ಕರ್ನಾಟಕದಲ್ಲಿ ಸತತ ಮೂರು ದಿನ ರಾಕೇಶ್ ಟಿಕಾಯತ್ ಭಾಷಣ
ನವದೆಹಲಿ, ಫೆಬ್ರವರಿ 27: ಕೆಲವು ದಿನಗಳಿಂದ ತೀವ್ರಮಟ್ಟದಲ್ಲಿದ್ದ ರೈತರ ಪ್ರತಿಭಟನೆಯ ಕಾವು ನಿಧಾನವಾಗಿ ತಣ್ಣಗಾಗುತ್ತಿದೆ. ಆದರೆ ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟ ನಿಂತಿಲ್ಲ. ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಮತ್ತಷ್ಟು ತೀವ್ರವಾಗಿ ಹಾಗೂ ದೇಶದಾದ್ಯಂತ ವಿಸ್ತರಿಸುವುದಾಗಿ ರೈತ ಒಕ್ಕೂಟಗಳು ಎಚ್ಚರಿಕೆ ನೀಡಿವೆ. ರೈತ ಸಂಘಟನೆಗಳ ಮುಖಂಡರು ಈಗ ವಿವಿಧ ರಾಜ್ಯಗಳಲ್ಲಿ ಮಹಾಪಂಚಾಯತ್ ಸಭೆಗಳನ್ನು ನಡೆಸುತ್ತಿದ್ದು, ರೈತರನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಮೂರು ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆ ಶನಿವಾರ 92ನೇ ದಿನಕ್ಕೆ ಕಾಲಿಟ್ಟಿದೆ. ಇದುವರೆಗಿನ ಯಾವ ಮಾತುಕತೆಗಳೂ ಫಲಪ್ರದವಾಗದ ಹಿನ್ನೆಲೆಯಲ್ಲಿ ಪ್ರತಿಭಟನೆ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ.
ರೈತರ ಪ್ರತಿಭಟನೆ: ಭಾರತದ ವಿರುದ್ಧ ವಿಶ್ವಸಂಸ್ಥೆ ಮಾನವಹಕ್ಕು ಕಮಿಷನರ್ ಟೀಕೆ
ಪ್ರತಿಭಟನೆಯ ನೇತೃತ್ವ ವಹಿಸಿರುವ ಭಾರತೀಯ ಕಿಸಾನ್ ಒಕ್ಕೂಟದ ವಕ್ತಾರ ರಾಕೇಶ ಟಿಕಾಯತ್ ಅವರು ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ರೈತರ ಸಭೆಗಳನ್ನು ನಡೆಸುತ್ತಿದ್ದಾರೆ. ಮುಂದಿನ ತಿಂಗಳು ಅವರು ದಕ್ಷಿಣ ಭಾರತಕ್ಕೂ ಕಾಲಿಡಲಿದ್ದು, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಸಹ ಮಹಾಪಂಚಾಯತ್ ಸಭೆಗಳನ್ನು ನಡೆಸಲಿದ್ದಾರೆ.
प्रस्तावित किसान महापंचायत में कार्यक्रम#FarmersProstests @AHindinews @PTI_News @aajtak @ndtvindia @Kisanektamorcha @ASHAKisanSwaraj @HansrajMeena @BRajewal pic.twitter.com/8vkJNIim7o
— Rakesh Tikait (@RakeshTikaitBKU) February 27, 2021
ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳಲ್ಲಿ ಅವರು ನಿರಂತರವಾಗಿ ಸಭೆಗಳನ್ನು ನಡೆಸಲಿದ್ದಾರೆ. ಮಾರ್ಚ್ 6ರಂದು ತೆಲಂಗಾಣದಲ್ಲಿ ಭಾಷಣ ಮಾಡಲಿದ್ದಾರೆ. ರೈತರ ಪ್ರತಿಭಟನೆಗೆ ಕರ್ನಾಟಕದಿಂದಲೂ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಹೀಗಾಗಿ ಅವರು ಮಾರ್ಚ್ 20, 21 ಮತ್ತು 22ರಂದು ಸತತ ಮೂರು ದಿನ ಕರ್ನಾಟಕದಲ್ಲಿಯೂ ರೈತರನ್ನು ಒಗ್ಗೂಡಿಸಿ ಚಳವಳಿ ತೀವ್ರಗೊಳಿಸುವ ಯೋಜನೆ ಹಮ್ಮಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ವಿವಿಧ ರಾಜ್ಯಗಳಲ್ಲಿನ ಸುಮಾರು 15 ಸ್ಥಳಗಳಲ್ಲಿ ಬೃಹತ್ ಸಭೆಗಳನ್ನು ನಡೆಸಲಿದ್ದಾರೆ.
ಜನಸಾಮಾನ್ಯರು, ವಿವಿಧ ವಲಯಗಳಲ್ಲಿನ ಮುಖಂಡರು ಕೂಡ ರೈತರ ಪ್ರತಿಭಟನೆಗೆ ಕೈಜೋಡಿಸುವಂತೆ ಕಿಸಾನ್ ಏಕ್ತಾ ಮೋರ್ಚಾ ಮನವಿ ಮಾಡಿದೆ. ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಚಳವಳಿಯನ್ನು ಬಲಪಡಿಸುವಂತೆ ಅದು ಕೋರಿದೆ.