ಮಳೆಯಲ್ಲೇ "ಭಾರತ್ ಬಂದ್' ಬೆಂಬಲಿಸಿ ರೈತ ಸಂಘಟನೆಗಳಿಂದ ಪ್ರತಿಭಟನೆ
ರಾಮನಗರ, ಡಿಸೆಂಬರ್ 8: ಕೇಂದ್ರ ಸರ್ಕಾರದ ರೈತ ವಿರೋಧಿ ನಡೆಯನ್ನು ಖಂಡಿಸಿ, ರೈತರು ಕರೆ ನೀಡಿರುವ "ಭಾರತ್ ಬಂದ್' ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕನ್ನಡ ಪರ ಸಂಘಟನೆಗಳು ಮಳೆಯಲ್ಲೇ ರಸ್ತೆಗಿಳಿದು ಪ್ರತಿಭಟನೆ ನಡೆಸಿದವು.
ರಾಮನಗರದ ಐಜೂರು ವೃತ್ತದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಿದ ರೈತ ಸಂಘ ಮತ್ತು ಕನ್ನಡ ಪರ ಸಂಘಟನೆಗಳು, ಮಳೆ ಬಂದರೂ ಲೆಕ್ಕಿಸದೇ ರಸ್ತೆಯಲ್ಲಿ ಕುಳಿತು "ಭಾರತ್ ಬಂದ್' ನ್ನು ಬೆಂಬಲಿಸಿದರು.
ಭಾರತ ಬಂದ್: ಮೈಸೂರಿನಲ್ಲಿ ನೈತಿಕ ಬೆಂಬಲವೇ ಜಾಸ್ತಿ
ಇನ್ನು ಪ್ರತಿಭಟನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಕೇಂದ್ರ ತಂದಿರುವ ರೈತ ವಿರೋಧಿ ಕಾನೂನು ವಾಪಸ್ಸು ಪಡೆಯುವವರೆಗೆ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ. ಕಾಯ್ದೆ ವಾಪಸ್ಸು ಪಡೆಯಲು ರೈತರು ಎಂತಹ ತ್ಯಾಗಕ್ಕೂ ಸಿದ್ಧ ಎಂದು ರೈತ ಸಂಘಟನೆಗಳು ಘೋಷಿಸಿದವು.
ಇದೇ ವೇಳೆ ಸಾಲ ಬಾಧೆಯಿಂದ ಆತ್ಮಹತ್ಯೆಗೆ ಶರಣಾದ ರೈತರು ಹೇಡಿಗಳು ಎಂದು ಹೇಳಿಕೆ ನೀಡಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್ ವಿರುದ್ಧ ಹರಿಹಾಯ್ದ ರೈತರು, ಮೊದಲು ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ, ರೈತರನ್ನು ಹೇಡಿ ಎನ್ನುವ ಮಂತ್ರಿ ನಿಜವಾದ ಹೇಡಿ ಎಂದು ಬಿ.ಸಿ.ಪಾಟೀಲ್ ಹೇಳಿಕೆಯನ್ನು ಖಂಡಿಸಿದರು.
"ಭಾರತ್ ಬಂದ್'ಗೆ ರಾಮನಗರ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಂದಿನಂತೆ ಖಾಸಗಿ ಬಸ್, ಸರ್ಕಾರಿ ಬಸ್, ಆಟೋ ಸೇವೆಗಳು ಸೇರಿದಂತೆ ಜನ ಜೀವನ ಮಾಮೂಲಿನಂತೆ ಇವೆ. ಅಂಗಡಿ ಮುಂಗಟ್ಟು ತೆರದಿದ್ದವು. ಯಾವುದೇ ಅಹಿತಕರ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಹೆಚ್ಚಿಸಿ ಬಂದ್ ವಿಫಲಗೊಳಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಯಿತು.