ದೆಹಲಿಗೆ ಬರಲು ಅವಕಾಶ ನೀಡಿ: ಮೋದಿಗೆ ರೈತರ ಪತ್ರ
ಚಂಡೀಗಡ, ನವೆಂಬರ್ 27: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವ ರೈತರು ಮತ್ತು ಅವರಿಗೆ ತಡೆಯೊಡ್ಡುತ್ತಿರುವ ಪೊಲೀಸರ ನಡುವಿನ ಸಂಘರ್ಷ ಶುಕ್ರವಾರವೂ ಮುಂದುವರಿದಿದೆ. ಪಂಜಾಬ್ ಮತ್ತು ಹರಿಯಾಣದಿಂದ ಬಂದ ಸಾವಿರಾರು ರೈತರು ಪಾಣಿಪತ್ನಲ್ಲಿ ಸೇರಿದ್ದು, ಅಲ್ಲಿಂದ ಜತೆಯಾಗಿ ರಾಜಧಾನಿ ದೆಹಲಿಯತ್ತ ಹೊರಡುತ್ತಿದ್ದಾರೆ.
ಈ ನಡುವೆ ರೈತ ಸಂಘಟನೆಗಳು ದೆಹಲಿ ಪ್ರವೇಶಿಸಿ ರಾಮಲೀಲಾ ಮೈದಾನದಲ್ಲಿ ಕುಳಿತು ಪ್ರತಿಭಟನೆ ನಡೆಸಲು ಮತ್ತು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಅವಕಾಶ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಯಮುನಾ ಎಕ್ಸ್ಪ್ರೆಸ್ ವೇನಲ್ಲಿ ರೈತರು ರಸ್ತೆ ತಡೆ ನಡೆಸಿರುವುದರಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ. ರೈತರು ದೆಹಲಿ ಪ್ರವೇಶಿಸದಂತೆ ತಡೆಯಲು ಸಿಂಘು ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಗುರುವಾರ ಸಂಜೆಯಿಂದಲೂ ಇಲ್ಲಿ ವಾಹನಗಳ ಓಡಾಟಕ್ಕೆ ಅನುಮತಿ ನೀಡಿಲ್ಲ. ಶುಕ್ರವಾರ ಬೆಳಿಗ್ಗೆ ಪೊಲೀಸರು ಟಿಕ್ರಿ ಗಡಿಯನ್ನು ಸಹ ಮುಚ್ಚಿದ್ದಾರೆ.
The #Farmers have broken through the #Sonipat barricade.
— Anand Mangnale (@FightAnand) November 27, 2020
They pushed away the containers, filled the holes, removed cement structures & created a road despite police using water cannon. @mlkhattar is done now it's @narendramod at the Delhi Haryana Kundli border. #DelhiChalo pic.twitter.com/POr9cXqBQJ
ಎಲ್ಲ ಅಡೆತಡೆಗಳನ್ನೂ ಮೀರಿ ರೈತರು ದೆಹಲಿ ಪ್ರವೇಶಿಸುವ ಸಾಧ್ಯತೆ ಇರುವುದರಿಂದ ರಾಜ್ಯದಲ್ಲಿನ ಒಂಬತ್ತು ವಿವಿಧ ಕ್ರೀಡಾಂಗಣಗಳನ್ನು ತಾತ್ಕಾಲಿಕ ಜೈಲುಗಳನ್ನಾಗಿ ಪರಿವರ್ತಿಸಲು ಅನುಮತಿ ನೀಡುವಂತೆ ದೆಹಲಿ ಪೊಲೀಸರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ ರೈತರ ಹಕ್ಕುಗಳನ್ನು ಸಮರ್ಥಿಸಿಕೊಂಡಿರುವ ಎಎಪಿ ರಾಷ್ಟ್ರೀಯ ವಕ್ತಾರ, ರಾಘವ್ ಛಡ್ಡಾ ತಾತ್ಕಾಲಿಕ ಜೈಲುಗಳನ್ನು ನಿರ್ಮಿಸುವ ಪ್ರಸ್ತಾಪವನ್ನು ವಿರೋಧಿಸಿದ್ದಾರೆ.