ದೆಹಲಿಯ ಗಡಿ ಭಾಗಗಳಲ್ಲಿ ಪರಿಸ್ಥಿತಿ ಉದ್ವಿಗ್ನ, ಬ್ಯಾರಿಕೇಡ್ ಮುರಿದು ರೈತರ ಮೆರವಣಿಗೆ
ನವದೆಹಲಿ, ಜನವರಿ 26: ಗಣರಾಜ್ಯೋತ್ಸವ ದಿನದಂದು ರೈತರ ಪ್ರತಿಭಟನೆಗೂ ಮುನ್ನ ದೆಹಲಿಯ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನು ಒದ್ದು ಉರುಳಿಸಿದ ಪ್ರತಿಭಟನಾಕಾರರು ಮಂಗಳವಾರ ಬೆಳಿಗ್ಗೆ ಬರಿಗಾಲಲ್ಲಿ ದೆಹಲಿ ಪ್ರವೇಶಿಸಿದರು. ಬೃಹತ್ ಸಂಖ್ಯೆಯಲ್ಲಿ ನಿಯೋಜನೆಗೊಂಡಿದ್ದ ಪೊಲೀಸರು ಅವರನ್ನು ತಡೆಯಲು ಅಶ್ರುವಾಯುಗಳನ್ನು ಸಿಡಿಸಿದರು.
ದೆಹಲಿ ಮತ್ತು ಹರ್ಯಾಣ ನಡುವೆ ಇರುವ ಸಿಂಘು ಗಡಿಯಲ್ಲಿ ದೊಡ್ಡಮಟ್ಟದಲ್ಲಿ ಗದ್ದಲ ಉಂಟಾಯಿತು. ಜತೆಗೆ ದೆಹಲಿಯ ಪಶ್ಚಿಮ ಭಾಗದಲ್ಲಿನ ಟಿಕ್ರಿ ಗಡಿಯಲ್ಲಿಯೂ ಇದೇ ರೀತಿ ಸಂಘರ್ಷಮಯ ವಾತಾವರಣ ನಿರ್ಮಾಣವಾಯಿತು. ಸಾವಿರಾರು ಜನರು ಬಾವುಟಗಳನ್ನು ಹಿಡಿದು ಮೆರವಣಿಗೆ ಸಾಗಿದರೆ,ನೂರಾರು ಟ್ರ್ಯಾಕ್ಟರ್ಗಳು ಒಳನುಗ್ಗಿದವು.
ಕೃಷಿ ಕಾಯ್ದೆಗೆ ವಿರೋಧ: ಬಜೆಟ್ ದಿನದಂದು ರೈತರಿಂದ ಕಾಲ್ನಡಿಗೆ ಮೆರವಣಿಗೆ
ದೆಹಲಿಯ ರಾಜಪಥದಲ್ಲಿ ಗಣರಾಜ್ಯೋತ್ಸವ ಪಥಸಂಚಲನ ಮುಗಿದ ಬಳಿಕ ಮಧ್ಯಾಹ್ನ 12 ಗಂಟೆ ನಂತರ ರೈತರ ಟ್ರ್ಯಾಕ್ಟರ್ ಮೆರವಣಿಗೆಗೆ ಅನುಮತಿ ನೀಡಲಾಗಿತ್ತು. ಆದರೆ ಬೆಳಿಗ್ಗೆ ಎಂಟು ಗಂಟೆಯ ಸುಮಾರಿಗೇ ಗಡಿಯಲ್ಲಿ ಬೃಹತ್ ಸಂಖ್ಯೆಯಲ್ಲಿ ರೈತರು ಸೇರಿದ್ದರು. ಮುಂದೆ ಓದಿ.
ಗಡಿಗಳಲ್ಲಿ ಮೆರವಣಿಗೆ
ಸಿಂಘು ಗಡಿಯಲ್ಲಿ ಐದು ಸಾವಿರಕ್ಕೂ ಅಧಿಕ ಪ್ರತಿಭಟನಾಕಾರರು ಗಡಿ ದಾಡಿ ಮೆರವಣಿಗೆ ಸಾಗಲು ಪಟ್ಟುಹಿಡಿದರು. ಟಿಕ್ರಿಯಲ್ಲಿ ಬೆಳಿಗ್ಗೆ ಒಂಬತ್ತು ಗಂಟೆಗೆ ಮೆರವಣಿಗೆ ಆರಂಭವಾಗಿದ್ದು, ಶಾಂತಿ ಕಾಪಾಡುವಂತೆ ರೈತ ಮುಖಂಡರು ಮನವಿ ಮಾಡಿದರು. ಮೆರವಣಿಗೆ ಸಮಯ ನಿರ್ಧರಿಸಲು ರೈತ ಮುಖಂಡರು ಪೊಲೀಸರ ಜತೆ ಸಭೆ ನಡೆಸಿದರು. ಪಂಜಾಬ್ನ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಬ್ಯಾರಿಕೇಡ್ ಮುರಿದು ದೆಹಲಿ ಪ್ರವೇಶಿಸಿತು.
|
ಪೊಲೀಸ್ ವಾಹನಗಳ ಮೇಲೆ ದಾಳಿ
ದೆಹಲಿಯ ಮುಕಾರ್ಬಾ ಚೌಕದಲ್ಲಿ ಬ್ಯಾರಿಕೇಡ್ಗಳನ್ನು ಮುರಿಯಲು ಪ್ರಯತ್ನಿಸಿದ ರೈತರ ಮೇಲೆ ಪೊಲೀಸರು ಅಶ್ರುವಾಯು ಸಿಡಿಸಿದರು. ಕಾಂಝ್ವಾಲಾ ಕಡೆಗೆ ಹೊರಟಿದ್ದ ರೈತರು, ಮುಕಾರ್ಬಾ ಚೌಕದಿಂದ ವರ್ತುಲ ರಸ್ತೆ ಕಡೆಗೆ ಮೆರವಣಿಗೆ ಬದಲಿಸಿದರು. ಈ ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿ ಪೊಲೀಸ್ ವಾಹನಗಳು, ಏಳು ಬಸ್ಗಳ ಕಿಟಕಿ ಗಾಜುಗಳನ್ನು ಒಡೆಯಲಾಗಿದೆ. ಪೊಲೀಸರ ಮೇಲೆ ಕೂಡ ದಾಳಿಗಳಾಗಿವೆ. ಪೊಲೀಸರ ಜಲಫಿರಂಗಿ ವಾಹನಗಳ ಮೇಲೆ ಹತ್ತಿ ಪ್ರತಿಭಟನೆ ನಡೆಸಿದರು.
ಟ್ರ್ಯಾಕ್ಟರ್ ಮೆರವಣಿಗೆ: ರೈತರ ಟ್ರಾಕ್ಟರ್ v/s ಪೊಲೀಸರ ಲಾಠಿ !
|
ಬ್ಯಾರಿಕೇಡ್ ತೆರವು
ಕರ್ನಾಲ್ ಬೈಪಾಸ್ನಲ್ಲಿ ಸಹ ಪ್ರತಿಭಟನಾಕಾರರು ಪೊಲೀಸರ ಬ್ಯಾರಿಕೇಡ್ಗಳನ್ನು ಮುರಿದು ಬಲವಂತವಾಗಿ ದೆಹಲಿಯೊಳಗೆ ಟ್ರ್ಯಾಕ್ಟರ್ ಮೆರವಣಿಗೆ ಆರಂಭಿಸಿದರು. ದೊಣ್ಣೆ, ಕೋಲುಗಳನ್ನು ಬಳಸಿ ವಾಹನಗಳ ಮೇಲೆ ದಾಳಿ ನಡೆಸಿದ ಪ್ರತಿಭಟನಾಕಾರರು, ಬ್ಯಾರಿಕೇಡ್ಗಳನ್ನು ಎಳೆದು ಕೆಳಗೆ ನೂಕಿದರು. ಬಳಿಕ ಅವುಗಳನ್ನು ಪಕ್ಕಕ್ಕೆ ಎಳೆದು ಹಾಕಿ ರಸ್ತೆಯಲ್ಲಿ ಟ್ರ್ಯಾಕ್ಟರ್ ಸಾಗುವಂತೆ ಮಾಡಿದರು.
|
ಪೊಲೀಸರ 37 ಷರತ್ತುಗಳು
ಗಣರಾಜ್ಯ ದಿನದಂದು ದೆಹಲಿಯ ಕೆಲವು ನಿರ್ದಿಷ್ಟ ಮಾರ್ಗಗಳಲ್ಲಿ ಟ್ರ್ಯಾಕ್ಟರ್ ಪೆರೇಡ್ ನಡೆಸಲು ದೆಹಲಿಪೊಲೀಸರು 37 ಷರತ್ತುಗಳನ್ನು ವಿಧಿಸಿದ್ದರು. ಶಾಂತಿಯುತ ಪ್ರತಿಭಟನೆ, ನಿರ್ದಿಷ್ಟ ಸಮಯ ಮತ್ತು ಸ್ಥಳ ಹಾಗೂ ಪಾಳ್ಗೊಳ್ಳುವಿಕೆಯ ಮಿತಿ ಹೇರಿದ್ದರು. ಆದರೆ, ಅವರು ನೀಡಿದ ಸಮಯಕ್ಕೂ ಮುನ್ನವೇ ರೈತರು ಬ್ಯಾರಿಕೇಡ್ಗಳನ್ನು ಮುರಿದು ಒಳಗೆ ಪ್ರವೇಶಿಸಿದರು.