ಟ್ರ್ಯಾಕ್ಟರ್ ಮೆರವಣಿಗೆ: ರೈತರಿಗೆ ಡೀಸೆಲ್ ನೀಡದಂತೆ ಪೊಲೀಸರ ಸೂಚನೆ
ಘಾಜಿಪುರ್, ಜನವರಿ 25: ಟ್ರ್ಯಾಕ್ಟರ್ಗಳಿಗೆ ಡೀಸೆಲ್ ಹಾಕದಂತೆ ಪೆಟ್ರೋಲ್ ಪಂಪ್ಗಳಿಗೆ ಉತ್ತರ ಪ್ರದೇಶದ ಘಾಜಿಪುರ್ ಜಿಲ್ಲೆಯ ಪೊಲೀಸರು ನೋಟಿಸ್ ನೀಡಿದ್ದು ವಿವಾದ ಸೃಷ್ಟಿಸಿದೆ. ವಿವಾದದ ಬಳಿಕ ಪೊಲೀಸರು ನೋಟಿಸ್ ಅನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.
ಜನವರಿ 26ರಂದು ನಡೆಯುವ ಟ್ರ್ಯಾಕ್ಟರ್ ಜಾಥಾದಲ್ಲಿ ಭಾಗವಹಿಸದಂತೆ ರೈತರನ್ನು ತಡೆದು ಅವರನ್ನು ಗೃಹಬಂಧನಲ್ಲಿ ಇರಿಸಲಾಗುತ್ತಿದೆ ಎಂಬ ವರದಿಯನ್ನು ಸಮಾಜವಾದಿ ಪಕ್ಷ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ತಾಯಿಗೆ ರೈತನ ಭಾವುಕ ಪತ್ರ
'ಬಿಜೆಪಿ ಸರ್ಕಾರವು ಪೂರ್ವಾಂಚಲದ ರೈತರನ್ನು ಗೃಹಬಂಧನದಲ್ಲಿ ಇರಿಸುತ್ತಿದೆ. ಅವರಿಗೆ ಡೀಸೆಲ್ ನೀಡದಂತೆ ಪೆಟ್ರೋಲ್ ಪಂಪ್ಗಳನ್ನು ತಡೆಯುತ್ತಿದೆ. ಕಾರ್ಪೊರೇಟ್ಗಳ ಪ್ರಯೋಜನಕ್ಕಾಗಿ ಕುರುಡು ಸರ್ಕಾರವು ಅನ್ನದಾತರ ಮೇಲೆ ಎಲ್ಲ ರೀತಿಯ ದಬ್ಬಾಳಿಕೆಗಳನ್ನು ಮಾಡುತ್ತಿದೆ' ಎಂದು ಅದು ಆರೋಪಿಸಿದೆ.
'ಮಹಾ' ಸುದ್ದಿ: ಕೃಷಿ ಕಾಯ್ದೆ ವಿರುದ್ಧ ದಕ್ಷಿಣದಲ್ಲೂ ಧಿಕ್ಕಾರದ ಕೂಗು!
ಇದಕ್ಕೂ ಮುನ್ನ ಘಾಜಿಪುರ ಪೊಲೀಸರು, ರೈತರ ಪಥಸಂಚಲನದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹೀಗಾಗಿ ರೈತರಿಗೆ ಡೀಸೆಲ್ ನೀಡಬಾರದು ಎಂದು ನೋಟಿಸ್ ನೀಡಿದ್ದರು. ಈ ನೋಟಿಸ್ಗಳನ್ನು ಪೆಟ್ರೋಲ್ ಪಂಪ್ಗಳಲ್ಲಿ ಅಂಟಿಸಲಾಗಿತ್ತು. ಮುಂದೆ ಓದಿ.
ಗಣರಾಜ್ಯೋತ್ಸವದ ಬಳಿಕ ಜಾಥಾ
ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಶಾಂತಿಯುತ ಟ್ರ್ಯಾಕ್ಟರ್ ಮೆರವಣಿಗೆ ನಡೆಸಲು ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ. ಸಿಂಘು, ಟಿಕ್ರಿ ಮತ್ತು ಘಾಜಿಪುರ ಗಡಿ ಭಾಗಗಳಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ನಡೆಯಲಿದೆ ಅದಕ್ಕೆ ಸೂಕ್ತ ಭದ್ರತೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
250ಕಿಮೀ ಉದ್ದದ ಮೆರವಣಿಗೆ
ಘಾಜಿಪುರ ಗಡಿಯಿಂದ 50 ಕಿಮೀ, ಸಿಂಘು ಗಡಿಯಿಂದ 100 ಕಿಮೀ ಮತ್ತು ಟಿಕ್ರಿ ಗಡಿಯಿಂದ 125 ಕಿಮೀ ಉದ್ದದಷ್ಟು ದೂರ ಟ್ರ್ಯಾಕ್ಟರ್ ಮೆರವಣಿಗೆ ನಡೆಯಲಿದೆ. ಎರಡೂವರೆ ಮಿಲಿಯನ್ ಟ್ರ್ಯಾಕ್ಟರ್ಗಳು ದೆಹಲಿಗೆ ಬರಲಿವೆ. ಈ ಸಂದರ್ಭದಲ್ಲಿನ ಭದ್ರತಾ ವ್ಯವಸ್ಥೆಗಳನ್ನು ನೋಡಿಕೊಳ್ಳಲು ರೈತರು ಖಾಸಗಿ ಸಂಸ್ಥೆಯೊಂದನ್ನು ಬಳಸಿಕೊಂಡಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಜ.26ರ ರೈತರ ಟ್ರಾಕ್ಟರ್ ಜಾಥಾಕ್ಕೆ ದೆಹಲಿ ಪೊಲೀಸರ ಅನುಮತಿ
ರೈತರೇ ಹೊಣೆಗಾರರು
ತುರ್ತು ಪರಿಸ್ಥಿತಿ ನಿರ್ವಹಣೆಗೆ 40 ಆಂಬುಲೆನ್ಸ್ಗಳನ್ನು ಸಿದ್ಧವಾಗಿರಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಸುಮಾರು 3,000 ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ಅವರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ. ಮೆರವಣಿಗೆ ವೇಳೆ ಯಾವುದೇ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಘಟನೆ ನಡೆದರೆ ಅದಕ್ಕೆ ರೈತರೇ ಹೊಣೆಗಾರರು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಗದ್ದಲಕ್ಕೆ ಪಾಕ್ ಪ್ರಯತ್ನ
ದೆಹಲಿಯಲ್ಲಿ ಗಣರಾಜ್ಯೋತ್ಸವ ಪಥಸಂಚಲನ ಮುಗಿದ ಬಳಿಕವೇ ರೈತರು ಟ್ರ್ಯಾಕ್ಟರ್ ಮೆರವಣಿಗೆ ನಡೆಸಲು ಅವಕಾಶ ನೀಡಲಾಗಿದೆ. ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಮೆರವಣಿಗೆ ಆರಂಭವಾಗಲಿದೆ. ಜ. 26ರ ಮೆರವಣಿಗೆ ಸಂದರ್ಭದಲ್ಲಿ ಗದ್ದಲ ಮತ್ತು ಹಿಂಸಾಚಾರ ನಡೆಸಲು ಪಾಕಿಸ್ತಾನ ಮೂಲದ ಸುಮಾರು 308 ಟ್ವಿಟ್ಟರ್ ಖಾತೆಗಳು ಕಾರ್ಯನಿರತವಾಗಿರುವುದಾಗಿ ದೆಹಲಿಪೊಲೀಸರು ತಿಳಿಸಿದ್ದಾರೆ.