ದಿಲ್ಲಿಯ ರೈತ ಹೋರಾಟ: ಫೆ.18 ರಂದು ರೈಲು ತಡೆ ಚಳವಳಿ
ಕೇಂದ್ರ ಸರ್ಕಾರ ಹೊಸದಾಗಿ ತಂದಿರುವ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯಬೇಕೆಂದು ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ದಿಲ್ಲಿಯ ರೈತ ಹೋರಾಟ ಹಲವು ಸವಾಲುಗಳನ್ನು ಎದುರಿಸುತ್ತಿದೆ.
ದೃಢ ಸಂಕಲ್ಪದೊಂದಿಗೆ ಪ್ರತಿಭಟನೆ ಮುಂದುವರೆಯುತ್ತಿದೆ. ಕೇಂದ್ರದೊಡನೆ ಹಲವು ಸುತ್ತಿನ ಮಾತುಕತೆಗಳು ಫಲ ಕಾಣಲಿಲ್ಲ. ಈ ಹಿನ್ನೆಲೆಯಲ್ಲಿ ರೈತ ಹೋರಾಟ ಇನ್ನಷ್ಟು ತೀವ್ರಗೊಳ್ಳುತ್ತಿದೆ.
ಕೆಂಪು ಕೋಟೆ ಮೇಲೆ ಕತ್ತಿವರಸೆ; ದೆಹಲಿ ಗಲಭೆ ಆರೋಪಿ ಬಂಧನ
ಈ ಹಿನ್ನೆಲೆಯಲ್ಲಿ ನಾಳೆ ಗುರುವಾರ (ಫೆ.18)ದಂದು ಸಂಯುಕ್ತ ಕಿಸಾನ್ ಮೋರ್ಚಾ ರೈಲು ತಡೆ ಚಳುವಳಿಗೆ ಕರೆ ನೀಡಿದೆ. ಜೊತೆಗೆ ಭಾರತೀಯ ಕಿಸಾನ್ ಯೂನಿಯನ್ ಬರ್ನಾಲದ ಮಾರುಕಟ್ಟೆಯಲ್ಲಿ ರೈತ ಮತ್ತು ಕಾರ್ಮಿಕರ ಜಾಥಾವನ್ನು ಫೆಬ್ರವರಿ 21 ರಂದು ನಡೆಸುವುದಾಗಿ ಹೇಳಿದೆ.
ಈ ಜಾಥಾದಲ್ಲಿ ಎರಡು ಲಕ್ಷ ರೈತರು ಮತ್ತು ರೈತ ಕಾರ್ಮಿಕರು ಭಾಗಿಯಾಗುವ ಸಾಧ್ಯತೆ ಇದೆ ಎಂದು ಸಂಘಟನೆ ತಿಳಿಸಿದೆ. ಕೃಷಿ ಕಾನೂನುಗಳನ್ನು ಹಿಂಪಡೆಯಲು ಆಗ್ರಹಿಸಿ ಆರಂಭವಾದ ದಿಲ್ಲಿ ಚಲೋದ ಭಾಗವಾದ ಈ ರ್ಯಾಲಿಯು ಪಂಜಾಬ್ ರಾಜ್ಯದಲ್ಲಿ ಅತ್ಯಂತ ದೊಡ್ಡ ರ್ಯಾಲಿಯಾಗಲಿದೆ ಎಂದು ಸಂಘಟಕರು ಹೇಳಿಕೊಂಡಿದ್ದಾರೆ.
ಈ ಜಾಥಾ ಮೂರು ಕರಾಳ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದರ ಜೊತೆಗೆ ಚಳವಳಿಯನ್ನು ಹತ್ತಿಕ್ಕುವ ಭಾಜಪದ ಕುತಂತ್ರಗಳನ್ನು ಬಯಲಿಗೆಳೆಯಲಿದೆ ಮತ್ತು ಈ ಕಾನೂನುಗಳಿಂದ ಭೂರಹಿತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಆಗುವ ಅಪಾಯವೇನೂ ಎಂಬುದನ್ನೂ ಮನವರಿಕೆ ಮಾಡಿಕೊಡಲಾಗುವುದು ಎಂದು ಕೇತ್ ಮಜ್ದೂರ್ ಯೂನಿಯನ್ ಮತ್ತು ಬಿ.ಕೆ.ಯು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿವೆ.