"ರೈತರು ಆಕ್ರಮಣಕಾರಿಯಾಗಿ ನುಗ್ಗಿದರು, ಆಸ್ತಿಪಾಸ್ತಿ ನಾಶ ಮಾಡಿದರು"
ನವದೆಹಲಿ, ಫೆಬ್ರುವರಿ 02: ಸಾವಿರಾರು ಟ್ರ್ಯಾಕ್ಟರ್ ಗಳೊಂದಿಗೆ ಬೃಹತ್ ಮಟ್ಟದಲ್ಲಿ ಜಮಾಯಿಸಿದ ಪ್ರತಿಭಟನಾನಿರತ ರೈತರು ಆಕ್ರಮಣಕಾರಿಯಾಗಿ ದೆಹಲಿಯೊಳಗೆ ನುಗ್ಗಿದರು. ಪೊಲೀಸ್ ಬ್ಯಾರಿಕೇಡ್ ಗಳನ್ನು ಮುರಿದು ಗಲಭೆಗೆ ಮುಂದಾದರು ಎಂದು ಗೃಹ ಸಚಿವಾಲಯ ಮಂಗಳವಾರ ಆರೋಪಿಸಿದೆ.
ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ಜಾಥಾ ವೇಳೆ ನಡೆದ ಗಲಭೆಗೆ ಸಂಬಂಧಿಸಿದಂತೆ ಮಂಗಳವಾರ ಗೃಹ ವ್ಯವಹಾರಗಳ ಸಚಿವಾಲಯವು ರೈತರ ನಡೆ ಕುರಿತು ಆರೋಪ ಮಾಡಿದೆ. ರೈತರೆಲ್ಲರೂ ಅಂದು ಆಕ್ರಮಣಕಾರಿಯಾಗಿ ದೆಹಲಿ ಒಳಗೆ ನುಗ್ಗಲು ಪ್ರಯತ್ನಿಸಿದರು. ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ಮುರಿದು ಬಂದರು. ಹೀಗಾಗಿಯೇ ದೊಡ್ಡ ಮಟ್ಟದಲ್ಲಿ ಗಲಭೆ ನಡೆಯಿತು. ಸರ್ಕಾರದ ಆಸ್ತಿಪಾಸ್ತಿಗೆ ಸಾಕಷ್ಟು ಹಾನಿಯಾಗಿದೆ ಎಂದು ತಿಳಿಸಿದೆ.
ಸೇತುವೆ ಕಟ್ಟಿ, ಗೋಡೆಯನ್ನಲ್ಲ; ರಾಹುಲ್ ಗಾಂಧಿ ಸಲಹೆ
ಇಷ್ಟಲ್ಲದೇ ಸಾರ್ವಜನಿಕ ಸೇವೆಯಲ್ಲಿರುವವರ ಕರ್ತವ್ಯಕ್ಕೂ ರೈತರು ಅಡ್ಡಿಪಡಿಸಿದ್ದಾರೆ. ಈ ಘಟನೆಯಿಂದಾಗಿ ನೂರಾರು ಪೊಲೀಸರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.
ಗಣರಾಜ್ಯೋತ್ಸವದಂದು ನಡೆದ ಘಟನೆ ನಂತರ ಕೆಲವು ರೈತ ಸಂಘಗಳು ಪ್ರತಿಭಟನೆಯಿಂದ ಹಿಂದೆ ಸರಿದವು. ಆದರೆ ಇನ್ನಷ್ಟು ರೈತ ಸಂಘಗಳು ಪಟ್ಟು ಬಿಡದೇ ಪ್ರತಿಭಟನೆ ಮುಂದುವರೆಸಿವೆ. ಹೋರಾಟ ಹೆಚ್ಚಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ ಗಡಿ ಪ್ರದೇಶಗಳಲ್ಲಿ ರೈತರನ್ನು ತಡೆಯುವುದಕ್ಕೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಕೇಂದ್ರ ಸರ್ಕಾರ ಸೆಪ್ಟೆಂಬರ್ ತಿಂಗಳಿನಲ್ಲಿ ಜಾರಿಗೊಳಿಸಿರುವ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ನವೆಂಬರ್ 26ರಿಂದಲೂ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.