ಟ್ರ್ಯಾಕ್ಟರ್ ಮೆರವಣಿಗೆ: ರೈತರ ಟ್ರಾಕ್ಟರ್ v/s ಪೊಲೀಸರ ಲಾಠಿ !
Array
ಬೆಂಗಳೂರು, ಜನವರಿ 26: ರಾಜಧಾನಿಯಲ್ಲಿ ರೈತ ಸಂಘಟನೆಗಳು ಆಯೋಜಿಸಿರುವ ಟ್ರ್ಯಾಕ್ಟರ್ ಜಾಥಾಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ರೈತರ ಹೋರಾಟವನ್ನು ಜಿಲ್ಲಾ ಮಟ್ಟದಲ್ಲಿಯೇ ಪೊಲೀಸರು ತಡೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ.
ರೈತರ ಟ್ರಾಕ್ಟರ್ ಗಳು ಊರು ಬಿಡುವ ಮೊದಲೇ ಲಾಠಿ ಹಿಡಿದು ಪೊಲೀಸರು ಬಂದೋಬಸ್ತ್ ಗೆ ನಿಯೋಜನೆಗೊಂಡಿದ್ದಾರೆ. ಗಣರಾಜ್ಯೋತ್ಸವ ದಿನ ರೈತ ಸಂಘಟನೆಗಳು ಕರೆ ಕೊಟ್ಟಿರುವ ಶಾಂತಿಯುತ ಜಾಥಾ ಹೊಸ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ. ರೈತರ ಹೋರಾಟದ ಪೆರೇಡ್, ಗಣರಾಜ್ಯೋತ್ಸವ ಸೇರಿ ಜನಗಣರಾಜ್ಯೋತ್ಸವ ಕ್ಕೆ ನಾಂದಿ ಹಾಡಿದೆ. ರೈತರ ಟ್ರಾಕ್ಟರ್ ಗಳು ಅಥವಾ ಪೊಲೀಸ್ ಲಾಠಿಯೋ ಎಂಬ ಸನ್ನಿವೇಶ ಸೃಷ್ಟಿಯಾಗಿದೆ.
ಟ್ರ್ಯಾಕ್ಟರ್ ಮೂಲಕ ಬಲವಂತವಾಗಿ ಗಡಿ ದಾಟುವ ರೈತರ ಪ್ರಯತ್ನಕ್ಕೆ ಪೊಲೀಸರ ತಡೆ
ರಾಜಧಾನಿಯಲ್ಲಿ ರೈತ ಸಂಘಟನೆಗಳು ಆಯೋಜಿರುವ ಟ್ರಾಕ್ಟರ್ ಜಾಥಾ ಜಿಲ್ಲಾ ಮಟ್ಟದಲ್ಲಿ ತಡೆಯಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪೊಲೀಸರು ರೈತರ ಟ್ರಾಕ್ಟರ್ ಗಳನ್ನು ಜಿಲ್ಲಾ ಮಟ್ಟದಲ್ಲಿ ತಡೆದಲ್ಲಿ, ಕೂಡಲೇ ಹೆದ್ದಾರಿಗಳನ್ನು ಬಂದ್ ಮಾಡುವಂತೆ ರೈತ ಮುಖಂಡರು ಸೂಚಿಸಿದ್ದಾರೆ. ಹೀಗಾಗಿ ರೈತರ ಟ್ರಾಕ್ಟರ್ ಜಾಥಾ ತಡೆಯುವುದು ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಬೆಂಗಳೂರಿಗೆ ಪ್ರವೇಶ ಇರುವ ನಾಲ್ಕು ದಿಕ್ಕಿನಿಂದಲೂ ರೈತ ಹೋರಾಟ ಟ್ರಾಕ್ಟರ್ ಗಳು ಬರಲಿದ್ದು, ಬೆಂಗಳೂರಿನಲ್ಲಿ ಸಂಚಾರ ಸಮಸ್ಯೆ
ತುಮಕೂರು ರಸ್ತೆ : ತುಮಕೂರು ಭಾಗದಿಂದ ಬರುವ ರೈತರ ಹೋರಾಟ ಹತ್ತಿಕ್ಕಲು ನೈಸ್ ರಸ್ತೆ ಬಳಿ ಈಗಾಗಲೇ ಕೆಎಸ್ಆರ್ಪಿ ತುಕಡಿ ಸೇರಿದಂತೆ ಪೊಲೀಸರನ್ನು ನಿಯೋಜಿಲಾಗಿದೆ. ಬೆಳಗ್ಗೆ ಆರು ಗಂಟೆಯಿಂದಲೇ ಪೊಲೀಸರು ರಸ್ತೆಯಲ್ಲಿ ನಿಂತಿದ್ದಾರೆ. ಇನ್ನು ತುಮಕೂರು, ಕುಣಿಗಲ್, ಸುತ್ತಮುತ್ತ ಭಾಗದಿಂದ ಸಾವಿರಾರು ಟ್ರ್ಯಾಕ್ಟರ್ ಬರುವ ನಿರೀಕ್ಷೆಯಿದೆ. 9 ಗಂಟೆಗೆ ಬೆಂಗಳೂರು ನಗರಕ್ಕೆ ಎಂಟ್ರಿ ಕೊಡುವ ನಿಟ್ಟಿನಲ್ಲಿ ಈಗಾಗಲೇ ಕೆಲವು ಗ್ರಾಮಗಳಿಂದ ಟ್ರಾಕ್ಟರ್ ತೆರಳಿವೆ ಎಂಬ ಮಾಹಿತಿ ರೈತ ಮುಖಂಡರಿಂದ ಲಭ್ಯವಾಗಿದೆ.
ಮೈಸೂರು ರಸ್ತೆ : ಮಂಡ್ಯ, ರಾಮನಗರ, ಮೈಸೂರು ರಸ್ತೆ ಮಾರ್ಗವಾಗಿ ಬರುವ ಟ್ರಾಕ್ಟರ್ ಗಳು ಬಿಡದಿ ಸಮೀಪದ ಬೈರಮಂಗಲ ಕ್ರಾಸ್ ಬಳಿ ಒಗ್ಗೂಡಲಿವೆ. ಅಲ್ಲಿಂದೆ ಬೆಂಗಳೂರು ನಗರ ಪ್ರವೇಶಕ್ಕೆ ಸಾಮೂಹಿಕವಾಗಿ ರೈತರ ಟ್ರಾಕ್ಟರ್ ಗಳು ಬರಲಿವೆ. ಈ ನಿಟ್ಟಿನಲ್ಲಿ ರೈತರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನೂ ರೈತರ ಟ್ರಾಕ್ಟರ್ ಗಳನ್ನು ನಗರದೊಳಗೆ ಪ್ರವೇಶಿಸಿದಂತೆ ಕೆಂಗೇರಿ ಸಮೀಪದ ನೈಸ್ ರಸ್ತೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಏರ್ಪೋರ್ಟ್ : ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಕಡೆಯಿಂದ ಬರುವ ರೈತರ ಟ್ರಾಕ್ಟರ್ ಗಳನ್ನು ತಡೆಯಲು ಏರ್ ಪೋರ್ಟ್ ರಸ್ತೆಯ ಟೋಲ್ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ನೂರಾರು ಪೊಲೀಸರು ಆಗಲೇ ರಸ್ತೆಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಶಿಢ್ಲಘಟ್ಟ ತಾಲೂಕುಗಳಿಂದ ಸುಮಾರು 500 ಕ್ಕೂ ಹೆಚ್ಚು ಟ್ರಾಕ್ಟರ್ ಗಳು ಬೆಂಗಳೂರಿನ ಜಾಥಾದಲ್ಲಿ ಪಾಲ್ಗೊಳ್ಳಲಿವೆ ಎಂದು ಹೇಳಲಾಗಿದೆ. ದೇವನಹಳ್ಳಿಯ ನಂದಿ ಕ್ರಾಸ್ ಬಳಿ ಟ್ರಾಕ್ಟರ್ ಗಳು ಜಮಾವಣೆಗೊಳ್ಳಲಿದ್ದು, ಭಕ್ತರಹಳ್ಳಿ ಬೈರೇಗೌಡ, ಎಚ್. ಲಕ್ಷ್ಮೀನಾರಾಯಣ, ಆಂಜನೇಯರೆಡ್ಡಿ ಹೋರಾಟದ ನೇತೃತ್ವ ವಹಿಸಿದ್ದಾರೆ.
ಹೊಸಕೋಟೆ ಟೋಲ್ : ಕೋಲಾರ, ನರಸಾಪುರ ಸೇರಿದಂತೆ ಪೂರ್ವ ಭಾಗದಿಂದ ಬರುವ ರೈತರ ಟ್ರಾಕ್ಟರ್ ಗಳನ್ನು ತಡೆಯಲು ಹೊಸಕೋಟೆ ಟೋಲ್ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ನೂರಾರು ಪೊಲೀಸರು ಆಗಾಗಲೇ ಟೋಲ್ ಬಳಿ ಆಗಮಿಸಿದ್ದು, ರೈತರ ಟ್ರಾಕ್ಟರ್ ಗಳನ್ನು ತಡೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ನಾಲ್ಕೂ ದಿಕ್ಕಿನಲ್ಲಿ ಆಯಕಟ್ಟಿನ ಜಾಗಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ರೈತ ಮುಖಂಡ ಸೂರ್ಯ ನಾರಾಯಣ ಮತ್ತು ನಾಗರಾಜ್ ನೇತೃತ್ವದಲ್ಲಿ ರೈತರು ಬೆಂಗಳೂರಿಗೆ ಆಗಮಿಸಲಿದ್ದಾರೆ.