1.5 ವರ್ಷ ಕೃಷಿ ಕಾಯ್ದೆ ಅಮಾನತು: ಕೇಂದ್ರ ಸರ್ಕಾರದ ಪ್ರಸ್ತಾಪ ತಿರಸ್ಕರಿಸಿದ ರೈತರು
ನವದೆಹಲಿ, ಜನವರಿ 21: ಕೃಷಿ ಕಾಯ್ದೆಗಳ ಜಾರಿಯನ್ನು ಮುಂದಿನ ಹದಿನೆಂಟು ತಿಂಗಳವರೆಗೆ ಅಮಾನತುಗೊಳಿಸುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಪ್ರತಿಭಟನೆ ನಡೆಸುತ್ತಿರುವ ರೈತರು ತಿರಸ್ಕರಿಸಿದ್ದಾರೆ. ಮೂರೂ ವಿವಾದಾತ್ಮಕ ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸದ ಹೊರತು ಬೇರಾವ ಪ್ರಸ್ತಾವವನ್ನೂ ತಾವು ಒಪ್ಪುವುದಿಲ್ಲ ಎಂದು ಮತ್ತೊಮ್ಮೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ರೈತ ಒಕ್ಕೂಟಗಳ ಜತೆ ಬುಧವಾರ ನಡೆದ ಹತ್ತನೇ ಸುತ್ತಿನ ಮಾತುಕತೆಯಲ್ಲಿ ಸರ್ಕಾರ ಕೃಷಿ ಕಾಯ್ದೆಗಳನ್ನು ಒಂದೂವರೆ ವರ್ಷ ಅಮಾನತಿನಲ್ಲಿ ಇರಿಸುವ ಪ್ರಸ್ತಾಪ ಇರಿಸಿತ್ತು. ಕಾಯ್ದೆಗಳ ಸುತ್ತ ಚರ್ಚೆಗಳು ನಡೆದು, ಅದರ ಸಾಧಕ ಬಾದಕಗಳ ಬಗ್ಗೆ ಅಂತಿಮ ಅಭಿಪ್ರಾಯಕ್ಕೆ ಬರಲು ಅವಕಾಶ ನೀಡುವುದಾಗಿ ಸರ್ಕಾರ ತಿಳಿಸಿತ್ತು. ಇದಕ್ಕೆ ರೈತ ಒಕ್ಕೂಟಗಳು ತಕ್ಷಣದ ಪ್ರತಿಕ್ರಿಯೆ ನೀಡಿರಲಿಲ್ಲ.
ಕೃಷಿ ಕಾಯ್ದೆಗಳನ್ನು ಒಂದೂವರೆ ವರ್ಷ ತಡೆಹಿಡಿಯಲು ಕೇಂದ್ರ ಸರ್ಕಾರ ಸಿದ್ಧ
ಈ ಮಧ್ಯೆ ಸುಪ್ರೀಂಕೋರ್ಟ್ ನೇಮಿಸಿರುವ ಸಮಿತಿಯು ರೈತ ಸಂಘಟನೆಗಳಿಂದ ಅಭಿಪ್ರಾಯ ಸಂಗ್ರಹಿಸುವ ಕಾರ್ಯ ಮುಂದುವರಿಸಲು ನಿರ್ಧರಿಸಿದೆ. ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ರೈತರು ಪರಿಗಣಿಸುತ್ತಾರೆಯೋ ಅಥವಾ ಇಲ್ಲವೋ ಎನ್ನುವುದು ನಮಗೆ ಸಂಬಂಧಿಸಿದ್ದಲ್ಲ. ಸುಪ್ರೀಂಕೋರ್ಟ್ ನಮಗೆ ನೀಡಿರುವ ನಿರ್ದೇಶನದಂತೆ ಮುಂದಿನ ಆದೇಶದವರೆಗೂ ನಾವು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಕೃಷಿ ಆರ್ಥಿಕ ತಜ್ಞ ಹಾಗೂ ಸಮಿತಿ ಸದಸ್ಯ ಪ್ರಮೋದ್ ಕುಮಾರ್ ಜೋಶಿ ತಿಳಿಸಿದ್ದಾರೆ.
ಈ ಬಿಕ್ಕಟ್ಟು ಬಗೆಹರಿಸಲು ಸುಪ್ರೀಂಕೋರ್ಟ್ ನೇಮಿಸಿರುವ ನಾಲ್ವರು ಸದಸ್ಯರ ಸಮಿತಿಯು ಎರಡೂ ಕಡೆಯ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದು, ಎರಡು ತಿಂಗಳಲ್ಲಿ ತನ್ನ ವರದಿ ಸಲ್ಲಿಸುವ ಸಾಧ್ಯತೆ ಇದೆ.