ರೈತರ ಮೇಲೆ ಮಧ್ಯರಾತ್ರಿಯೂ ಜಲಫಿರಂಗಿ ಬಳಸಿದ ಪೊಲೀಸರು
ಸೋನಿಪತ್, ನವೆಂಬರ್ 27: ಪ್ರತಿಭಟನಾ ನಿರತ ರೈತರು ದೆಹಲಿ ಪ್ರವೇಶಿಸದಂತೆ ತಡೆಯಲು ವಿವಿಧ ರೀತಿಯ ಕ್ರಮಗಳನ್ನು ಕೈಗೊಂಡಿರುವ ಪೊಲೀಸರು, ರೈತರನ್ನು ಹಿಮ್ಮೆಟ್ಟಿಸಲು ಅಶ್ರುವಾಯು ಮತ್ತು ಜಲಫಿರಂಗಿ ಬಳಸುತ್ತಿದ್ದಾರೆ. ಆದರೆ ರೈತರನ್ನು ಬೆದರಿಸಲು ಚಳಿಯ ವಾತಾವರಣದಲ್ಲಿ ರಾತ್ರಿ ಜಲಫಿರಂಗಿ ಬಳಸುವ ಮೂಲಕ ಅಮಾನವೀಯ ಧೋರಣೆ ಪ್ರದರ್ಶಿಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.
ಹರಿಯಾಣದ ಸೋನಿಪತ್ನಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ವಿಪರೀತ ಚಳಿಯ ನಡುವೆಯೂ, ರೈತ ವಿರೋಧಿ ಕಾಯ್ದೆಗಳ ವಿರುದ್ಧ ದೆಹಲಿಗೆ ಪ್ರತಿಭಟನಾ ಮೆರವಣಿಗೆ ತೆರಳುತ್ತಿದ್ದ ರೈತರ ಸಣ್ಣ ಗುಂಪನ್ನು ಚೆದುರಿಸಲು ಪೊಲೀಸರು ಜಲ ಫಿರಂಗಿ ಬಳಸಿದ್ದಾರೆ.
ರೈತರ ಪ್ರತಿಭಟನೆ: ಕೇಂದ್ರ ಸರ್ಕಾರದ ವಿರುದ್ಧ ದೇವೇಗೌಡ ಕಿಡಿ
ಗುರುವಾರ ಸಂಜೆಯಿಂದ ಸುಮಾರು 200 ರೈತರ ಗುಂಪು ರಸ್ತೆಯ ಮಧ್ಯೆ ಘೋಷಣೆಗಳನ್ನು ಕೂಗುತ್ತಾ ಕುಳಿತುಕೊಂಡಿತ್ತು. ರಸ್ತೆಗೆ ಅಡ್ಡಲಾಗಿ ಹಾಕಿದ್ದ ಬ್ಯಾರಿಕೇಡ್ ಹಿಂದೆ ಪೊಲೀಸರ ಸಣ್ಣ ತಂಡ ಕಾದು ಕುಳಿತಿತ್ತು. ರಾತ್ರಿ 9 ಗಂಟೆ ಸುಮಾರಿಗೆ ಇಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿದೆ. ಕಗ್ಗತ್ತಲಿನ ನಡುವೆಯೂ ರೈತರು ತಮ್ಮ ಮೆರವಣಿಗೆಯನ್ನು ಸ್ಥಗಿತಗೊಳಿಸಲು ಮುಂದಾಗಿರಲಿಲ್ಲ.
ಬ್ಯಾರಿಕೇಡ್ ತಡೆಯನ್ನು ದಾಟದೆ ಅವರು ಮುಮದೆ ಹೋಗುವುದು ಸಾಧ್ಯವಿರಲಿಲ್ಲ. ಪೊಲೀಸರು ರಸ್ತೆಗೆ ಅಡ್ಡಲಾಗಿ ದೊಡ್ಡ ಕಾಲುವೆಯನ್ನು ತೋಡಿದ್ದು, ರೈತರು ಅದನ್ನು ದಾಟಿ ಬ್ಯಾರಿಕೇಡ್ನತ್ತ ಹೋಗಬೇಕಿತ್ತು. ಈ ಕಾಲುವೆಯನ್ನು ದಾಟಲು ಪ್ರಯತ್ನಿಸಿದ ರೈತರ ಮೇಲೆ ಮಧ್ಯರಾತ್ರಿಯ ವೇಳೆ ಪೊಲೀಸರು ಜಲಫಿರಂಗಿ ಹಾರಿಸಿದ್ದಾರೆ.