ಎಂಎಸ್ಪಿ ಖಾತರಿ: ಕೃಷಿ ಕಾಯ್ದೆ ಬೆಂಬಲಿಸುತ್ತಿರುವವರದ್ದೂ ಇದೇ ಬೇಡಿಕೆ
ನವದೆಹಲಿ, ಡಿಸೆಂಬರ್ 26: ಕೃಷಿ ಕಾಯ್ದೆಗಳು ರೈತರ ಅಭಿವೃದ್ಧಿಗೆ ಪೂರಕವಾಗಿವೆ ಮತ್ತು ಈ ಕಾಯ್ದೆಗಳಿಂದ ಕನಿಷ್ಠ ಬೆಂಬಲ ಬೆಲೆ ನಿಂತು ಹೋಗುವುದಿಲ್ಲ ಎಂದು ಕೇಂದ್ರ ಸರ್ಕಾರ ಪದೇ ಪದೇ ಹೇಳುತ್ತಿದೆ. ಆದರೆ ಕಾಯ್ದೆಯಲ್ಲಿನ ಅಂಶಗಳನ್ನು ಗಮನಿಸಿದಾಗ ಎಂಎಸ್ಪಿ ದೊರಕುವ ಬಗ್ಗೆ ಯಾವುದೇ ಖಾತರಿ ಇಲ್ಲ ಎಂದು ಪ್ರತಿಭಟನಾನಿರತ ರೈತರು ವಾದಿಸಿದ್ದಾರೆ.
ಇನ್ನೊಂದೆಡೆ ಈ ಪ್ರತಿಭಟನೆಯನ್ನು ಬೆಂಬಲಿಸದ ಹಾಗೂ ಕಾಯ್ದೆಯ ಪರ ಧ್ವನಿ ಎತ್ತಿರುವ ರೈತರೂ ಕನಿಷ್ಠ ಬೆಂಬಲ ಬೆಲೆಯ ಮೂಲ ಪ್ರಶ್ನೆಯ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ. ಕಾಯ್ದೆಗೆ ತಮ್ಮ ವಿರೋಧವಿಲ್ಲ. ಆದರೆ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಬಗ್ಗೆ ಖಚಿತತೆ ನೀಡಬೇಕು ಎಂದು ಹೇಳಿದ್ದಾರೆ.
'ರೈತರ ಹಿತಾಸಕ್ತಿಗೆ ಧಕ್ಕೆಯಾಗಲು ಯಾವುದೇ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಕಾಯ್ದೆಗಳು ನಮಗೆ ಹೆಚ್ಚು ಆಯ್ಕೆಗಳನ್ನು ನೀಡುತ್ತದೆ ಎಂದು ಅನಿಸುತ್ತಿದೆ. ಆದರೆ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಬೇಕೇ ಬೇಕು' ಎಂದು ಭಾರತೀಯ ಕಿಸಾನ್ ಮಜ್ದೂರ್ ಸಂಘದ ಸದಸ್ಯ ಸತ್ಪಾಲ್ ಸಿಂಗ್ ಹೇಳಿದ್ದಾರೆ.
ಹೆಚ್ಚಿನ ರೈತ ಸಂಘಟನೆಗಳಿಗೆ ಕಾಯ್ದೆಯ ಸ್ವರೂಪ ಅರ್ಥವಾಗುತ್ತಿಲ್ಲ. 'ಪ್ರಧಾನಿ ಮೋದಿ ಅವರ ಭಾಷಣವನ್ನುನೋಡಿದೆ. ಉತ್ತಮ ಬೆಲೆಗಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದರೆ ನಾನು ಅವರನ್ನು ಬೆಂಬಲಿಸುತ್ತೇನೆ. ನನಗೆ ಕಾಯ್ದೆಗಳು ಅರ್ಥವಾಗಿಲ್ಲ. ಆದರೆ ದೊಡ್ಡ ಖರೀದಿದಾರರು ನಮ್ಮ ಬಳಿ ಬರಬೇಕು. ಸ್ಥಳೀಯ ಮಾರುಕಟ್ಟೆಗಳು ಕೆಟ್ಟ ಸ್ಥಿತಿಯಲ್ಲಿವೆ' ಎಂದು ಅಸ್ಸಾಂನ ರೈತ ಕದಮ್ ಬರುವಾ ಹೇಳಿದ್ದಾರೆ.