ಕೃಷಿ ಕಾಯ್ದೆಗೆ ವಿರೋಧ: ಬಜೆಟ್ ದಿನದಂದು ರೈತರಿಂದ ಕಾಲ್ನಡಿಗೆ ಮೆರವಣಿಗೆ
ನವದೆಹಲಿ, ಜನವರಿ 26: ಗಣರಾಜ್ಯೋತ್ಸವ ದಿನದಂದು ಬೃಹತ್ ಟ್ರ್ಯಾಕ್ಟರ್ ಮೆರವಣಿಗೆ ನಡೆಸುತ್ತಿರುವ ರೈತರು, ಕೇಂದ್ರ ಸರ್ಕಾರ ಬಜೆಟ್ ಮಂಡಿಸುವ ದಿನವಾದ ಫೆಬ್ರವರಿ 1ರಂದು ಎರಡನೆಯ ಮೆರವಣಿಗೆ ನಡೆಸಲಿದ್ದಾರೆ. ಆಯವ್ಯಯ ಮಂಡನೆ ದಿನದಂದು ಕಾಲ್ನಡಿಗೆಯ ಜಾಥಾ ನಡೆಸುವುದಾಗಿ ರೈತ ಮುಖಂಡರು ಸೋಮವಾರ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ರೈತರೊಂದಿಗೆ ನಡೆಸುತ್ತಿರುವ ಸಂಧಾನ ಸಭೆಗಳ ಭಾಗವಾಗಿರುವ ಕೀರ್ತಿ ಕಿಸಾನ್ ಒಕ್ಕೂಟದ ಮುಖಂಡ ಡಾ. ದರ್ಶನ್ ಪಾಲ್, ಫೆಬ್ರವರಿ ಒಂದರಂದು ರೈತರು, ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯಾಗಿ ಸಂಸತ್ತಿನ ಕಡೆಗೆ ಕಾಲ್ನಡಿಗೆಯಲ್ಲಿ ಮೆರವಣಿಗೆ ಸಾಗಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೃಷಿ ಕಾಯ್ದೆಗಳ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾತು
ಈ ಕಾಲ್ನಡಿಗೆ ಜಾಥಾದ ಬಗ್ಗೆ ಇನ್ನು ಒಂದೆರಡು ದಿನಗಳಲ್ಲಿ ಸಂಪೂರ್ಣ ವಿವರ ನೀಡಲಾಗುವುದು. ಆದರೆ ಮೆರವಣಿಗೆ ಶಾಂತಿಯುತವಾಗಿರಲಿದೆ. ಗಣರಾಜ್ಯೋತ್ಸವ ಆಚರಣೆಯಲ್ಲಿ ಸಾಮಾನ್ಯ ಜನರು ಭಾಗವಹಿಸುವುದರಿಂದ ಮಂಗಳವಾರ ನಡೆಯಲಿರುವ ಟ್ರ್ಯಾಕ್ಟರ್ ಮೆರವಣಿಗೆ ವಿಶಿಷ್ಟವಾಗಿರಲಿದೆ ಎಂದು ಹೇಳಿದರು.
'ಮೆರವಣಿಗೆ ಬಳಿಕ ರೈತರು ತಮ್ಮ ಗ್ರಾಮಗಳಿಗೆ ಮರಳಿ ಹೋಗದಂತೆ ಕೋರಲಾಗಿದೆ. ಬದಲಾಗಿ ಗಡಿಗಳಲ್ಲಿಯೇ ಉಳಿದುಕೊಂಡು ಪ್ರತಿಭಟನೆ ಮುಂದುವರಿಸುವಂತೆ ಸೂಚನೆ ನೀಡಲಾಗಿದೆ' ಎಂದು ಭಾರತೀಯ ಕಿಸಾನ್ ಒಕ್ಕೂಟದ ಅಧ್ಯಕ್ಷ ಬಲಬೀರ್ ಸಿಂಗ್ ರಾಜೇವಾಲ್ ತಿಳಿಸಿದರು.
ದೆಹಲಿ ಪೊಲೀಸರು ಸೂಚಿಸಿರುವ ನಿರ್ದಿಷ್ಟ ಮಾರ್ಗಗಳಲ್ಲಿಯೇ ಟ್ರ್ಯಾಕ್ಟರ್ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಗೆ ವಾಹನಗಳ ಮಿತಿ ಅಥವಾ ಸಮಯ ಮಿತಿ ವಿಧಿಸಿಲ್ಲ. ನಿರ್ದಿಷ್ಟ ಮಾರ್ಗಗಳಲ್ಲಿಯೇ ಪಥಸಂಚಲನ ವಾಪಸ್ ಬರಲಿದೆ ಎಂದು ದರ್ಶನ್ ಪಾಲ್ ಹೇಳಿದರು.