ಬಿಟಿ ಬಗ್ಗೆ ವಕಾಲತ್ತು; ರಾತ್ರಿ ಕಂಡ ಬಾವಿಗೆ ಹಗಲು ಬಿದ್ದ ರೈತರು...
ಇತ್ತೀಚೆಗಷ್ಟೇ ಮಹಾರಾಷ್ಟ್ರದಲ್ಲಿ HT ಹತ್ತಿ, BT ಬದನೆ ಹಾಗೂ BT ಸೋಯಾ ಬೆಳೆಯುವುದು ನಮ್ಮ ಹಕ್ಕು, ಇದು ತಂತ್ರಜ್ಞಾನ ಸ್ವಾತಂತ್ರ್ಯ ಎಂದೆಲ್ಲಾ ಬೊಬ್ಬೆ ಹೊಡೆದ ಕೆಲವು ರೈತರು ಕಾನೂನು ಬಾಹಿರವಾಗಿ ಇವುಗಳನ್ನು ಬೆಳೆಯಲು ಮುಂದಾಗಿದ್ದರು.
Recommended Video
ಅಂತೆಯೇ ಅವರು ಬಿತ್ತನೆ ಬೀಜಗಳನ್ನು ಕೊಂಡು ತಂದು ಬಿತ್ತಿದರು. ಅವು ಮೊಳೆಯಲಿಲ್ಲ. ಬೀಜಗಳು ಕಳಪೆ ಎಂಬುದು ಅರಿವಾಯಿತು. ವಿಪರ್ಯಾಸವೆಂದರೆ ಇದೀಗ ಆ ರೈತರು ಯಾರಿಗೂ ದೂರು ದಾಖಲಿಸಲೂ ಆಗುವುದಿಲ್ಲ.
ರೈತರೇ.. ಕಳೆನಾಶಕಕ್ಕೆ ಯೂರಿಯಾ ಮಿಶ್ರಣ ಬೇಡ: ಕೃಷಿ ತಜ್ಞರ ಅಭಿಪ್ರಾಯ
ಏಕೆಂದರೆ, ದೇಶದಲ್ಲಿ ಬಿ.ಟಿ ಹತ್ತಿ ಬಿಟ್ಟರೆ ಬೇರಾವ ಕುಲಾಂತರಿ ಬೆಳೆಗಳನ್ನೂ ಬೆಳೆಯಲು ಅನುಮತಿ ನೀಡಲಾಗಿಲ್ಲ. ಈಗ HT ಹತ್ತಿ, BT ಬದನೆ ಹಾಗೂ BT ಸೋಯಾ ಬಿತ್ತನೆ ಬೀಜಗಳನ್ನು ಉತ್ಪಾದಿಸಿ ಮಾರಾಟ ಮಾಡಿರುವುದು ಕಾನೂನು ರೀತ್ಯಾ ಅಪರಾಧ. ಇವುಗಳನ್ನು ಬೆಳೆವುದಕ್ಕೂ ಅವಕಾಶವಿಲ್ಲ. ಆದರೂ ಇದೆಲ್ಲಾ ದೇಶದಲ್ಲಿ ನಡೆದೇ ಇದೆ. ಗುಜರಾತ್, ಮಹಾರಾಷ್ಟ್ರ, ಹರಿಯಾಣ ಪಂಜಾಬ್ ರಾಜ್ಯಗಳಲ್ಲಿ ಇಂಥ ಕಾನೂನು ಬಾಹಿರ ಬೀಜಗಳ ಮಾರಾಟ ಹಾಗೂ ಬೆಳೆಯುವ ಪ್ರಕ್ರಿಯೆ ಎಗ್ಗಿಲ್ಲದೆ ಸಾಗಿದೆ.
ಹಗಲು ಕಂಡ ಬಾವಿಗೆ ರಾತ್ರಿ ಬೀಳುವುದು ಅನ್ನುವುದು ಇದನ್ನೇ. ಬಿ.ಟಿ ಹತ್ತಿ ಬೆಳೆದ ಮಹಾರಾಷ್ಟ್ರದ ರೈತರು (ದೇಶಾದ್ಯಂತ ಹತ್ತಿ ಬೆಳೆಗಾರರು) ಅನುಭವಿಸಿದ ಕಷ್ಟಗಳು ನಮ್ಮ ಕಣ್ಣೆದುರೇ ಇವೆ. ಸರಣಿ ಆತ್ಮಹತ್ಯಾ ಪ್ರಕರಣಗಳು ಕೂಡ ಇನ್ನೂ ನಮ್ಮ ನೆನಪಿನಿಂದ ಮಾಸಿಲ್ಲ. ಆತ್ಮಹತ್ಯೆಗಳು ಮುಂದುವರೆಯುತ್ತಿವೆ ಕೂಡ. ಆದರೂ ಮತ್ತೆ ಕುಲಾಂತರಿ ತಂತ್ರಜ್ಞಾನದ ಹಿಂದೆ ಬಿದ್ದಿರುವ ಕೆಲವೇ ರೈತರ ಹಿಂದಿನ ಉದ್ದೇಶವೇನು ಎಂಬುದನ್ನು ಪರಿಶೀಲಿಸಬೇಕಿದೆ. ಅವರು ಕಂಪನಿಗಳ ಮುಖವಾಣಿಯಾಗಿ ಕೆಲಸ ಮಾಡುತ್ತಿದ್ದಾರಾ?
ಅನುಮೋದನೆ ಇಲ್ಲದ, ಕಾನೂನು ಬಾಹಿರವಾದ ಬೀಜಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ಸರ್ಕಾರ ತತ್ ಕ್ಷಣ ಕಡಿವಾಣ ಹಾಕದಿದ್ದಲ್ಲಿ ಮುಂಬರುವ ದಿನಗಳಲ್ಲಿ ಈ ನಾಡಿನ ರೈತರು ಇನ್ನೂ ಹೆಚ್ಚಿನ ಅಪಾಯಗಳನ್ನು ಎದುರಿಸಬೇಕಾದೀತು.