ಭತ್ತ ಖರೀದಿ ಕೇಂದ್ರ ವಿಳಂಬ:ತಿ.ನರಸೀಪುರದಲ್ಲಿ ಬೀಗ ಜಡಿದು ಪ್ರತಿಭಟಿಸಿದ ರೈತರು
ಮೈಸೂರು, ಜನವರಿ 17: ಭತ್ತ ಖರೀದಿ ಕೇಂದ್ರ ಆರಂಭಿಸದೆ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೈತರು ತಿ. ನರಸೀಪುರ ಪಟ್ಟಣದಲ್ಲಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.
ಉಗ್ರಾಣ ನಿಗಮದ ಕಚೇರಿಗೆ ಆಗಮಿಸಿದ ರೈತರು, ಭತ್ತ ಕಟಾವು ಮುಗಿದಿದ್ದರೂ ಸರ್ಕಾರ ಈವರೆಗೆ ಯಾವುದೇ ಕೇಂದ್ರ ತೆರೆಯದೆ ರೈತರನ್ನು ಸಂಕಷ್ಟಕ್ಕೀಡು ಮಾಡಿದೆ ಎಂದು ಆರೋಪಿಸಿ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಾಲಮನ್ನಾ ನೋಂದಣಿಗೆ ಮೈಸೂರು ಜಿಲ್ಲೆಯಲ್ಲಿ ಮುಂದಡಿಯಿಟ್ಟ ಅನ್ನದಾತರು
ಕೃಷಿ ಅಧಿಕಾರಿ, ಕಂಪ್ಯೂಟರ್ ಆಪರೇಟರ್, ಇಬ್ಬರು ಸಹಾಯಕರು ಕಚೇರಿಯ ಒಳಗಿದ್ದ ವೇಳೆ ಪ್ರತಿಭಟನಾಕಾರರು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಆರಂಭಿಸಿದರು.
ಈ ವೇಳೆ ಮಾತನಾಡಿದ ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಜನವರಿ ತಿಂಗಳಲ್ಲಿ ಕೇಂದ್ರ ಪ್ರಾರಂಭಿಸುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ 800 ಮಂದಿ ರೈತರು ನೋಂದಣಿ ಮಾಡಿಸಿ ಮಾರಾಟ ಮಾಡಲು ಕಾದು ಕುಳಿತಿದ್ದಾರೆ. ಜ.17 ಕಳೆದರೂ ಈವರೆಗೆ ಖರೀದಿ ಕೇಂದ್ರ ಪ್ರಾರಂಭವೇ ಆಗಿಲ್ಲ ಎಂದು ದೂರಿದರು.
ಈ ಬಗ್ಗೆ ಕೇಳಿದರೆ ಅಧಿಕಾರಿಗಳು ಮಂಡ್ಯಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಎನ್ನುತ್ತಾರೆ. ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ಬಾಡಿಗೆ ಕೊಡುವವರಾರು? ಅಲ್ಲಿ ಹೋದರೆ ರೈತರಿಗೆ ಭತ್ತ ಸರಿಯಲ್ಲ. ಇದು ಸರಿಯಲ್ಲ ಎಂಬ ನೆಪವೊಡ್ಡಿ ವಾಪಸ್ ಕಳುಹಿಸುತ್ತಾರೆ. ಈಗಾಗಲೇ ರೈತರು ಬಹಳ ನೊಂದಿದ್ದಾರೆ. ರೈತರ ಈ ದುಸ್ಥಿತಿಗೆ ಸರ್ಕಾರ, ಅಧಿಕಾರಿಗಳೇ ನೇರ ಹೊಣೆ ಎಂದು ಆರೋಪಿಸಿದರು.
ಭೂ ತಾಯಿ ಒಡಲಿಗೆ ವಿಷ ತುಂಬಲ್ಲ ಎಂದು ಆಣೆ ಮಾಡಿದಂತೆ ಬದುಕುತ್ತಿರುವ ಯುವಕರಿವರು
ಯುವ ಮುಖಂಡ ಕೆಬ್ಬೆಹುಂಡಿ ಶಿವಕುಮಾರ್ ಮಾತನಾಡಿ, ಮಣ್ಣಿನ ಮಕ್ಕಳು ಎಂದು ಹೇಳುವ ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿಯವರಿಗೆ ರೈತರ ಬವಣೆ ಕಾಣುತ್ತಿಲ್ಲವೇ? ಸರ್ಕಾರ ಮೊದಲು ಖರೀದಿ ಮಾಡಲಿ, ಆಮೇಲೆ ಎಲ್ಲಿಗಾದರೂ ಮಾರಲಿ. ಮೊದಲು ಭತ್ತ ಖರೀದಿ ಮಾಡಲು ಖರೀದಿ ಕೇಂದ್ರ ಪ್ರಾರಂಭವಾಗಬೇಕು. ಇಲ್ಲವಾದಲ್ಲಿ ರೈತರೊಡಗೂಡಿ ಉಗ್ರ ಹೋರಾಟ ಪ್ರಾರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.