ಎತ್ತುಗಳನ್ನು ಪೋಷಿಸಲಾಗದೆ ಅಧುನಿಕ ಯಂತ್ರದ ಕಡೆ ವಾಲಿದ ರೈತ
ದಾವಣಗೆರೆ, ಜೂನ್ 28: ಎತ್ತುಗಳನ್ನು ರೈತನ ಒಡನಾಡಿ, ರೈತನ ಗೆಳೆಯ ಎಂಬ ಕಾಲವೊಂದಿತ್ತು. ಆದರೆ ಕಾಲಚಕ್ರ ಉರುಳಿದಂತೆಲ್ಲಾ ಈ ಆಧುನಿಕ ಯುಗದಲ್ಲಿ ಕೃಷಿ ಚಟುವಟಿಕೆಯ ಚಿತ್ರಣವೇ ಬದಲಾಗುತ್ತಿದೆ. ದಾವಣಗೆರೆ ತಾಲ್ಲೂಕಿನ ಬಿಳಿಚೋಡು ಗ್ರಾಮದ ರೈತ ಶಿವಣ್ಣಗೌಡ್ರು ಟ್ರ್ಯಾಕ್ಟರ್ ಚಾಲಿತ ಎಡೆಗುಂಟೆಯನ್ನು ಬಳಸಿ ಆಧುನಿಕ ಬೇಸಾಯ ಮಾಡುತ್ತಿದ್ದಾರೆ.
Recommended Video
ಮುಂಗಾರಿನ ಹಂಗಾಮಿನ ಆಗಮನ ಹಿನ್ನೆಲೆಯಲ್ಲಿ ಒಂದು ತಿಂಗಳಿನಿಂದ ರೈತರು ಮಕ್ಕೆಜೋಳ, ಸೂರ್ಯಕಾಂತಿ, ಹತ್ತಿ, ತೊಗರಿ, ಹಾಗೂ ಶೇಂಗಾ ಬಿತ್ತನೆ ಮಾಡಿದ್ದಾರೆ, ಬೀಜಗಳು ಮೊಳಕೆ ಹೊಡೆದು ಮೊದಲ ಗಳೆಗೆ (ಬುಡಗುಂಟೆ) ಸಜ್ಜುಗೊಂಡಿವೆ ಆದರೆ ಬಹುತೇಕ ಹೊಲಗಳಲ್ಲಿ ಎತ್ತುಗಳು ಕಾಣದೆ ಟ್ರಾಕ್ಟರ್ನಿಂದ ಎಡೆಗುಂಟೆ ಹೊಡೆಯುವುದನ್ನು ಕಾಣಬಹುದಾಗಿದೆ.
ಕೃಷಿ ಬಿಕ್ಕಟ್ಟಿಗೆ ಪರಿಹಾರ ರೈತರ ಹೊಲದಲ್ಲಿಲ್ಲ, ಬದಲಿಗೆ...
ಕೃಷಿಯಲ್ಲಿ ತೊಡಗಿದ ರೈತ ಒಂದಲ್ಲ ಒಂದು ರೀತಿಯಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಲೇ ಇರುತ್ತಾನೆ. ಇಂತಹ ಸಮಯದಲ್ಲಿ ತನ್ನ ಕುಟುಂಬವನ್ನೇ ನಿರ್ವಹಣೆ ಮಾಡಲಾಗದ ರೈತ ಇನ್ನು ಎತ್ತುಗಳನ್ನು ನಿರ್ವಹಣೆ ಮಾಡುವುದು ದುಬಾರಿ ಎನ್ನುವುದನ್ನು ಅರಿತ ರೈತರು, ಹಳ್ಳಿಗಳಲ್ಲಿ ಎತ್ತುಗಳನ್ನು ಮಾರುತ್ತಿದ್ದಾರೆ.
ಸುತ್ತಲೂ ಟೈರ್ ಅಳವಡಿಸಲಾಗಿದೆ
ಈ ಟ್ರ್ಯಾಕ್ಟರ್ ಗೆ ಚಕ್ಕಡಿ ಗಾಲಿ ಬಳಸಲಾಗುತ್ತಿದೆ. ಗಾಲಿಗಳನ್ನು ಕಬ್ಬಿಣದಿಂದ ಮಾಡಿಸಲಾಗಿದ್ದು, ಇದರ ಸುತ್ತಲೂ ಟೈರ್ ಅಳವಡಿಸಲಾಗಿದೆ. ಟ್ರ್ಯಾಕ್ಟರ್ ಹಿಂಭಾಗದಲ್ಲಿ ಜೋಡೆತ್ತುಗಳಿಗೆ ಬಳಸಲಾಗುವ ನಗದ ರೀತಿ ಕಬ್ಬಿಣದ ಪೈಪನ್ನು ಅಳವಡಿಸಿ ಅದಕ್ಕೆ ನಾಲ್ಕು ಕಬ್ಬಿಣದಿಂದ ಮಾಡಿರುವಂತಹ ಎಡೆಗುಂಟೆಯನ್ನು ಅಳವಡಿಸಿದ್ದಾರೆ. ಒಂದು ಕುಂಟೆಗೆ ಒಬ್ಬರಂತೆ ನಾಲ್ಕು ಜನ ಮತ್ತು ಟ್ರ್ಯಾಕ್ಟರ್ ಚಾಲನೆ ಮಾಡುವ ಒಬ್ಬ ಡ್ರೈವರ್ ಇರಬೇಕು.
ಎತ್ತಿನ ವ್ಯವಸಾಯದಲ್ಲಿ ಸಸಿಗಳು ತುಂಬಾ ಹಾಳಾಗುತ್ತವೆ
ಟ್ರ್ಯಾಕ್ಟರ್ ಚಾಲಿತ ಎಡೆಗುಂಟೆಯಿಂದ ಇದರಲ್ಲಿ ದಿನಕ್ಕೆ ಸುಮಾರು 15 ಎಕರೆ ಜಮೀನನ್ನು ಉಳುಮೆ ಮಾಡಬಹುದಾಗಿದ್ದು, ಇದರಿಂದ ಸಮಯ ಹಾಗೂ ಪರಿಶ್ರಮ ಉಳಿತಾಯವಾಗುತ್ತದೆ ಅಲ್ಲದೇ ಎತ್ತಿನ ವ್ಯವಸಾಯದಲ್ಲಿ ಸಸಿಗಳು ತುಂಬಾ ಹಾಳಾಗುತ್ತವೆ. ಆದರೆ ಇದರಲ್ಲಿ ಸಸಿಗಳು ಹಾಳಾಗುವುದು ಸಹ ಕಡಿಮೆ ಕಂಡುಬರುತ್ತದೆ.
ರೈತರೇ.. ಕಳೆನಾಶಕಕ್ಕೆ ಯೂರಿಯಾ ಮಿಶ್ರಣ ಬೇಡ: ಕೃಷಿ ತಜ್ಞರ ಅಭಿಪ್ರಾಯ
ಪ್ರತಿ ಹೆಕ್ಟರ್ ಗೆ 500-600 ರೂ. ವೆಚ್ಚವಾಗಲಿದ್ದು, ಸಮಯ ಉಳಿತಾಯವಾಗುವುದರ ಜೊತೆಗೆ ಬಹುಬೇಗ ಉಳುಮೆ ಮಾಡಬಹುದು ಎಂದು ರೈತ ಶಿವಣ್ಣಗೌಡ್ರು ಒನ್ಇಂಡಿಯಾ ಪ್ರತಿನಿಧಿಯ ಜೊತೆ ಮಾಹಿತಿ ಹಂಚಿಕೊಂಡರು.
ಆಧುನಿಕ ಕೃಷಿಗೆ ಹೆಚ್ಚು ಒತ್ತು ಕೊಡುವ ಅವಶ್ಯವಿದೆ
ಆಧುನಿಕ ಕೃಷಿಯಲ್ಲಿ ಯಂತ್ರೋಪಕರಣ ಸರ್ವೇ ಸಾಮಾನ್ಯವಾಗಿದ್ದು, ರೈತರು ತಾನಾಗಿಯೇ ಇಂತಹ ಬುದ್ಧಿವಂತಿಕೆಯನ್ನು ಬಳಸಿಕೊಂಡು ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುತ್ತಿದ್ದಾರೆ. ಇಂತಹ ರೈತರಿಗೆ ನೆರವಾಗುವಂತೆ ಸರ್ಕಾರ ಸಬ್ಸಿಡಿ ರೀತಿಯ ಯೋಜನೆಗಳನ್ನು ಜಾರಿಗೆ ತಂದು ಆಧುನಿಕ ಕೃಷಿಗೆ ಹೆಚ್ಚು ಒತ್ತು ಕೊಡುವ ಅವಶ್ಯವಿದೆ ಎಮದರು.
ಅಂದಾಜಿನ ಪ್ರಕಾರ ತಾಲ್ಲೂಕಿನಲ್ಲಿ ಶೇ.15 ರಷ್ಟು ಮಾತ್ರ ಜೋಡೆತ್ತು ಹೊಂದಿದ ರೈತರು ಇದ್ದಾರೆ. ಎಡೆಗುಂಟೆ ಎಂದರೆ ಜಮೀನಿನಲ್ಲಿ ಬೆಳೆಯಲಾದ ಬೆಳೆಯ ಮಧ್ಯೆದಲ್ಲಿ ಅನವಶ್ಯಕವಾಗಿ ಬೆಳೆಯುವ ಕಳೆಯನ್ನು ನಿಯಂತ್ರಿಸುವ ಸಲುವಾಗಿ ಬಳಸುವಂತಹದ್ದಾಗಿದೆ. ಇದರಿಂದ ಬೆಳೆಯ ಬುಡಕ್ಕೆ ಮಣ್ಣು ಬಿದ್ದು ಸಸಿಗಳು ಬೇರು ಸಮೇತ ಗಟ್ಟಿಯಾಗಲಿವೆ.
ಆಧುನಿಕ ಯುಗದಲ್ಲಿ ಎತ್ತಿನ ಸಂಖ್ಯೆ ತುಂಬಾ ಕಡಿಮೆ
ಈ ಟ್ರಾಕ್ಟರ್ ಚಾಲಿತ ವ್ಯವಸಾಯದಿಂದ ಸಮಯ ಹಾಗೂ ಪರಿಶ್ರಮ ಉಳಿತಾಯವಾಗುತ್ತಿದೆ. ಇದರಿಂದ 10 ರಿಂದ 15 ಎಕರೆ ಹೊಲ ಉಳುಮೆ ಮಾಡಲಾಗುವುದು ಎಂದು ಟ್ರ್ಯಾಕ್ಟರ್ ಚಾಲಕ ಹೇಳುತ್ತಾನೆ.
ಈ ಆಧುನಿಕ ಯುಗದಲ್ಲಿ ಎತ್ತಿನ ಸಂಖ್ಯೆ ತುಂಬಾ ಕಡಿಮೆಯಾಗುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ತಾಲ್ಲೂಕಿನ ರೈತರು ಆಧುನಿಕ ಉಪಕರಣಗಳನ್ನು ಬಳಸಿ ಉಳುಮೆ ಮಾಡುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಲೋಕೇಶ್ ತಿಳಿಸಿದರು.