ಕೃಷಿ ಕಾಯ್ದೆ; ಸರ್ಕಾರದ ಜೊತೆ ಮಾತುಕತೆಗೆ ದಿನ ನಿಗದಿ ಮಾಡಿದ ರೈತಸಂಘ
ನವದೆಹಲಿ, ಡಿಸೆಂಬರ್ 26: ಕೃಷಿ ಕಾಯ್ದೆಗಳ ಕುರಿತು ಮಾತುಕತೆಗೆ ಪ್ರಧಾನಿ ಮೋದಿ ಕರೆಗೆ ಉತ್ತರಿಸಿರುವ ರೈತ ಸಂಘಟನೆಗಳು, ಮಾತುಕತೆಗೆ ದಿನಾಂಕ ನಿಗದಿ ಮಾಡಿವೆ. ಡಿ.29ರಂದು ಮಾತುಕತೆ ನಡೆಸಬಹುದು ಎಂದು ಸರ್ಕಾರಕ್ಕೆ ಪತ್ರ ಬರೆದಿವೆ.
ಶುಕ್ರವಾರ ರೈತರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಬಿಕ್ಕಟ್ಟು ಕೊನೆಗೊಳಿಸಲು ಮಾತುಕತೆಗೆ ಆಹ್ವಾನ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಶನಿವಾರ ಮಧ್ಯಾಹ್ನ ರೈತ ಸಂಘ ಸಭೆ ನಡೆಸಿದ್ದು, ಆರನೇ ಸುತ್ತಿನ ಮಾತುಕತೆಗೆ ಡಿ. 29ಕ್ಕೆ ದಿನಾಂಕ ಮಾಡಿವೆ.
ಮಾತುಕತೆಗೆ ಮೋದಿ ಕರೆ; ರೈತರ ಮುಂದಿನ ನಡೆಯೇನು?
"ಆರನೇ ಸುತ್ತಿನ ಮಾತುಕತೆ ನಡೆಸಲು ಸರ್ಕಾರದ ಮುಂದೆ ಪ್ರಸ್ತಾವ ಇಟ್ಟಿದ್ದೇವೆ. ಡಿ.29ರ ಮಂಗಳವಾರ, ಬೆಳಿಗ್ಗೆ 11 ಗಂಟೆಗೆ ಮಾತುಕತೆ ನಡೆಸಬಹುದು ಎಂದು ತಿಳಿಸಿದ್ದೇವೆ" ಎಂದು ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ ತಿಳಿಸಿದ್ದಾರೆ. ಸರ್ಕಾರದೊಂದಿಗೆ ಕಾಯ್ದೆ ಕುರಿತು ನಾಲ್ಕು ಅಂಶಗಳನ್ನು ಮುಂದಿನ ವಾರ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಗುರುವಾರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರ್ ವಾಲ್ ಪತ್ರ ಬರೆದಿದ್ದು, ರೈತರಿಗೆ ಮಾತುಕತೆಗೆ ದಿನಾಂಕ ನಿಗದಿಪಡಿಸುವಂತೆ ಮನವಿ ಮಾಡಿದ್ದರು. ಹೊಸ ಕಾರ್ಯಸೂಚಿಯೊಂದಿಗೆ ಸರ್ಕಾರ ಮುಂದೆ ಬರುವವರೆಗೂ ಮಾತುಕತೆ ನಡೆಸಿದರೆ ಪ್ರಯೋಜನವಿಲ್ಲ ಎಂದು ರೈತ ಸಂಘಗಳು ತಿರಸ್ಕರಿಸಿದ್ದವು. ನಂತರ ಶುಕ್ರವಾರ ಮೋದಿ ರೈತರನ್ನುದ್ದೇಶಿಸಿ ಮಾತನಾಡಿ, ಮಾತುಕತೆಗೆ ಬರುವಂತೆ ಕರೆ ನೀಡಿದ್ದರು. ಇದೀಗ ರೈತ ಸಂಘಗಳು ಮಾತುಕತೆಗೆ ದಿನ ನಿಗದಿ ಮಾಡಿವೆ.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಕೈಗೊಂಡಿರುವ ಪ್ರತಿಭಟನೆ ಶನಿವಾರ 31ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಈ ಬಿಕ್ಕಟ್ಟನ್ನು ಕೊನೆಗೊಳಿಸಬೇಕೆಂದು ಸರ್ಕಾರದ ಮೇಲೆ ಒತ್ತಡವೂ ಹೆಚ್ಚಾಗಿದೆ.