ಮೈಸೂರು: ಕಡಿಮೆ ಬೆಲೆಗೆ ತಂಬಾಕು ಮಾರಿ ಕೈ ಸುಟ್ಟುಕೊಂಡ ರೈತರು
ಮೈಸೂರು, ಮಾರ್ಚ್ 19: ಮೈಸೂರು ಸಮೀಪದ ಪಿರಿಯಾಪಟ್ಟಣ ಹಾಗೂ ಕುಶಾಲನಗರ ತಾಲ್ಲೂಕಿನಲ್ಲಿ ತಂಬಾಕು ಬೆಳೆದಿದ್ದ ರೈತರು, ಈ ಬಾರಿ ಕಡಿಮೆ ಬೆಲೆಗೆ ಮಾರಾಟ ಮಾಡಿ ನಷ್ಟ ಅನುಭವಿಸಿದ್ದಾರೆ. ಕೋವಿಡ್ ಕಾರಣದಿಂದ ಬಹುತೇಕ ರೈತರು ಆರಂಭದಲ್ಲೇ ತಂಬಾಕನ್ನು ಕೆಜಿಗೆ 130-150 ರೂ.ಗಳಿಗೆ ಮಾರಾಟ ಮಾಡಿ ಬಿಟ್ಟಿದ್ದಾರೆ.
ಇದೀಗ ತಂಬಾಕು ಬೆಲೆ ದಾಖಲೆಯ 270 ರೂ. ಏರಿಕೆಯಾಗಿದ್ದರೂ, ರೈತರ ಬಳಿ ತಂಬಾಕು ಇಲ್ಲ. ಎರಡನೇ ಹಂತದ ಕೊರೊನಾ ಕಾಣಿಸಿಕೊಂಡು ಮತ್ತೆ ಲಾಕ್ಡೌನ್ ಘೋಷಿಸಿದರೆ ಮಾರುಕಟ್ಟೆ ಸ್ಥಗಿತವಾಗುತ್ತದೆ ಎಂಬ ಭೀತಿಯಿಂದ ರೈತರು ಕೊಯ್ಲು ಆದ ಕೂಡಲೇ ತಮ್ಮಲ್ಲಿದ್ದ ತಂಬಾಕನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ.
ಬೀದಿಗೆ ಬಿತ್ತು ಅನ್ನದಾತನ ಬದುಕು, ನಾಶವಾದ ಬೆಳೆ ಮೇಲೆ ಉರುಳಾಡಿದ ರೈತ
ಇದೀಗ ತಂಬಾಕು ಬೆಲೆ ಏರಿಕೆಯಾಗಿದ್ದು, ಆದರೆ ತಮ್ಮ ಬಳಿ ತಂಬಾಕು ಇಲ್ಲ. ಕಂಪನಿಗಳು ಪರಿಸ್ಥಿತಿಯ ಲಾಭ ಪಡೆದು ತಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಕೋವಿಡ್ ಹಿನ್ನೆಲೆ 2021ನೇ ಸಾಲಿನಲ್ಲಿ ರೈತರು ತಂಬಾಕು ಬೆಳೆಯುವುದು ಬೇಡ. ಈ ಬಾರಿ ಬೆಳೆ ರಜೆ (ಕ್ರಾಪ್ ಹಾಲಿ ಡೇ) ಘೋಷಿಸುವಂತೆ ಸರ್ಕಾರಕ್ಕೆ ರೈತರು ಸೇರಿದಂತೆ ಎಂಎಲ್ಸಿ ಎಚ್.ವಿಶ್ವನಾಥ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮನವಿ ಮಾಡಿದ್ದರು. ಆದರೆ, ಈ ಭಾಗದ ಸಂಸದ ಪ್ರತಾಪ್ ಸಿಂಹ ಮಧ್ಯಪ್ರವೇಶಿಸಿ, "ರೈತರ ಹಿತಕಾಯಲು ನಾವು ಸಿದ್ಧರಿದ್ದೇವೆ. ತಂಬಾಕಿಗೆ ಉತ್ತಮ ಬೆಲೆ ಕೊಡಿಸುವ ಜವಾಬ್ದಾರಿ ನನ್ನದು. ಧೈರ್ಯವಾಗಿ ತಂಬಾಕು ಬೆಳೆಯಿರಿ'' ಎಂದು ರೈತರನ್ನು ಹುರಿದುಂಬಿಸಿದ್ದರು.
ಆದರೆ, ಅವರು ಮಾತು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಆರಂಭದಲ್ಲಿ ಕಡಿಮೆ ಬೆಲೆ ಇದ್ದರೂ ಸಂಸದರು ಧ್ವನಿ ಎತ್ತಲಿಲ್ಲ ಎಂಬುದು ಬೆಳೆಗಾರರು ದೂರಿಕೊಂಡಿದ್ದಾರೆ. ಪಿರಿಯಾಪಟ್ಟಣ ತಾಲೂಕಿನಲ್ಲಿ 27 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 53 ಸಾವಿರ ರೈತರು ತಂಬಾಕು ಬೆಳೆದಿದ್ದರು. 2020ರ ಸೆಪ್ಟೆಂಬರ್ನಲ್ಲಿ ತಂಬಾಕು ಹರಾಜು ಪ್ರಕ್ರಿಯೆ ಪ್ರಾರಂಭಗೊಂಡು, 14ಕ್ಕೂ ಹೆಚ್ಚು ಖರೀದಿದಾರ ಕಂಪನಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದವು.
ತಂಬಾಕಿಗೆ ಉತ್ತಮ ಬೆಲೆ ಒದಗಿಸುವಂತೆ ತಂಬಾಕು ಬೆಳೆಗಾರನ ಏಕಾಂಗಿ ಹೋರಾಟ
ಆರಂಭದಲ್ಲಿ ಪ್ರತಿ ಕೆಜಿಗೆ 135ರಿಂದ 150 ರೂ.ವರೆಗೆ ಮಾತ್ರ ಬೆಲೆ ಸಿಗುತ್ತಿತ್ತು. ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರು, ತಾವು ಬೆಳೆದ ತಂಬಾಕಿಗೆ ನಿಗದಿತ ಬೆಂಬಲ ಬೆಲೆ ಕೊಡಿಸುವಂತೆ ತಂಬಾಕು ಮಂಡಳಿ, ಜನಪ್ರತಿನಿಧಿಗಳು ಹಾಗೂ ಕಂಪನಿಗಳ ಮುಂದೆ ಅಂಗಲಾಚಿದರೂ ಯಾರೊಬ್ಬರೂ ಸ್ಪಂದಿಸಿರಲಿಲ್ಲ.
ಲಾಕ್ಡೌನ್ ಭೀತಿ ಹುಟ್ಟಿಸಿದ್ದರಿಂದ ತಂಬಾಕನ್ನು ಸಿಕ್ಕಿದ ಬೆಲೆಗೆ ಮಾರಾಟ ಮಾಡಲು ಮುಗಿದು ಬಿದ್ದರು. ಇದನ್ನೇ ಎದುರು ನೋಡುತ್ತಿದ್ದ ಕಂಪನಿಗಳು ಅತ್ಯಂತ ಕಡಿಮೆ ಬೆಲೆ ನೀಡಿ, ತಂಬಾಕನ್ನು ಅವಧಿ ಮುಗಿಯುವ ಮುನ್ನವೇ ಅಷ್ಟೋ ಇಷ್ಟೋ ನೀಡಿ ಶೇ.90 ರಷ್ಟು ತಂಬಾಕನ್ನು ಖರೀದಿ ಮಾಡಿದವು. ಆದರೆ ಇದೀಗ ದರ ಕೆಜಿಗೆ 270 ರೂ. ಇದೆ. ಆದರೆ ರೈತರ ಬಳಿ ತಂಬಾಕಿಲ್ಲದೆ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.