ಕಿಡಿಗೇಡಿಗಳ ವದಂತಿಗಳಿಗೆ ರೈತರು ಕಿವಿಗೊಡಬೇಡಿ: ಬಿ.ಸಿ. ಪಾಟೀಲ್ ಮನವಿ
ಬೆಂಗಳೂರು, ಅ. 06: ಕೆಲವು ಕಿಡಿಗೇಡಿಗಳು ರೈತರನ್ನು ಯೋಜನೆಯ ಹೆಸರಿನಲ್ಲಿ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದು, ಇಲ್ಲಸಲ್ಲದ ವದಂತಿ ಸುಳ್ಳುಸುದ್ದಿಗಳಿಗೆ ಕಿವಿಗೊಡಬಾರದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಮನವಿ ಮಾಡಿದ್ದಾರೆ.
ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಸಿ. ಪಾಟೀಲ್ ಅವರು, ರೈತರ ಹೆಸರಿನಲ್ಲಿ ಕೆಲವರು ಅನಾವಶ್ಯಕ ಧರಣಿ ನಡೆಸುತ್ತಿರುವುದು ವಿಷಾದನೀಯ. ನೈಸರ್ಗಿಕವಾದ ನೆಲ ಜಲದ ಮೇಲೆ ಯಾರಿಗೂ ಹಕ್ಕಿರುವುದಿಲ್ಲ. ಹಿರೆಕೆರೂರಿನಿಂದ ಶಿಕಾರಿಪುರಕ್ಕೆ ಹೋಗುವ ಉಡುಗಣಿ-ತಾಳಗುಂದ-ಹೊಸೂರು ಏತ ನೀರಿನ ಯೋಜನೆಯಲ್ಲಿ ಹಿರೆಕೆರೂರಿನ ವರಹ ನಿಟ್ನೇಗಿಲು, ಬನ್ನಟ್ಟಿ, ಬಳ್ಳೂರು, ಚಿಕ್ಕೇರೂರು, ಯಲ್ಲಾಪುರ ಸೇರಿದಂತೆ ತಾಲೂಕಿನ ಏಳು ಕೆರೆಗಳು ಯೋಜನೆಯಿಂದ ತುಂಬುತ್ತವೆ. ಪೈಪ್ಲೈನ್ ಮೂಲಕ ನೀರು ಹಾಯಿಸಲಾಗುತ್ತಿದ್ದು, ಕೆಲವು ಕಿಡಿಗೇಡಿಗಳು ರೈತರ ಹೆಸರಿನಲ್ಲಿ ದುರುದ್ದೇಶಪೂರಕವಾಗಿ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಯಾವುದಾದರೊಂದು ನೀರಾವರಿ ಯೋಜನೆ ಕಾರ್ಯಗತವಾಗಬೇಕಾದರೆ ಹಲವಾರು ಸ್ಥಳಗಳಿಂದ ಹಾದು ಹೋಗಬೇಕಾಗುತ್ತದೆ. ಜನರು ವಾಸ್ತವಾಂಶವನ್ನು ಅರಿಯಬೇಕು. ಅಲ್ಲದೇ ಉಡುಗಣಿ-ತಾಳಗುಂದ-ಹೊಸೂರು ಏತ ನೀರಿನ ಯೋಜನೆಯಿಂದ ರೈತರಿಗಾಗಲೀ ಜನರಿಗಾಗಲೀ ಯಾವುದೇ ತೊಂದರೆಯಾಗದು. ಯೋಜನೆಯಿಂದ ಹಿರೇಕೆರೂರು ತಾಲೂಕಿನ ಕೆರೆಗಳು ತುಂಬಿ ಅನುಕೂಲವೇ ಆಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಹಿರೆಕೆರೂರು ತಾಲೂಕಿನ ಮಡ್ಲೂರು ಏತನೀರಾವರಿ ಯೋಜನೆ ಹಾನಗಲ್ ತಾಲೂಕಿನ ಹೊಂಕಣದಿಂದ ಬರುತ್ತಿದೆ. ಸರ್ವಜ್ಞ ಏತನೀರಾವರಿ ಯೋಜನೆ ಉಕ್ಕಡಗತ್ರಿ ರಾಣೇಬೆನ್ನೂರು ಗಡಿಯಿಂದ ಬರುತ್ತಿದೆ. ಹಿರೇಕೆರೂರು ಪಟ್ಟಣಕ್ಕೆ ಕುಡಿಯುವ ನೀರನ್ನು ತುಮ್ಮಿನಕಟ್ಟಿಯಿಂದ ಬರುತ್ತಿದೆ. ಹೀಗೆ ಬೇರೆ ತಾಲೂಕಿನಿಂದ ಹಿರೆಕೆರೂರಿಗೆ ಮೂರು ಯೋಜನೆಗಳು ಬರುತ್ತಿವೆ. ವಿನಾಕಾರಣ ರೈತರನ್ನು ದಾರಿತಪ್ಪಿಸುವುದರಿಂದ ಯಾರಿಗೇನು ಲಾಭವಾಗುತ್ತಿದೆಯೋ ಗೊತ್ತಿಲ್ಲ. ನೀರಾವರಿ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ.ಇಂತಹವರ ಮಾತಿಗೆ ಅಪಪ್ರಚಾರಕ್ಕೆ ರೈತಬಾಂಧವರು ಯಾವುದೇ ಕಾರಣಕ್ಕೆ ಬೆಲೆಕೊಡಬಾರದು. ರೈತರಿಗೆ ಸರ್ಕಾರ ಯಾವುದೇ ರೀತಿ ಅನ್ಯಾಯ ಮಾಡುವುದಿಲ್ಲ. ವದಂತಿಗಳಿಗೆ ಕಿವಿಗೊಡಬಾರದೆಂದು ಬಿ.ಸಿ. ಪಾಟೀಲ್ ಅವರು ರೈತರಲ್ಲಿ ಮನವಿ ಮಾಡಿದರು.