ಜನವರಿ 31ಕ್ಕೆ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಲಿದ್ದಾರೆ ರೈತರು
ಬೆಂಗಳೂರು, ಜನವರಿ 29: 'ರೈತ ಸಾಲಗಾರನಲ್ಲ, ಸಾಲ ನನ್ನದಲ್ಲ' ಎಂಬ ಘೋಷ ವಾಕ್ಯದೊಂದಿಗೆ ರೈತರು ಜನವರಿ 31ರಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸೇರಲಿದ್ದಾರೆ.
ರೈತ ಪರ ನಿಲುವುಗಳನ್ನು ತಳೆಯುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ರೈತರು ಒತ್ತಾಯಿಸಲಿದ್ದಾರೆ. ಬಡ ರೈತರ ಕೂಗು ಕ್ಷೀಣಿಸಬಾರದೆಂದು, ಸರ್ಕಾರಗಳ ಮರಗಟ್ಟಿದ ಕಿವಿಗಳಿಗೆ ಕ್ಷೀಣ ಧ್ವನಿಗಳ ಕೇಳವೆಂಬ ಅರಿವಿರುವ ಕಾರಣದಿಂದ ಗಟ್ಟಿ ಧ್ವನಿ ಹೊರಡಿಸಲೆಂದೇ ಸಾವಿರಾರು ಸಂಖ್ಯೆಯಲ್ಲಿ ರೈತರು ಅಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಒಂದಾಗಲಿದ್ದಾರೆ.
'ರೈತರ ಸಾಲ ಮನ್ನಾ' ಎಂಬ ಕನ್ನಡಿ ಒಳಗಿನ ಗಂಟನ್ನು ತೋರಿಸಿ ಅಧಿಕಾರ ಹಿಡಿಯುವ ರಾಜಕೀಯ ಪಕ್ಷಗಳ ವಿರುದ್ಧ ಅಂದು ರೈತರು ಆಕ್ರೋಶ ವ್ಯಕ್ತಪಡಿಸಲಿದ್ದಾರೆ. ದೇಶಕ್ಕೆ ಸೇವೆ ಒದಗಿಸುವ 'ರಾಜ್ಯ ಸುಭಿಕ್ಷವಾಗಿ ನಡೆಯಲು ಇಂಧನ ಒದಗಿಸುವ ರೈತ ಸಾಲಗಾರನಲ್ಲ, ರಾಜ್ಯದ ಜನರನ್ನು ಸುಭಿಕ್ಷವಾಗಿಡಲು ನೆರವಾಗಿದ್ದಕ್ಕೆ ಸರ್ಕಾರವೇ ರೈತನಿಗೆ ಹಣ ನೀಡಬೇಕು, 'ರೈತ ಸಾಲಗಾರನಲ್ಲ, ಸರ್ಕಾರವೇ ಬಾಕೀದಾರ' ಎಂಬ ಘೋಷ ವಾಕ್ಯ ಅಂದು ಸಮಾವೇಶಕ್ಕೆ ಬಂದ ಪ್ರತಿಯೊಬ್ಬ ರೈತನ ಮನದ ಮಾತಾಗಲಿದೆ.
ಸಹಸ್ರ ರೈತರ ನೋವನ್ನು ತಮ್ಮ ಮಾತಿನ ಮೂಲಕ ವ್ಯಕ್ತಪಡಿಸಲು ಅಂದು ಹಿರಿಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಪ್ರಕಾಶ್ ರೈ, ರಾಜು ಶೆಟ್ಟಿ, ನಟರಾಜ್ ಹುಳಿಯಾರ್, ದೇವೇಂದ್ರ ವರ್ಮ, ಹರಿಶ್ ಚೌಹಾಣ್ ಮುಂತಾದ ರೈತ ಪರ ಮನಸ್ಸುಗಳು ವೇದಿಕೆ ಮೇಲಿರಲಿವೆ.
ಸಮಾವೇಶವನ್ನು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಉದ್ಘಾಟಿಸಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಡಿಹಳ್ಳಿ ಚಂದ್ರಶೇಖರ್ ವಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಹಸಿರು ಸೇನಾನಿ ಪುಸ್ತಕ ಬಿಡುಗಡೆ ಆಗಲಿದೆ. ಕಾರ್ಯಕ್ರಮ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜನವರಿ 31ರಂದು ಮಧ್ಯಾಹ್ನ 12ಕ್ಕೆ ಪ್ರಾರಂಭವಾಗಲಿದೆ.