ಪ್ರತಿಭಟನೆಗೆ ಬಂದ ರೈತರು ಪಿಜ್ಜಾ, ಬಿರಿಯಾನಿ ತಿನ್ನುವಂತಿಲ್ಲವೇ?
ನವದೆಹಲಿ, ಡಿಸೆಂಬರ್ 12: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳ ರೈತರು ದೆಹಲಿಯಲ್ಲಿ ಸೇರಿ ಅನಿರ್ದಿಷ್ಟಾವಧಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಹೊಸ ಕೃಷಿ ಕಾಯ್ದೆಗಳು ಎಪಿಎಂಸಿ ವ್ಯವಸ್ಥೆಯನ್ನೇ ನಾಶಪಡಿಸಬಹುದು. ತಮಗೆ ಕನಿಷ್ಠ ಬೆಂಬಲ ಬೆಲೆ ಮುಂದಿನ ದಿನಗಳಲ್ಲಿ ಸಿಗದೆ ಹೋಗಬಹುದು ಮತ್ತು ಖಾಸಗಿ ಕಂಪೆನಿಗಳ ಅಡಿಯಾಳುಗಳಾಗುವ ಸ್ಥಿತಿ ಬರಬಹುದು ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಪ್ರತಿಭಟನೆಗಳನ್ನು ಟೀಕಿಸಲು ಅನೇಕ ಆಯಾಮಗಳು ಹುಟ್ಟಿಕೊಳ್ಳುತ್ತಿವೆ.
ಜತೆಗೆ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಸಹಾಯ ಮಾಡಲು ವಿವಿಧ ರಾಜಕೀಯ ಪಕ್ಷಗಳು, ಸಾಮಾಜಿಕ ಸಂಘಟನೆಗಳು ಮತ್ತು ವ್ಯಕ್ತಿಗಳು ಮುಂದಾಗುತ್ತಿದ್ದಾರೆ. ಮುಖ್ಯವಾಗಿ ರೈತರಿಗೆ ತಾಜಾ ಆಹಾರ, ಚಳಿಯಿಂದ ರಕ್ಷಿಸಿಕೊಳ್ಳಲು ಹಾಸಿಗೆ ಮತ್ತು ಬೆಡ್ಶೀಟ್ಗಳು ಸೇರಿದಂತೆ ಮೂಲಭೂತ ಅಗತ್ಯ ಸೌಲಭ್ಯಗಳನ್ನು ಪೂರೈಸುತ್ತಿದ್ದಾರೆ.
ಮತ್ತಷ್ಟು ಟ್ರೆಂಡ್ ಆಗುತ್ತಿದೆ ಜಿಯೋ ಸಿಮ್ ಬಹಿಷ್ಕಾರ ಅಭಿಯಾನ
ದೆಹಲಿಗೆ ಬಂದ ಪ್ರತಿಭಟನಾಕಾರರು ತಮ್ಮ ಬಳಿ ಎರಡು ಮೂರು ತಿಂಗಳಿಗೆ ಸಾಕಾಗುವಷ್ಟು ಆಹಾರವಿದೆ ಎಂದಿದ್ದರು. ಆದರೆ ಪ್ರತಿಭಟನೆಯಲ್ಲಿ ಭಾಗವಹಿಸಿರುವ ಅನೇಕ ರೈತರಲ್ಲಿ ಸಾಕಷ್ಟು ಆಹಾರ ಮತ್ತಿತರ ಸೌಲಭ್ಯಗಳಿಲ್ಲ. ಅವರಿಗಾಗಿ ಪ್ರತಿಭಟನಾ ಸ್ಥಳದಲ್ಲಿ ಗಂಟೆಗೆ 1500-2000 ರೋಟಿಗಳನ್ನು ಮಾಡುವ ಯಂತ್ರಗಳನ್ನು ಅಳವಡಿಸಲಾಗಿದೆ. ಮುಂದೆ ಓದಿ.
"ಇಂದಿರಾ ಗಾಂಧಿ ಮಾಡಿದ ತಪ್ಪನ್ನೇ ಈಗ ಮೋದಿ ಮಾಡುತ್ತಿದ್ದಾರೆ"
ರೈತರಿಗೆ ಅನೇಕ ಸೌಲಭ್ಯಗಳು
ಅಂತಾರಾಷ್ಟ್ರೀಯ ಎನ್ಜಿಒ ಖಾಸ್ಲಾ ಏಡ್ ಗಡಿ ಭಾಗಗಳಲ್ಲಿ ದೂರದ ಊರುಗಳಿಂದ ನಡೆದುಕೊಂಡು ಬಂದ ರೈತರಿಗಾಗಿ ಪಾದ ಮಸಾಜ್ ಕೇಂದ್ರಗಳನ್ನು ಸ್ಥಾಪಿಸಿದೆ. ಹಿರಿಯ ರೈತರ ಆರೋಗ್ಯ ಕಾಪಾಡಲು ಟೆಂಟ್ ಒಳಗೆ 25 ಯಂತ್ರಗಳನ್ನು ಇರಿಸಲಾಗಿದೆ. ಗಡಿ ಭಾಗಗಳಲ್ಲಿ ಟೀ, ತಿನಿಸುಗಳ ಜತೆಗೆ ಅನೇಕ ಸಂಘಟನೆಗಳು ಬಿರಿಯಾನಿ ಪೂರೈಸಿವೆ. ಶನಿವಾರ ಭಾರತೀಯ ಕಿಸಾನ್ ಕಾರ್ಯಕರ್ತರು ಪ್ರತಿಭಟನಾಕಾರರಿಗೆ ಪಿಜ್ಜಾ ಒದಗಿಸಿದ್ದಾರೆ.
|
ಇದೇನು ಪಿಜ್ಜಾ ಪಾರ್ಟಿಯೇ?
ರೈತರು ಬಿರಿಯಾನಿ ಮತ್ತು ಪಿಜ್ಜಾ ತಿನ್ನುವ ಫೋಟೊ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲ ವೈರಲ್ ಆಗಿದ್ದು, ಟೀಕಾಕಾರರಿಗೆ ಆಹಾರವಾಗಿ ಪರಿಣಮಿಸಿದೆ. ಇದೇನು ಪ್ರತಿಭಟನೆಯೇ ಅಥವಾ ಪಿಜ್ಜಾ ಪಾರ್ಟಿಯೇ ಎಂದು ಅನೇಕರು ಪ್ರಶ್ನಿಸಿದ್ದಾರೆ. ರೈತರು ಪ್ರತಿಭಟನೆಗೆ ಬಂದಿಲ್ಲ, ಪಿಕ್ನಿಕ್ ಬಂದಿದ್ದಾರೆ. ಫೂಟ್ ಮಸಾಜ್, ಪಿಜ್ಜಾ ಎಲ್ಲವೂ ಸಿಗುತ್ತಿದೆ ಎಂದು ಟೀಕಿಸಿದ್ದಾರೆ.
ಪಿಜ್ಜಾ, ಬಿರಿಯಾನಿ ತಿನ್ನಬಾರದೇ?
ಹಾಗಾದರೆ ರೈತರು ಪಿಜ್ಜಾ, ಬಿರಿಯಾನಿಗಳನ್ನು ತಿನ್ನಬಾರದೇ? ಪ್ರತಿಭಟನೆಗೆ ಬಂದವರಿಗೆ ಜನರು ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಅವರೇನು ಪಿಜ್ಜಾ ಹಟ್ಗಳಿಗೆ ಹೋಗಿ ಪಿಜ್ಜಾ ಖರೀದಿಸಿ ತಿನ್ನುತ್ತಿಲ್ಲ. ಪ್ರತಿಭಟನೆಗೆ ಬಂದವರು ಹೊಟ್ಟೆ ತುಂಬಿಸಿಕೊಳ್ಳುವುದನ್ನೂ ತಪ್ಪು ಎನ್ನುವ ಅಮಾನವೀಯತೆ ಪ್ರದರ್ಶಿಸುತ್ತಿದ್ದಾರೆ ಎಂಬ ಪ್ರತಿ ಆರೋಪಗಳು ಕೇಳಿಬಂದಿವೆ.
ರೈತರ ಬಳಿ ಕಾರ್ ಇರಬಾರದು!
ಕೆಲವು ದಿನಗಳ ಹಿಂದೆ ರೈತರೊಬ್ಬರು ಕಾರ್ನಲ್ಲಿ ಬಂದಿದ್ದನ್ನು ಕೂಡ ಅನೇಕರು ಟೀಕಿಸಿದ್ದರು. ರೈತರು ತಮ್ಮ ಓಡಾಟಕ್ಕೆ ಕಾರು ಇಟ್ಟುಕೊಳ್ಳಬಾರದೇ? ಕಾರು ಇದ್ದ ಮಾತ್ರಕ್ಕೆ ಅವರು ರೈತರಾಗುವುದಿಲ್ಲವೇ? ಜನರ ಮನಸ್ಥಿತಿ ಹೇಗಿದೆಯೆಂದರೆ ರೈತರು ಮತ್ತು ಬಡವರು ಏಳಿಗೆ ಕಾಣಬಾರದು. ಅವರು ಮನೆ ಕಟ್ಟಿದರೆ, ವಾಹನ ಖರೀದಿಸಿದರೆ ಅದೇ ದೊಡ್ಡ ಅಪರಾಧ ಎಂಬಂತೆ ಬಿಂಬಿಸಲಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.