ಮುಂಗಾರು ಪೂರ್ವ ಮಳೆ ನಂಬಿ ಬಿತ್ತನೆ ಮಾಡಿ ಮೋಸ ಹೋದ ರಾಯಚೂರು ರೈತರು
ರಾಯಚೂರು, ಜೂನ್ 26: ಮಳೆಗಾಲ ಆರಂಭವಾಗಿ ಒಂದು ತಿಂಗಳು ಮುಗಿಯುತ್ತಾ ಬಂದಿದ್ದರೂ ಮಳೆರಾಯನ ದರ್ಶನವಿಲ್ಲದೆ ರೈತರು ಆತಂಕಕ್ಕೀಡಾಗಿದ್ದಾರೆ. ಮೇ ಅಂತ್ಯದಲ್ಲಿ ಸುರಿದ ಅಡ್ಡಮಳೆ ನಂಬಿ ಬಿತ್ತನೆ ಮಾಡಿರುವ ಕೆಲವು ರೈತರು ಈಗ ನಷ್ಟ ಅನುಭವಿಸುವಂತಾಗಿದೆ.
ಬಿತ್ತನೆ ಮಾಡಿರುವ ಬೀಜಕ್ಕೆ ತೇವಾಂಶ ಕೊರತೆಯಾಗಿದ್ದು, ರಾಯಚೂರು, ದೇವದುರ್ಗ ಭಾಗಗಳಲ್ಲಿ ಇನ್ನೂ ಭೂಮಿಯೊಳಗಿನ ಬೀಜಗಳು ಮೊಳಕೆ ಒಡೆದಿಲ್ಲ. ಲಿಂಗಸುಗೂರು, ಮಸ್ಕಿ, ಸಿಂಧನೂರು, ಮಾನ್ವಿಯ ಕೆಲವು ಭಾಗಗಳಲ್ಲಿ ತುಂತುರು ಸುರಿದ ಮಳೆಯಿಂದ ಭೂಮಿಯಲ್ಲಿ ಸ್ವಲ್ಪ ತೇವಾಂಶ ಹಿಡಿದಿದೆ. ಬೀಜಗಳು ಮೊಳಕೆಯಾಗಿ, ಕೆಲವು ಜಮೀನುಗಳಲ್ಲಿ ಬೆಳೆಯೊಂದಿಗೆ ಕಳೆ ಕೂಡಾ ಬೆಳೆಯುತ್ತಿದೆ.
ರಾಯಚೂರು; ಮಳೆ ಆರಂಭ, ಕೃಷಿ ಚಟುವಟಿಕೆಯಲ್ಲಿ ತೊಡಗಿದ ರೈತರು
ಜಿಲ್ಲಾ ಕೃಷಿ ಇಲಾಖೆ ಮಾಹಿತಿ ಪ್ರಕಾರ, ಮುಂಗಾರು ಹಂಗಾಮಿನಲ್ಲಿ ಒಟ್ಟು 5,35,471 ಹೆಕ್ಟೇರ್ ಬಿತ್ತನೆಯಾಗುವ ಅಂದಾಜು ಗುರಿ ಮಾಡಲಾಗಿದೆ. ಅದರಲ್ಲಿ 2,44,767 ಹೆಕ್ಟೇರ್ ಮಳೆಯಾಶ್ರಿತ ಖುಷ್ಕಿ ಜಮೀನು ಮತ್ತು 2,90,704 ಹೆಕ್ಟೇರ್ ಕಾಲುವೆ, ಕೊಳವೆಬಾವಿ ಹಾಗೂ ನದಿನೀರು ಆಶ್ರಿತ ನೀರಾವರಿ ಜಮೀನಿದೆ. ಅಸಮರ್ಪಕವಾಗಿ ಸುರಿಯುತ್ತಿರುವ ಮಳೆ ಕಾರಣದಿಂದ ಖುಷ್ಕಿ ಇರುವ ಕಡೆಗಳಲ್ಲಿ ಶೇ 20 ರಷ್ಟು (ಸುಮಾರು 1.07 ಲಕ್ಷ ಹೆಕ್ಟೇರ್) ಬಿತ್ತನೆಯಾಗಿದೆ.
ನಷ್ಟದ ಭೀತಿಯಲ್ಲಿ ರೈತರು
ಮುಂಗಾರು ಮಳೆ ಸಕಾಲಕ್ಕೆ ಸುರಿಯುತ್ತಿಲ್ಲ. ಹೀಗಾಗಿ ಬಿತ್ತನೆ ಮಾಡಿರುವ ರೈತರು ಆರಂಭದಲ್ಲೇ ನಷ್ಟದ ಭೀತಿಗೆ ಒಳಗಾಗಿದ್ದಾರೆ. ರಾಯಚೂರು ಮತ್ತು ದೇವದುರ್ಗದ ಬಹುತೇಕ ಕಡೆಗಳಲ್ಲಿ ಬಿಸಿಲಿನ ವಾತಾವರಣ ಮುಂದುವರಿದ ಕಾರಣ, ಬೀಜಗಳು ನೆಲದಿಂದ ಮೇಲಕ್ಕೆ ಬರುತ್ತಿಲ್ಲ. ಮುಗಿಲಕಡೆಗೆ ಮುಖಮಾಡಿರುವ ರೈತರು ಬೀಜ, ಗೊಬ್ಬರಕ್ಕಾಗಿ ಮಾಡಿದ ನಷ್ಟದಿಂದ ಪಾರಾಗಲು ಮಳೆರಾಯನನ್ನು ಪ್ರಾರ್ಥಿಸುತ್ತಿದ್ದಾರೆ.
ಮುಂಗಾರು ಪೂರ್ವ ಮೇ ತಿಂಗಳು ವಾಡಿಕೆಗಿಂತಲೂ ಶೇ 85 ರಷ್ಟು ಅಧಿಕ ಮಳೆ ಸುರಿದ ಕಾರಣ, ಹಿರಿಹಿರಿ ಹಿಗ್ಗಿದ್ದ ರೈತರು, ಕೆಲವೆಡೆ ಬಿತ್ತನೆ ಮಾಡಿದ್ದರು. ಅರ್ಧಕ್ಕಿಂತಲೂ ಹೆಚ್ಚಿನ ಸಂಖ್ಯೆಯ ರೈತರು ಇನ್ನೊಂದು ಮಳೆ ಸುರಿಯುವುದಕ್ಕೆ ಕಾಯುತ್ತಿದ್ದು, ಭೂಮಿಹದ ಮಾಡಿದ್ದಾರೆ. ಸೂರ್ಯಕಾಂತಿ, ಹತ್ತಿ, ಭತ್ತ ಬಿತ್ತನೆ ವ್ಯಾಪಕವಾಗಿ ಬಿತ್ತನೆಯಾಗುವ ನಿರೀಕ್ಷೆ ಇದೆ.ಮೋಡ ನಂಬಿ ಬಿತ್ತನೆ ಮಾಡಿ ಮೋಸ ಹೋದ ರೈತ
ಜೂನ್ ತಿಂಗಳು ವಾಡಿಕೆ ಮಳೆ ಬೀಳದ ಕಾರಣ, ಬಹುತೇಕ ಎಲ್ಲಾ ತಾಲ್ಲೂಕುಗಳಲ್ಲಿ ಶೇ 50 ರಷ್ಟು ಮಳೆ ಕೊರತೆಯಾಗಿದೆ. ಮುಂದಿನ ಎರಡು ವಾರಗಳಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಕಳೆದ ವಾರದ ಹವಾಮಾನ ಇಲಾಖೆ ನೀಡಿದ್ದ ಮುನ್ಸೂಚನೆ ಪ್ರಕಾರ, ಇದುವರೆಗೂ ಮಳೆ ಸುರಿದಿಲ್ಲ. ಸಾಧಾರಣ ಮಳೆಯಾದರೆ ಸಾಕು ಎನ್ನುವ ಸಂಕಷ್ಟದಲ್ಲಿ ರೈತರಿದ್ದಾರೆ. ಮೋಡಕವಿದ ವಾತಾವರಣ ಇದ್ದರೂ ಮಳೆ ಸುರಿಯುತ್ತಿಲ್ಲ. ಮೋಡಗಳನ್ನು ನಂಬಿ ಬಿತ್ತನೆ ಮಾಡಿರುವವರು ಮೋಸ ಹೋದವರಂತೆ ಚಡಿಪಡಿಸುತ್ತಿದ್ದಾರೆ.
ರಾಯಚೂರು; ಕೃಷ್ಣಾ ನದಿ ಪಾತ್ರದ ಜನರಿಗೆ ಜಿಲ್ಲಾಡಳಿತದ ಎಚ್ಚರಿಕೆ
1.38 ಲಕ್ಷ ಹೆಕ್ಟೇರ್ನಲ್ಲಿ 22 ಸಾವಿರ ಹೆಕ್ಟೇರ್ಗಳಲ್ಲಿ ಮಾತ್ರ ಬಿತ್ತನೆ
ಜೂ 20 ವರೆಗಿನ ಬಿತ್ತನೆ ಪ್ರಮಾಣ ಕಳೆದ ಒಂದು ದಶಕದಲ್ಲಿಯೇ ಅತ್ಯಂತ ಕಡಿಮೆ ಬಿತ್ತನೆಯಾಗಿದೆ. ಬಿತ್ತನೆಗೆ ಪೂರಕವಾಗುವಂತೆ ಮಳೆ ಸುರಿಯದ ಕಾರಣ ರೈತರ ಮುಂಗಾರು ಬಿತ್ತನೆಗೆ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿಲ್ಲ. ಈಗಾಗಲೇ ಬಿತ್ತನೆ ಮಾಡಿದ ರೈತರ ಪಾಡು ಕಂಡ ಉಳಿದ ರೈತರು ಮಳೆ ನಿರೀಕ್ಷೆಯಲ್ಲಿ ಇದ್ದಾರೆ. ಮುಂಗಾರು ಆರಂಭಗೊಂಡು ಸರಿ ಸುಮಾರ 20 ದಿನ ಕಳೆಯುತ್ತಿದ್ದರು, ಇಲ್ಲಿಯವರಿಗೆ ಜಿಲ್ಲೆಯಲ್ಲಿ ಕೇವಲ ಶೇ16.57ರಷ್ಟು ಮಾತ್ರ ಬಿತ್ತನೆಯಾಗಿದೆ.1.38 ಲಕ್ಷ ಹೆಕ್ಟರ್ ಗುರಿಯಲ್ಲಿ ಬಿತ್ತನೆ ಪ್ರಮಾಣ ಕೇವಲ 22 ಸಾವಿರ ಮಾತ್ರ ಇದೆ. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ತೊಗರಿ, ಸೂರ್ಯಕಾಂತಿ, ಹತ್ತಿ, ಸಜ್ಜೆ ಬಿತ್ತನೆ ಮಾಡಲಾಗುತ್ತದೆ. ಮಳೆ ಕುಸಿತದಿಂದ ಬಿತ್ತನೆ ಪ್ರಮಾಣದಲ್ಲಿಯು ಉಸಿತ ಕಂಡು ಬಂದಿದೆ.
ತಾಪಮಾನದಲ್ಲಿ ಏರಿಕೆ
ಪ್ರಸಕ್ತ ಮುಂಗಾರು ಹಂಗಾಮು ಜಿಲ್ಲೆಯ ರೈತರ ಪಾಲಿಗೆ ಶುಭದಾಯಕವಾಗಿರದೆ ಇರುವುದು ರೈತರು ಭಾರಿ ಆತಂಕದಲ್ಲಿ ಮಳೆ ರಾಯನ ನಿರೀಕ್ಷೆಯಲ್ಲಿ ಕೂಡುವಂತೆ ಮಾಡಿದೆ. ಕಳೆದ 24 ಗಂಟೆಗಳಲ್ಲಿ ಮಳೆ ಪ್ರಮಾಣ ಬಾರಿ ಪ್ರಮಾಣಲ್ಲಿ ಕುಸಿದ್ದರಿಂದ ರೈತರ ಪಾಲಿಗೆ ಆತಂಕ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಕಳೆದ 24 ಗಂಟೆಗಳಲ್ಲಿ ಶೇ 76 ರಷ್ಟು ಮಳೆ ಕುಸಿತ ಮತ್ತು ತಾಪಮಾನ ಏರಿಕೆ ಮೊಳಕೆ ಒಡೆದ ಸಸಿಗಳ ಸಂರಕ್ಷಣೆ ಹಾಗೂ ಮುಂಗಾರು ಬಿತ್ತನೆಗೆ ತೀವ್ರ ಅಡ್ಡಿಯಾಗಿದೆ. ಮಾನ್ವಿ,ರಾಯಚೂರು ಮತ್ತು ಸಿಂಧನೂರು ತಾಲೂಕಿನಲ್ಲಿ ಮಳೆ ಪ್ರಮಾಣ ಋಣಾತ್ಮಕವಾಗಿದೆ.
ಮಾನ್ವಿ ತಾಲೂಕಿನಲ್ಲಿ ಶೇ 37, ರಾಯಚೂರು ತಾಲೂಕಿನಲ್ಲಿ ಶೇ 20 ಮತ್ತು ಸಿಂಧನೂರು ತಾಲೂಕಿನಲ್ಲಿ ಶೇ 59 ರಷ್ಟು ಮಳೆಯಲ್ಲಿ ಕುಸಿತ ಕಂಡು ಬಂದಿದೆ. ಮುಂಗಾರು ಹಂಗಾಮು ಪೂರ್ವ ಸುರಿದ ಮಳೆಯಿಂದಾಗಿ ಜಿಲ್ಲೆ ಬಹುತೇಕ ಕಡೆ ರೈತರು ಬಿತ್ತನೆ ಮಾಡಿದ್ದರು. ಮುಂಗಾರು ಹಂಗಾಮು ಆರಂಭಗೊಂಡ ನಂತರ ಮಳೆ ಕುಸಿತ ರೈತರನ್ನು ಸಂಕಷ್ಟಕ್ಕೆ ಸಿಕ್ಕುವಂತೆ ಮಾಡಿದೆ. ಜೂ 21 ರ ನಂತರ ಜಿಲ್ಲೆ ಮಳೆ ವಾತಾವರಣ ಬದಲು ಬಿಸಿಲಿನ ತಾಪಮಾನ ಹೆಚ್ಚುತ್ತಿದೆ. ಕೆಲವೆಡೆಯಂತು ರೈತರು, ಬೆಳೆ ರಕ್ಷಿಸಲು ಟ್ಯಾಂಕರ್ಗಳನ್ನು ಅವಲಂಬಿಸುವಂತಾಗಿದೆ. ಮುಂಗಾರು ಆರಂಭಗೊಂಡ 20 ದಿನ ಕಳೆದರು ಜಿಲ್ಲೆ ಮಳೆ ಪ್ರಮಾಣ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲದೆ ಇರುವುದು ಮುಂದೇನು ಎನ್ನುವಂತ ಸ್ಥಿತಿ ತಂದೊಡ್ಡಿದೆ.