಯ್ದೆಗಳಿಗೆ ತಾತ್ಕಾಲಿಕ ತಡೆ ನೀಡಿರುವ ಸುಪ್ರೀಂ ಕೋರ್ಟ್, ಕಾಯ್ದೆ ಸಂಬಂಧಿ ಚರ್ಚೆಗೆ ನಾಲ್ಕು ಸದಸ್ಯರನ್ನೊಳಗೊಂಡ ಸಮಿತಿ ರಚಿಸಿದೆ. ಮಂಗಳವಾರ ಈ ಕುರಿತು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದು, ರೈತರ ಸಮಸ್ಯೆಗಳನ್ನು ಆಲಿಸಿ ವರದಿ ಸಲ್ಲಿಸಲು ಸೂಚಿಸಿದೆ.
ಸಮಿತಿಯಲ್ಲಿ ಭಾರತೀಯ ಕಿಸಾನ್ ಯೂನಿಯನ್ ನ ಭೂಪಿಂದರ್ ಸಿಂಗ್ ಮನ್, ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಇನ್ ಸ್ಟಿಟ್ಯೂಟ್ ನ ಪ್ರಮೋದ್ ಕುಮಾರ್ ಜೋಶಿ, ಆರ್ಥಿಕ ತಜ್ಞ ಅಶೋಕ್ ಗುಲಾಟಿ ಹಾಗೂ ಮಹಾರಾಷ್ಟ್ರ ಮೂಲದ ಶೆಟ್ಕರಿ ರೈತ ಸಂಘಟನೆಯ ಅನಿಲ್ ಘನವತ್ ಇದ್ದಾರೆ. ರೈತನಿಗೆ ನ್ಯಾಯ ಸಿಗುವ ಭರವಸೆಯನ್ನೂ ಸಮಿತಿ ಸದಸ್ಯರು ನೀಡಿದ್ದಾರೆ. ಮುಂದೆ ಓದಿ...
"ರೈತರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ"
ಕೃಷಿ ಕಾಯ್ದೆಗಳ ಸಂಬಂಧಿ ಮಾತನಾಡಿರುವ ಸಮಿತಿ ಸದಸ್ಯ ಅನಿಲ್ ಘನವತ್, ರೈತರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಭರವಸೆ ನೀಡಿದ್ದಾರೆ. ರೈತರ ಈ ಹೋರಾಟ ಕೊನೆಯಾಗಬೇಕು ಹಾಗೂ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯ ನೀಡಬೇಕು. ಮೊದಲು ನಾವು ರೈತರ ಮಾತನ್ನು ಕೇಳಿಸಿಕೊಳ್ಳುತ್ತೇವೆ. ಕನಿಷ್ಠ ಬೆಂಬಲ ಬಗ್ಗೆ ಅವರಲ್ಲಿ ತಪ್ಪು ಕಲ್ಪನೆ ಇದೆ ಎಂದಾದರೆ, ಅದನ್ನು ಸ್ಪಷ್ಟಪಡಿಸಬೇಕು. ಏನೇ ಮಾಡಿದರೂ ಅವರ ಹಿತಾಸಕ್ತಿಯೇ ಮುಖ್ಯ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್ ಸಮಿತಿಯು ಕೃಷಿ ಕಾನೂನಿನ ಪರವಾಗಿದೆ: ನಾವು ಒಪ್ಪಲ್ಲ ಎಂದ ರೈತ ಸಂಘಟನೆಗಳು
ಎರಡು ತಿಂಗಳಿನಲ್ಲಿ ವರದಿ ಸಲ್ಲಿಸಲು ಸೂಚನೆ
ಮಂಗಳವಾರ ಮೂರು ವಿವಾದಿತ ಕೃಷಿ ಕಾಯ್ದೆಗಳಿಗೆ ತಡೆ ನೀಡಿರುವ ಸುಪ್ರೀಂ ಕೋರ್ಟ್, ರೈತರ ಸಮಸ್ಯೆ ಆಲಿಸಲು ಸಮಿತಿ ರಚಿಸಿದೆ. ಈ ಕಾಯ್ದೆಗಳ ಕುರಿತು ಸಂಪೂರ್ಣ ಪರಿಶೀಲನೆ ನಡೆಸಲು ಹಾಗೂ ರೈತ ಸಂಘಟನೆಗಳ ಎಲ್ಲಾ ಅಭಿಪ್ರಾಯಗಳನ್ನು ಸಂಗ್ರಹಿಸಲಿರುವ ಸಮಿತಿಯು ಎರಡು ತಿಂಗಳ ಒಳಗೆ ವರದಿ ಸಲ್ಲಿಸಬೇಕು ಎಂದು ಕೋರ್ಟ್ ಸೂಚಿಸಿದೆ.
"ಸಮಿತಿ ಸದಸ್ಯರು ಕೃಷಿಪರ ಇದ್ದಾರೆ"
ಮಂಗಳವಾರ ಕಾಯ್ದೆಗಳಿಗೆ ತಡೆ ನೀಡಿರುವ ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿರುವ ರೈತ ಸಂಘಟನೆಗಳು, ತಾವು ಸಮಿತಿಯ ಯಾವ ಸಭೆಯಲ್ಲಿಯೂ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಈ ಸಮಿತಿಯಲ್ಲಿರುವ ಎಲ್ಲಾ ಸದಸ್ಯರೂ ಕೃಷಿ ಕಾಯ್ದೆಗಳ ಪರವಾಗಿದ್ದಾರೆ. ಸರ್ಕಾರವೇ ಸುಪ್ರೀಂ ಕೋರ್ಟ್ ಮೂಲಕ ಈ ಸಮಿತಿ ರಚಿಸಿದೆ. ಯಾವುದಾದರೂ ರೀತಿಯಲ್ಲಿ ಈ ಕಾಯ್ದೆಗಳ ಪರವಾಗಿ ಈ ಸಮಿತಿ ನಿಲ್ಲಲಿದೆ ಎಂದು ರೈತ ಸಂಘಟನೆಗಳು ಆರೋಪಿಸಿವೆ.
ರೈತರ ಪ್ರತಿಭಟನೆಯಲ್ಲಿ ಖಲಿಸ್ತಾನಿ ಉಗ್ರರು ಭಾಗಿ: ಸುಪ್ರೀಂಕೋರ್ಟ್ಗೆ ಕೇಂದ್ರ ಮಾಹಿತಿ
ನವೆಂಬರ್ 26ರಿಂದಲೂ ನಡೆಯುತ್ತಿರುವ ಪ್ರತಿಭಟನೆ
ಕೇಂದ್ರ ಪರಿಚಯಿಸಿರುವ ಕೃಷಿ ಮಾರುಕಟ್ಟೆ ಕಾಯ್ದೆ, ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕು (ತಿದ್ದುಪಡಿ) ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ನವೆಂಬರ್ 26ರಿಂದಲೂ ದೆಹಲಿ ಗಡಿಗಳಲ್ಲಿ ಸುಮಾರು 40 ರೈತ ಸಂಘಟನೆಯ ರೈತ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಬುಧವಾರ ಅವರ ಪ್ರತಿಭಟನೆ 49ನೇ ದಿನಕ್ಕೆ ಕಾಲಿಟ್ಟಿದೆ.